ಕೊವಿಡ್‌ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆ: ವೈದ್ಯಾಧಿಕಾರಿ

304

Get real time updates directly on you device, subscribe now.

ಕುಣಿಗಲ್‌: ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊವಿಡ್‌ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್‌ಬಾಬು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಕೊವಿಡ್‌ ವಾರ್ಡ್‌ನಲ್ಲಿ 50 ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ತಕ್ಕಂತೆ ಐದು ಮಂದಿ ಶುಶ್ರೂಕರನ್ನು ನೇಮಕ ಮಾಡಲಾಗಿದೆ, ಐದು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸುವ ಆಮ್ಲಜನಕ ಪ್ಲಾಂಟ್‌ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು, ಇದರ ಜೊತೆಯಲ್ಲಿ 30 ಆಕ್ಸಿಜನ್‌ ಕಾನ್ಸಂಟ್ರೇಟರ್‌, 39 ಆಮ್ಲಜನಕ ಸಿಲೆಂಡರ್‌ಗಳನ್ನು ಸಿದ್ಧತೆ ಮಾಡಿಕೊಂಡಿದ್ದು, ನಿರಂತರ ವಿದ್ಯುತ್‌ ಪೂರೈಕೆ ನಿಟ್ಟಿನಲ್ಲಿ ಈಗಾಗಲೆ 250 ಕೆವಿ ಸಾಮರ್ಥ್ಯದ ಜನರೇಟರ್‌ ಸ್ಥಾಪನೆ ಹಾಗೂ 250 ಕೆವಿ ಸಾಮರ್ಥ್ಯದ ಪರಿವರ್ತಕ ಅಳವಡಿಕೆ ಕಾಮಗಾರಿ ಸಹ ಭರದಿಂದ ಸಾಗಿದೆ, 50 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಾದ ಅಗತ್ಯ ಔಷಧ ಸಂಗ್ರಹಿಸಲಾಗಿದೆ. ಸೋಮವಾರದಿಂದ ಜ್ವರ ಚಿಕಿತ್ಸೆ ಕೌಂಟರ್‌ ಪ್ರಾರಂಭಿಸಲಾಗುವುದು ಹಾಗೂ 60 ವರ್ಷ ಮೇಲ್ಪಟ್ಟವರಿಗೂ ಸೇರಿದಂತೆ ಕೊರೊನ ವಾರಿಯರ್‌ಗಳಿಗೆ ಬೂಸ್ಟರ್‌ ಡೋಸ್‌ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ್‌ ಮಾತನಾಡಿ, ಭಾನುವಾರ 250 ಕ್ಕೂ ಹೆಚ್ಚು ಪರೀಕ್ಷೆ ನಡೆಸಿದ್ದು ನಾಲ್ಕು ಮಂದಿಗೆ ಕೊರೊನ ಪಾಸಿಟೀವ್‌ ಬಂದಿದೆ, ದಿನಾಲೂ 700 ಪರೀಕ್ಷೆ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗಿದೆ, ತಾಲೂಕಿನಲ್ಲಿ 15 ರಿಂದ 18 ವಯೋಮಾನದ 9250 ಮಕ್ಕಳನ್ನು ಗುರುತಿಸಿ ಇದುವರೆಗೂ 9114 ಮಕ್ಕಳಿಗೆ ಲಸಿಕೆ ನೀಡಲಾಗಿದೆ, ಉಳಿಕೆ ಮಕ್ಕಳಿಗೂ ಶೀಘ್ರದಲ್ಲೆ ಲಸಿಕೆ ನೀಡಲಾಗುವುದು, 18 ಕ್ಕೂ ಮೇಲ್ಪಟ್ಟ ವಯಸ್ಕರಲ್ಲಿ ಶೇ.96 ಮಂದಿಗೆ ಎರಡು ಡೋಸ್‌, ಶೇ.86 ಮಂದಿಗೆ ಸಿಂಗಲ್‌ ಡೋಸ್‌ ಲಸಿಕೆ ನೀಡಲಾಗಿದೆ. ಕೊವಿಡ್‌ ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೇರಿದಂತೆ ಸರ್ಕಾರ ಸೂಚಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಕೈಗೊಂಡಲ್ಲಿ ಸೋಂಕು ಹತೋಟಿ ನಿಯಂತ್ರಿಸಿ ಮುಂದಿನ ದಿನಗಳಲ್ಲಿ ಗಂಭೀರ ಸ್ಥಿತಿಯಾಗುವುದನ್ನು ತಡೆಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದಿದ್ದಾರೆ.
ಓಮಿಕ್ರಾನ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೇರಿರುವ ವೀಕೆಂಡ್‌ ಕರ್ಫ್ಯೂ ಪೊಲೀಸರ ಕ್ರಮದ ಹೊರತಾಗಿಯೂ ಭಾನುವಾರ ಪಟ್ಟಣ ಸೇರಿದಂತೆ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರ, ವಿಶೇಷವಾಗಿ ದ್ವಿಚಕ್ರ ವಾಹನ ಸಂಚಾರ ಹೆಚ್ಚಾಗಿತ್ತು, ಪೊಲೀಸರು ಕೆಲ ವಾಹನ ತಡೆದು ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!