ಕೋವಿಡ್‌ ವಾರ್‌ ರೂಂಗೆ ಜಿಲ್ಲಾಧಿಕಾರಿಗಳಿಂದ ಚಾಲನೆ

221

Get real time updates directly on you device, subscribe now.

ತುಮಕೂರು: ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಲಭಾಗದಲ್ಲಿರುವ ಸ್ಮಾರ್ಟ್‌ ಲಾಂಜ್‌ ಕೊಠಡಿಯಲ್ಲಿ ಆರಂಭಿಸಲಾದ ಕೋವಿಡ್‌ ವಾರ್‌ ರೂಂಗೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೊರೊನಾ ಪಾಸಿಟಿವ್‌ ಬಂದಿರುವ ರೋಗಿಗಳ ಜತೆ ಮಾತನಾಡಿ ಚಿಕಿತ್ಸೆ, ಹಾಸಿಗೆ ಸೌಲಭ್ಯ ಒದಗಿಸುವ ಕೆಲಸವನ್ನು ಈ ವಾರ್‌ ರೂಂ ಮಾಡಲಿದೆ, ಪಾಸಿಟಿವ್‌ ಕೇಸ್‌ಗಳು ಹೆಚ್ಚಾದರೆ ಅದಕ್ಕೆ ತಕ್ಕಂತೆ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದರು.
ಸೋಮವಾರದಿಂದ ನಗರದ ವಿವಿಧೆಡೆ ಕಂಟ್ರೋಲ್‌ ರೂಂ ತೆರೆಯಲಾಗುವುದು, ಗ್ರಾಮಾಂತರ ಪ್ರದೇಶಕ್ಕೆ ತಹಶೀಲ್ದಾರ್‌ ಕಚೇರಿಯಲ್ಲಿ ವಾರ್‌ ರೂಂ ತೆರೆಯಲಾಗುವುದು, ನಗರ ಪ್ರದೇಶಕ್ಕೆ ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯ್ತಿ, ನಗರಸಭೆ ವ್ಯಾಪ್ತಿಯಲ್ಲಿ ವಾರ್‌ ರೂಂಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದರು.
ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರಿ ಆದೇಶದನ್ವಯ ಕೋವಿಡ್‌ ಪಾಸಿಟಿವ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಸ್ಪತ್ರೆ ಸಾಮರ್ಥ್ಯದ ಶೇ.50 ರಷ್ಟು ಹಾಸಿಗೆ (ಐಸಿಯು, ಆಕ್ಸಿಜನ್‌ ಬೆಡ್‌, ಜನರಲ್‌ ವಾರ್ಡ್‌ ವಿಭಾಗ) ಗಳನ್ನು ಮೀಸಲಿಡಬೇಕು. ಅದೇ ರೀತಿ ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ ಜನವರಿ 10 ರಿಂದ ಎಲ್ಲಾ ವಿಭಾಗಗಳಲ್ಲಿ ಶೇ.75 ರಷ್ಟು ಹಾಸಿಗೆ ಮೀಸಲಿಟ್ಟು ವರದಿ ನೀಡಬೇಕು ಎಂದು ಈಗಾಗಲೇ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಓ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌, ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್‌, ತಹಶೀಲ್ದಾರ್‌ ಮೋಹನ್‌ ಕುಮಾರ್‌, ಡಿಹೆಚ್‌ಓ ಡಾ.ನಾಗೇಂದ್ರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಡಾ.ಕೇಶವರಾಜ್‌, ಡಾ.ಸನತ್‌ಕುಮಾರ್‌, ಡಾ.ಮೋಹನ್‌ದಾಸ್‌, ಡಿವೈಎಸ್ಪಿ ಶ್ರೀನಿವಾಸ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!