ಕೊರೊನಾತಂಕದ ನಡುವೆ ವೈಕುಂಠ ಏಕಾದಶಿ ಆಚರಣೆ ಸಿದ್ಧತೆ

224

Get real time updates directly on you device, subscribe now.

ಕುಣಿಗಲ್‌: ಕೊವಿಡ್‌ ಕರಿನೆರಳ ನಡುವೆ ವೈಕುಂಠ ಏಕಾದಶಿ ಹಾಗೂ ಸಂಕ್ರಾಂತಿ ಹಬ್ಬ ಬಂದಿದ್ದು, ಸರ್ಕಾರದ ಕಟ್ಟುನಿಟ್ಟಿನ ಸೂಚನೆ ನಡುವೆ ವೈಕುಂಠ ಏಕಾದಶಿ ಹಬ್ಬದ ಸಿದ್ಧತೆ ನಡೆಯುತ್ತಿದ್ದು, ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಇಳಿಮುಖವಾಗಿದ್ದ ಕೊವಿಡ್‌ ಸೋಂಕಿತರ ಸಂಖ್ಯೆ ಬುಧವಾರ ಏರಿಕೆ ಕಂಡಿದೆ.
ಕಳೆದ ಕೆಲವಾರು ವರ್ಷಗಳಿಂದ ಪಟ್ಟಣದ ತುಡಿಕೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದು, ಈಬಾರಿ ಕೊವಿಡ್‌ ಕರಿನೆರಳ ನಡುವೆಯೂ ವಿಜೃಂಭಣೆಯಿಂದ ಕೊವಿಡ್‌ ನಿಯಮ ಪಾಲಿಸಿಕೊಂಡು ಹಬ್ಬಾಚರಣೆ ಮಾಡಲು ದೇವಾಲಯ ಸಮಿತಿ ನಿರ್ಧರಿಸಿದೆ. ಈ ಬಾರಿ 16ನೇ ವರ್ಷದ ಹಬ್ಬಾಚರಣೆಯಾಗಿದ್ದು ದೇವಾಲಯ ಹೊರಾಂಗಣ ಹಾಗೂ ಒಳಾಂಗಣವನ್ನು ಹಣ್ಣು, ತರಕಾರಿಗಳಿಂದ ಅಲಂಕರಿಸಲಾಗಿದೆ. ಬಹುತೇಕ ಗಣ್ಯರಿಗೆ ವಿಶೇಷ ಆಮಂತ್ರಣ ನೀಡಲಾಗಿದ್ದು, ಸರ್ಕಾರದ ದಿಡೀರ್‌ ಸೂಚನೆ ಮೇರೆಗೆ ದೇವಾಲಯದಲ್ಲಿ ಕೇವಲ ಪೂಜೆ, ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಸಾಮೂಹಿಕ ಅನ್ನಸಂತರ್ಪಣೆ ಸೇರಿದಂತೆ ಪ್ರಸಾದ ವಿನಿಯೋಗ ರದ್ದುಗೊಳಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ್‌ ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಕಳೆದ ಕೆಲದಿನಗಳಿಂದ ಒಂದಂಕಿ ದಾಟದ ಕೊವಿಡ್‌ ಸೋಂಕಿತರು ಬುಧವಾರ ಒಂದೆ ದಿನ 32 ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 25 ತಾಲೂಕಿನಲ್ಲಿ ಪತ್ತೆಯಾದರೆ ಬೇರೆ ಏಳು ಪ್ರಕರಣ ಇತರೆಡೆಯ ಪ್ರಕರಣಗಳಾಗಿದೆ. ಸಂಕ್ರಾಂತಿ ಹಾಗೂ ವೈಕುಂಠ ಏಕಾದಶಿ ಹಬ್ಬಾಚರಣೆಗೆ ಸರ್ಕಾರ ಸೂಚಿಸಿರುವ ನಿಯಮಗಳಿಗೆ ಒಳಪಟ್ಟು ಅಗತ್ಯ ಕ್ರಮ ಕೈಗೊಳ್ಳುವಂತೆ ದೇವಾಲಯ ಸಮಿತಿಯವರಿಗೆ ತಹಶೀಲ್ದಾರ್‌ ಮಹಾಬಲೇಶ್ವರ್‌ ಸೂಚನೆ ನೀಡಿದ್ದು, ದೇವಾಲಯದೊಳಗೆ ಒಮ್ಮೆಗೆ 50 ಕ್ಕಿಂತ ಹೆಚ್ಚು ಮಂದಿ ಇರದಂತೆ, ಸಾಮಾಜಿಕ ಅಂತರ ಪಾಲನೆ, ಕಡ್ಡಾಯ ಮಾಸ್‌್ಕ ಧರಿಸುವುದು ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡುವಂತೆ, ಕೊವಿಡ್‌ ನಿಯಮ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಮುಖ್ಯಾಧಿಕಾರಿ ರವಿಕುಮಾರ್‌, ಜಿಲ್ಲಾಧಿಕಾರಿಗಳು ಸೂಚನೆ ಮೇರೆಗೆ ಪಟ್ಟಣದಲ್ಲಿರುವ ಪ್ರಮುಖ ದೇವಾಲಯದವರಿಗೆ ಕೊವಿಡ್‌ ನಿಯಮ ಪಾಲನೆ ನಿಟ್ಟಿನಲ್ಲಿ ಅಗತ್ಯ ಸೂಚನೆ ನೀಡಲಾಗಿದ್ದು, ಕೊವಿಡ್‌ ನಿಯಮ ಪಾಲನೆ ಮಾಡುವಂತೆ ಮನವಿ ಮಾಡಲಾಗಿದೆ. ಪುರಸಭೆ ವತಿಯಿಂದಲೂ ಸ್ವಚ್ಛತೆ ಮಾಡುವುದು ಸೇರಿದಂತೆ ಅಗತ್ಯ ಸೋಂಕು ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!