ತುಮಕೂರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ನನ್ನ ಆದ್ಯತೆ

162

Get real time updates directly on you device, subscribe now.

ತುಮಕೂರು: ತುಮಕೂರು ನಗರ ಬೆಂಗಳೂರಿಗೆ ಪರ್ಯಾಯ ನಗರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಸ್ಮಾರ್ಟ್‌ಸಿಟಿ ಯೋಜನೆ ತುಮಕೂರು ನಗರಕ್ಕೆ ವರದಾನವಾಗಿ ಹಂತ ಹಂತವಾಗಿ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ ಎಂದು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.
ಇಲ್ಲಿನ ಕುವೆಂಪುನಗರದ ಕುವೆಂಪು ವೃತ್ತದಲ್ಲಿ ಕುವೆಂಪುನಗರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ವಿಶ್ವಮಾನವ ಕುವೆಂಪು ಅವರ 117ನೇ ಜನ್ಮ ದಿನೋತ್ಸವ ಮತ್ತು 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ತುಮಕೂರು ನಗರ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದ್ದು, ನಗರಕ್ಕೆ ಅಗತ್ಯವಾಗಿ ಬೇಕಾಗಿರುವ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಈಗಾಗಲೇ ಅಮಾನಿಕೆರೆಗೆ ನೀರು ಹರಿಸಲಾಗಿದೆ. ಮರಳೂರು ಮತ್ತು ಗಂಗಸಂದ್ರ ಕೆರೆಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ನೀರು ತುಂಬಿಸಲು ತಾಂತ್ರಿಕವಾಗಿ ಹಂಚಿಕೆ ಇರಲಿಲ್ಲ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜೈಪ್ರಕಾಶ್‌ ಅವರು ನೀಡಿದ ವರದಿಯಿಂದ ಮರಳೂರು ಮತ್ತು ಗಂಗಸಂದ್ರ ಕೆರೆಗೆ ಅನುಮೋದನೆ ಸಿಕ್ಕಿದೆ ಇನ್ನಾರು ತಿಂಗಳಲ್ಲಿ ಪೈಪ್‌ ಲೈನ್‌ ಕಾಮಗಾರಿ ಮುಗಿದು ಆ ಕೆರೆಗಳಿಗೂ ನೀರು ಹರಿಯಲಿದೆ ಇದರಿಂದ ತುಮಕೂರು ನಗರಕ್ಕೆ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಒಂದೊಂದಾಗಿ ಬಡಾವಣೆಗಳು ಅಭಿವೃದ್ಧಿಯಾಗುತ್ತಿವೆ, ಸ್ಮಾರ್ಟ್‌ಸಿಟಿ ಅನುದಾನವನ್ನು ಶಿಕ್ಷಣಕ್ಕೆ, ಆರೋಗ್ಯಕ್ಕೆ ಮತ್ತು ಅಭಿವೃದ್ಧಿಗೆ ಹೀಗೆ ವಿವಿಧ ವಿಭಾಗಗಳನ್ನು ಮಾಡಿ ಅನುದಾನ ನೀಡಲಾಗಿದೆ, ಅದರಂತೆಯೇ ನಾವು ಅಭಿವೃದ್ಧಿಪಡಿಸಬೇಕಾಗಿದೆ. ಬಸ್‌ ನಿಲ್ದಾಣ ಕಾಮಗಾರಿ ಡಿಸೆಂಬರ್‌ ವೇಳೆಗೆ ಮುಗಿಯಲಿದೆ, ಅದೇ ರೀತಿ ಉತ್ತಮ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ, ಬಿ.ಎಚ್‌.ರಸ್ತೆ ಅಭಿವೃದ್ಧಿ, ರಿಂಗ್‌ ರಸ್ತೆ ಅಭಿವೃದ್ಧಿ, 35 ವಾರ್ಡುಗಳಲ್ಲೂ ಪಾರ್ಕ್‌ಗಳ ಅಭಿವೃದ್ಧಿ, ಎಂಪ್ರೆಸ್‌ ಸರ್ಕಾರಿ ಶಾಲೆ ಮತ್ತು ಜೂನಿಯರ್‌ ಕಾಲೇಜು ಆವರಣದಲ್ಲಿ ಕೋಟ್ಯಾಂತರ ರೂ. ಗಳಲ್ಲಿ ಅಭಿವೃದ್ಧಿಯಾಗಿದೆ ಎಂದರೆ ಅದು ಪ್ರದಾನಿ ನರೇಂದ್ರ ಮೋದಿಯವರು ನೀಡಿರುವ ಸ್ಮಾರ್ಟ್‌ಸಿಟಿ ಯೋಜನೆ ಕೊಡುಗೆಯಾಗಿದೆ ಎಂದು ಹೇಳಿದರು.
ನಗರವು ಅಭಿವೃದ್ಧಿಯಾಗಬೇಕಾದರೆ ಸಾಕಷ್ಟು ಕ್ಷೇಮಾಭಿವೃದ್ಧಿ ಸಂಘಗಳು ಉತ್ತಮ ಕೆಲಸ ಮಾಡುತ್ತಿವೆ, ಅದರಲ್ಲಿ ಕುವೆಂಪುನಗರ ಕ್ಷೇಮಾಭಿವೃದ್ಧಿ ಸಂಘ ಪ್ರಥಮ ಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದೆ. ಕುವೆಂಪು ನಗರದ ಅಭಿವೃದ್ಧಿಗೆ ಜೈಪ್ರಕಾಶ್‌ ಅವರ ಕೊಡುಗೆ ಸಾಕಷ್ಟಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್‌ ಮಾತನಾಡಿ, ನಗರ ಅಭಿವೃದ್ಧಿಯಾಗಬೇಕಾದರೆ ಮೊದಲು ಬಡಾವಣೆಗಳು ಅಭಿವೃದ್ಧಿಯಾಗಬೇಕು, ಬಡಾವಣೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಜೊತೆಗೆ ಸ್ಥಳೀಯ ಜನರ ಸಹಕಾರವೂ ಅಗತ್ಯವಾಗಿದೆ ಎಂದರು.
ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ತುಮಕೂರು ನಗರ ಉತ್ತಮವಾಗಿ ಅಭಿವೃದ್ಧಿ ಕಾಣುತ್ತಿದೆ, ಇನ್ನೂ ಹಲವಾರು ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ, ಎಲ್ಲಾ ಕಾಮಗಾರಿಗಳು ಮುಗಿದರೆ ಸುಂದರ ನಗರವಾಗಿ ತುಮಕೂರು ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಲ್ಲಿಕಾರ್ಜುನ ಕೆಂಕೆರೆ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪುನಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಬಸವನಗೌಡ ವಹಿಸಿದ್ದರು. ಹಾಸ್ಯ ಕಲಾವಿದರಾದ ಸುಧಾ ಬರಗೂರು, ಪಾಲಿಕೆ ಮಾಜಿ ಮೇಯರ್‌ ಹಾಗೂ 21ನೇ ವಾರ್ಡ್‌ನ ಸದಸ್ಯೆ ಲಲಿತಾರವೀಶ್‌, 19ನೇ ವಾರ್ಡಿನ ಸದಸ್ಯೆ ರೂಪಶ್ರೀ ಶೆಟ್ಟಳ್ಳಯ್ಯ, ನಿವೃತ್ತ ವೈದ್ಯಾಧಿಕಾರಿ ಡಾ.ಅಲೆಕ್ಸಾಂಡರ್‌ ಜೆ.ಗೋನಿ, ಅಬಕಾರಿ ಇಲಾಖೆ ನಿವೃತ್ತ ಆಯುಕ್ತ ಬಿ.ಶೇಖರಯ್ಯ, ಸಂಘದ ಅಧ್ಯಕ್ಷ ಜಿ.ವಿ.ಶ್ರೀನಿವಾಸ್‌, ಉಪಾಧ್ಯಕ್ಷರಾದ ತಿಮ್ಮಪ್ಪ, ಬಿ.ರಾಜಣ್ಣ, ಪ್ರಧಾನ ಕಾರ್ಯದರ್ಶಿ ಆರ್‌.ಎಸ್‌.ಚಂದ್ರಶೇಖರರಾವ್‌, ಸಹ ಕಾರ್ಯದರ್ಶಿ ಬಿ.ರಾಜಶೇಖರಯ್ಯ, ಸಂಘಟನಾ ಕಾರ್ಯದರ್ಶಿ ಕೆ.ಗುಂಡಪ್ಪ, ಎನ್‌.ಜಿ.ಮಹಲಿಂಗಪ್ಪ, ಖಜಾಂಚಿ ವಿಶ್ವನಾಥಸ್ವಾಮಿ, ನಿರ್ದೇಶಕರಾದ ಎಸ್‌.ಹೆಚ್‌.ಮಹೇಶ್ವರಪ್ಪ, ಹೆಚ್‌.ಡಿ.ರಂಗನಾಥ್‌, ಕೆ.ಎಚ್‌.ರಂಗನಾಥ್‌, ಎಂ.ಎನ್‌.ಗಂಗಾಧರ್‌ ಸೇರಿದಂತೆ ಸಂಘದ ಎಲ್ಲಾ ನಿರ್ದೇಶಕರು, ನಾಗರಿಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!