ಕುಣಿಗಲ್: ಹತ್ತು ವರ್ಷಗಳ ನಂತರ ಪುರಾಣ ಪ್ರಸಿದ್ದ ಕುಣಿಗಲ್ ದೊಡ್ಡಕೆರೆ ಕೋಡಿಯಾಗಿದ್ದು, ಕೋಡಿ ನೋಡಲು ನಾಗರೀಕರು ಮುಗಿಬಿದ್ದರಲ್ಲದೆ, ಹೊಸವರ್ಷದ ದಿನವನ್ನು ಸ್ಮರಣೀಯಗೊಳಿಸಲು ಕೋಡಿಪ್ರದೇಶ ಫೋಟೋ, ಸೆಲ್ಫಿ ತಾಣವಾಯಿತು.
2011ರಲ್ಲಿ ಅಂದಿನ ಶಾಸಕ ಬಿ.ಬಿ.ರಾಮಸ್ವಾಮಿಗೌಡರ ಅವಧಿಯಲ್ಲಿ ಕೋಡಿಯಾಗಿದ್ದು, 2012ರಲ್ಲಿ ಇನ್ನೇನು ಕೋಡಿಯಾಗುವ ಹಂತಕ್ಕೆ ಬಂದು ನಿಂತುಹೋಗಿತ್ತು, ದೊಡ್ಡಕೆರೆ ಕೋಡಿಯಾದ ಬಗ್ಗೆ ತಾಲೂಕಿನ ಮೂರು ಪ್ರಮುಖ ಪಕ್ಷಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ತಮ್ಮದೆ ವಾದ ಮಂಡಿಸುತ್ತಾ ಕೆರೆ ತುಂಬಿಸಿದ ಕೀರ್ತಿ ತಮ್ಮ ಪಕ್ಷಕ್ಕೆ ಸಲ್ಲಬೇಕೆಂಬ ಚರ್ಚೆಗೆ ಇಳಿದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್ ಜಿಲ್ಲಾಡಳಿತ ಸೇರಿದಂತೆ ತಾಲೂಕಿಗೆ ಮುಖ್ಯಮಂತ್ರಿ, ಉಸ್ತುವಾರಿ ಮಂತ್ರಿ ಭೇಟಿ ನೀಡಿದಾಗ ಸತತ ಒತ್ತಡ ಹಾಕಿದ್ದರ ಪರಿಣಾಮವೆ ದೊಡ್ಡಕೆರೆ ಕೋಡಿಯಾಗಿರುವುದು ಸೇರಿದಂತೆ 25 ವರ್ಷಗಳಿಂದ ವಿವಿಧ ಹೋಬಳಿಗಳಲ್ಲಿ ತುಂಬದೆ ಇದ್ದ ಕೆರೆಗಳನ್ನು ತುಂಬಿಸಿ ಕೋಡಿಯಾಗಿಸಿದ್ದಾರೆ ಎಂದಿದ್ದರೆ, ಬಿಜೆಪಿ ಕಾರ್ಯಕರ್ತರು ಈ ಹಿಂದೆಯೂ ಕಾಂಗ್ರೆಸ್ ಶಾಸಕ ಬಿಜೆಪಿ ಸರ್ಕಾರ, ಈಗಲೂ ಕಾಂಗ್ರೆಸ್ ಶಾಸಕ ಬಿಜೆಪಿ ಸರ್ಕಾರ, ದೊಡ್ಡಕೆರೆ ತುಂಬಿಸಲು ಬಿಜೆಪಿ ಸರ್ಕಾರವೇ ಬರಬೇಕಾಯಿತು, ಈಬಾರಿಯೂ ಜನಪ್ರತಿನಿಧಿಯೊಬ್ಬರು ದೊಡ್ಡಕೆರೆ ತುಂಬಿಸುವುದು ಬೇಡ ಎಂದು ಪಟ್ಟು ಹಿಡಿದಿದ್ದರು, ಆದರೆ ಉಸ್ತುವಾರಿ ಸಚಿವ ಮಾಧುಸ್ವಾಮಿಯವರು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮನವಿಗೆ ಸ್ಪಂದಿಸಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ದೊಡ್ಡಕೆರೆ ಸೇರಿದಂತೆ ಇತರೆ ಕೆರೆಗಳನ್ನು ಕೋಡಿ ಮಾಡಿಸಿದ್ದಾರೆ. ಲಿಂಕ್ ಕೆನಾಲ್ ಇಲ್ಲದೆ ನೀರೆ ಬರುವುದಿಲ್ಲ ಎನ್ನುವವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ವಾದ ಮಂಡಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರು, ಅತಿವೃಷಿಯಿಂದ ಇತರೆ ತಾಲೂಕುಗಳಲ್ಲೂ ನೀರು ಸಂಗ್ರಹ ಇದ್ದು ತಾಲೂಕಿಗೆ ಹೆಚ್ಚಿನ ಪ್ರಮಾಣದ ಹೇಮೆ ನೀರು ಬಂದಿದೆ, ಲಿಂಕ್ ಕೆನಾಲ್ ಇಲ್ಲದೆ ಸಮರ್ಪಕ ನೀರು ಹರಿಸಲು ಸಾಧ್ಯವಾಗಿದೆ. ದೊಡ್ಡಕೆರೆ ತುಂಬಿದೆ, ಆದರೆ 18 ವರ್ಷವಾಗಿದೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಟ್ಟು, ಇನ್ನಾದರೂ ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಟ್ಟು ರೈತರಿಗೆ ಸಹಾಯ ಮಾಡಲಿ ಎಂದಿದ್ದಾರೆ. ಕೆರೆ ಯಾವ ಪಕ್ಷದ ಶ್ರಮದಿಂದ ತುಂಬಿದೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದ ನಾಗರಿಕರು ಹೊಸ ವರ್ಷದ ಮೊದಲ ದಿನವನ್ನು ಸ್ಮರಣೀಯಗೊಳಿಸಲು ಕೋಡಿ ಪ್ರದೇಶದಲ್ಲಿ ಸೆಲ್ಪಿ, ವೀಡಿಯೋ ಮಾಡಿಕೊಳ್ಳಲು ಮುಗಿಬಿದ್ದರು.
Get real time updates directly on you device, subscribe now.
Prev Post
Next Post
Comments are closed.