ವಾರಾಂತ್ಯ ಕರ್ಫ್ಯೂ- ಪೊಲೀಸರಿಂದ ಜನ ಜಾಗೃತಿ

145

Get real time updates directly on you device, subscribe now.

ಕುಣಿಗಲ್‌: ಕೊವಿಡ್ ಮೂರನೆ ಅಲೆ ನಿಯಂತ್ರಣಕ್ಕೆ ರಾಜ್ಯಸರ್ಕಾರ ವೀಕೆಂಡ್‌ ಕರ್ಫ್ಯೂ ವಿಧಿಸಿದ್ದು, ಪೊಲೀಸರ ಕ್ರಮದಿಂದ ಪಟ್ಟಣದಲ್ಲಿ ವೀಕೆಂಡ್‌ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಂಡಿತು.
ಶನಿವಾರ ಬೆಳಗ್ಗೆಯೆ ವೀಕೆಂಡ್‌ ಕರ್ಫ್ಯೂ ಜಾರಿ ನಿಟ್ಟಿನಲ್ಲಿ ಕುಣಿಗಲ್‌ ಪೊಲೀಸರು ಡಿವೈಎಸ್ಪಿ ರಮೇಶ್‌, ಸಿಪಿಐ ರಾಜು ನೇತೃತ್ವದಲ್ಲಿ ಜೀಪ್‌, ಬೈಕ್ ಗಳಲ್ಲಿ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಕರ್ಫ್ಯೂ ಜಾರಿ ನಿಟ್ಟಿನಲ್ಲಿ ಅರಿವು ಮೂಡಿಸುವ ಜೊತೆ ಕೊವಿಡ್‌ ನಿಯಮ ಪಾಲನೆ ನಿಟ್ಟಿಲ್ಲಿ ಜಾಗೃತಿ ಮೂಡಿಸಿದರು. ಪುರಸಭೆ ಅಧಿಕಾರಿಗಳು ವಾರ್ಡ್ ಗಳಲ್ಲಿ ಕಸ ವಿಲೇವಾರಿಗೆ ಬರುವ ವಾಹನಗಳಲ್ಲಿ ಧ್ವನಿ ವರ್ಧಕದ ಮೂಲಕ ವೀಕೆಂಡ್‌ ಕರ್ಫ್ಯೂ ನಿಯಾಮವಳಿ ಬಗ್ಗೆ ಜಾಗೃತಿ ಮೂಡಿಸಿ, ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಬೀದಿ ಬದಿವ್ಯಾಪಾರ, ಹೋಟೆಲ್‌, ಮಾಂಸ, ಕೋಳಿ ಮಾರಾಟ, ದಿನಸಿ ಅಂಗಡಿ, ಹಾಲು ಮಾರಾಟ ಮಳಿಗೆ ಸೇರಿದಂತೆ ನಿಯಮಾವಳಿಗಳಲ್ಲಿ ಅನುವು ಮಾಡಿರುವ ವ್ಯಾಪಾರಿಗಳು ಮಾರಾಟಕ್ಕೆ ಅಂಗಡಿ ತೆಗೆದಿದ್ದರೂ ಕರ್ಫ್ಯೂ ಕಾರಣ ಜನಸಂಚಾರಕ್ಕೆ ನಿಯಂತ್ರಣ ಹೇರಿದ್ದರಿಂದ ವ್ಯಾಪಾರವಿಲ್ಲದೆ ಪರದಾಡಿದರು. ವಾಹನ ಸಂಚಾರ ವಿರಳವಾಗಿದ್ದು, ಸಾರಿಗೆ ಸಂಸ್ಥೆ ಬಸ್ ಗಳು, ಸರಕು ಸಾಗಾಣೆ ವಾಹನ ಸಂಚಾರ ಎಂದಿನಂತೆ ಇತ್ತು, ಶಾಲಾ, ಕಾಲೇಜು ಮುಚ್ಚಲ್ಪಟ್ಟಿದ್ದವು.
ಆರೋಗ್ಯ ಇಲಾಖೆ ಕಳೆದೊಂದು ತಿಂಗಳಿನಿಂದ ದಿನಕ್ಕೆ ಕನಿಷ್ಟ ಪ್ರಮಾಣದ ಕೊವಿಡ್‌ ಪರೀಕ್ಷೆ ನಡೆಸುತ್ತಿದ್ದರೂ ವಾರಕ್ಕೆ ಒಂದು ಅಥವಾ ಎರಡು ಪ್ರಕರಣ ಪತ್ತೆಯಾಗುತ್ತಿದ್ದು, ಶುಕ್ರವಾರ ಎರಡು ಹಾಗೂ ಶನಿವಾರ 9 ಪ್ರಕರಣ ಪತ್ತೆಯಾಗಿದೆ. ಆರೋಗ್ಯ ಇಲಾಖೆ ದಿನಕ್ಕೆ 700 ತಪಾಸಣೆ ನೆರವೇರಿಸಬೇಕಿದ್ದು ಸರ್ವರ್‌ ಸಮಸ್ಯೆಯಿಂದ ಶುಕ್ರವಾರ 550, ಶನಿವಾರದಂದು 345 ತಪಾಸಣೆ ನಡೆಸಿದೆ. ಇತರೆಡೆಗಳಿಂದ ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಬರುವವರಿಂದ ಸೋಂಕು ಹರಡುವ ಹಾಗೂ ಪತ್ತೆಯಾಗುವ ಪ್ರಕರಣ ಏರಿಕೆಯಾಗುತ್ತಿದ್ದು, ಅಗತ್ಯ ಸಂದರ್ಭ ಹೊರತುಪಡಿಸಿ ಅನಗತ್ಯ ಪ್ರಯಾಣ ತಪ್ಪಿಸಬೇಕೆಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ.
ಸಾರ್ವಜನಿಕರು ಅನಗತ್ಯವಾಗಿ ಓಡಾಟ ನಿಲ್ಲಿಸಬೇಕೆಂದು, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಯಲ್ಲಿ ಅನಗತ್ಯ ಜನಸಂದಣಿಯಿಂದ ದೂರ ಇರಬೇಕು, ಕೆಮ್ಮು, ನೆಗಡಿ, ಜ್ವರದ ಲಕ್ಷಣ ಕಂಡು ಬಂದಲ್ಲಿ ಸ್ವಪ್ರೇರಣೆಯಿಂದ ಹತ್ತಿರದ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ಮೂಲಕ ಕೊವಿಡ್ ನಿಂದ ರಕ್ಷಣೆ ಪಡೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಜಗದೀಶ್‌ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!