ಕಾಂಗ್ರೆಸ್‌ ಪಕ್ಷ ಸಂಘಟಿಸಲು ಶ್ರಮಿಸುವೆ: ಬೆಮೆಲ್

155

Get real time updates directly on you device, subscribe now.

ತುರುವೇಕೆರೆ: ಕಾಂಗ್ರೆಸ್‌ ಪಕ್ಷದ ಸದೃಡ ಸಂಘಟನೆಗೆ ಸಾಮಾನ್ಯ ಕಾರ್ಯಕರ್ತರಂತೆ ಪ್ರಾಮಾಣಿಕತೆಯಿಂದ ದುಡಿಯುವುದಾಗಿ ಮಾಜಿ ವಿಧಾನಪರಿಷತ್‌ ಸದಸ್ಯ ಬೆಮೆಲ್‌ ಕಾಂತರಾಜ್‌ ತಿಳಿಸಿದರು.
ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಇದೇ ತಿಂಗಳ 21 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದೇನೆ. ಸಮಾಜ ಸೇವೆ ಮಾಡಬೇಕೆಂಬ ನನ್ನ ಆಶಯಕ್ಕೆ ಕಾಂಗ್ರೆಸ್‌ ಪಕ್ಷ ಸೂಕ್ತವಾದುದಾಗಿದೆ. ಪಕ್ಷ ಸೇರ್ಪಡೆಗೊಂಡ ನಂತರ ಇದೇ ಮೊದಲ ಬಾರಿಗೆ ತುರುವೇಕೆರೆಗೆ ಆಗಮಿಸಿದ ನನಗೆ ಬ್ಲಾಕ್‌ ಕಾಂಗ್ರೆಸ್‌ ಭವ್ಯ ಸ್ವಾಗತ ನೀಡಿದೆ, ಕಚೇರಿಗೆ ನನ್ನನ್ನು ಪ್ರೀತಿಯಿಂದ ಬರ ಮಾಡಿಕೊಂಡಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ಬ್ಲಾಕ್‌ ಕಾಂಗ್ರೆಸ್‌ ಕಚೇರಿಗೆ ಆಗಮಿಸುವುದಕ್ಕೂ ಮುನ್ನ ಪಟ್ಟಣದ ಅಧಿದೈವ ಬೇಟೆರಾಯಸ್ವಾಮಿ ಹಾಗೂ ಅಧಿದೇವತೆ ಉಡುಸಲಮ್ಮ ದೇವಿಗೆ ಬೆಮೆಲ್ ಕಾಂತರಾಜ್‌ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಪಟ್ಟಣದ ಉಡುಸಲಮ್ಮ ದೇವಿಯವರ ದೇಗುಲದ ಆವರಣದಿಂದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿದರು. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ ಹಾಗೂ ಹೆಚ್‌.ಕೆ.ನಾಗೇಶ್‌ ಅವರು ಬೆಮೆಲ್‌ ಕಾಂತರಾಜ್‌ಗೆ ಪಕ್ಷದ ಬಾವುಟ ನೀಡುವ ಮೂಲಕ ಸ್ವಾಗತ ಕೋರಿದರು.

ಮುಖಂಡರ ಗೈರು: ನೂತನವಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡು ಮೊದಲ ಬಾರಿಗೆ ಪಕ್ಷದ ಕಚೇರಿಗೆ ಬೆಮೆಲ್‌ ಕಾಂತರಾಜ್‌ ಆಗಮಿಸಿದ್ದ ವೇಳೆ ತಾಲೂಕು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಪರಾಜಿತ ಅಭ್ಯರ್ಥಿ ಚೌದ್ರಿರಂಗಪ್ಪ, ಗೀತಾ ರಾಜಣ್ಣ, ಮಾಜಿ ಜಿಪಂ ಸದಸ್ಯ ಎನ್‌.ಆರ್‌. ಜಯರಾಮ್‌, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್‌.ವಸಂತಕುಮಾರ್‌, ಸುಬ್ರಹ್ಮಣ್ಯ ಶ್ರೀಕಂಠೇಗೌಡ ಸೇರಿದಂತೆ ಅನೇಕರು ಗೈರಾಗಿದ್ದು ಕಂಡು ಬಂತು.
ಈ ಸಂದರ್ಭದಲ್ಲಿ ಮುಖಂಡರಾದ ದಾನಿಗೌಡ, ಕೊಳಾಲ ನಾಗರಾಜ್‌, ಗುಡ್ಡೇನಹಳ್ಳಿ ನಂಜುಂಡಪ್ಪ, ಜಿಪಂ ಮಾಜಿ ಅಧ್ಯಕ್ಷ ಹನುಮಂತಯ್ಯ, ಎಸ್ಸಿ ಘಟಕದ ಶಿವರಾಜ್‌, ಪಪಂ ಮಾಜಿ ಅಧ್ಯಕ್ಷ ಟಿ.ಎನ್‌.ಶಶಿಶೇಖರ್‌, ಶ್ರೀನಿವಾಸ್‌, ಕಿಸಾನ್‌ ಘಟಕದ ಸ್ವರ್ಣಕುಮಾರ್‌, ಮುಖಂಡರಾದ ಎಂ.ಡಿ.ಮೂರ್ತಿ, ಗೊಟ್ಟಿಕೆರೆ ಕಾಂತರಾಜ್, ಬುಗುಡುನಹಳ್ಳಿ ಕೃಷ್ಣಮೂರ್ತಿ, ಗೋಣಿತುಮಕೂರು ಲಕ್ಷ್ಮೀಕಾಂತ್‌, ಪ್ರಕಾಶ್‌ಯಾದವ್‌, ಕಾಳಂಜೀಹಳ್ಳಿ ಸುರೇಶ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!