ಲಸಿಕೆ ಕೊರತೆ ಉಂಟಾದರೆ ಕ್ರಮ: ಜಿಲ್ಲಾಧಿಕಾರಿ

149

Get real time updates directly on you device, subscribe now.

ತುಮಕೂರು: ಜಿಲೆಯಲ್ಲಿ ಕೋವಿಡ್‌ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ನಿಗದಿತ ಗುರಿ ತಲುಪುವ ಹಂತದಲ್ಲಿದ್ದು, ಲಸಿಕೆ ಕೊರತೆಯುಂಟಾದರೆ ಪೂರೈಸಲು ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ತಮ್ಮ ಕಚೇರಿಯ ಕೆಸ್ವಾನ್‌ ವೀಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಶೇ.101ರಷ್ಟು ಮೊದಲನೇ ಡೋಸ್‌, ಶೇ.85 ರಷ್ಟು ಎರಡನೇ ಡೋಸ್‌ ಲಸಿಕಾಕರಣ ಪೂರ್ಣಗೊಂಡಿದ್ದು, ಬಾಕಿ ಇರುವ ಲಸಿಕಾಕರಣವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕೆಂದು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬೂಸ್ಟರ್‌ ಡೋಸ್‌ ಲಸಿಕಾಕರಣದಲ್ಲಿ ಶೇ.51 ರಷ್ಟು ಪ್ರಗತಿ ಸಾಧಿಸಿದ್ದು, ಅರ್ಹತೆ ಹೊಂದಿರುವ 21 ಸಾವಿರ ಫಲಾನುಭವಿಗಳಿಗೆ ಶೀಘ್ರವೇ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರಲ್ಲದೇ ಬೂಸ್ಟರ್‌ ಡೋಸ್‌ ನೀಡುವಲ್ಲಿ ಹಿಂದುಳಿದಿರುವ ತಾಲ್ಲೂಕುಗಳ ವೈದ್ಯಾಧಿಕಾರಿಗಳಿಗೆ ಲಸಿಕಾಕರಣ ಪೂರ್ಣಗೊಳಿಸಲು ಸೂಚಿಸಿದರು.
ಮುಖ್ಯಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್‌ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಜಿಲ್ಲೆಯಲ್ಲಿ ಫೆ.15 ರೊಳಗೆ ಗ್ರಾಮ ಒನ್‌ ಕೇಂದ್ರಗಳನ್ನು ತೆರೆಯಲು ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳು ಸೂಕ್ತ ಕ್ರಮ ವಹಿಸಬೇಕೆಂದು ನಿರ್ದೇಶಿಸಿದರು.
ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆಯಾದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದಲ್ಲಿ ರಾಷ್ಟ್ರೀಯ ಹೆಲ್ತ್ ಮಿಶನ್‌ನಡಿ ಔಷಧಿ ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ ಕೋವಿಡ್‌-19 ಸಂಬಂಧ ಮೊಬೈಲ್‌ನಲ್ಲಿ ಹೋಮ್‌ ಐಸೋಲೇಷನ್‌ ಆ್ಯಪ್‌ ಲಭ್ಯವಿದ್ದು ಪಾಸಿಟೀವ್‌ ಬಂದವರಿಗೆ ನೀಡುವ ಔಷಧಗಳ ಕಿಟ್‌ ಮಾಹಿತಿಯನ್ನು ಆ್ಯಪ್‌ನಲ್ಲಿ ನಮೂದಿಸಲು ಅವಕಾಶವಿದೆ. ಅಧಿಕಾರಿಗಳು ಈ ತಂತ್ರಜ್ಞಾನದ ಉಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡುತ್ತಿದ್ದು ಅದಕ್ಕಾಗಿಯೇ ರೂಪಿಸಿರುವ ಪರಿಹಾರ ಪೋರ್ಟಲ್‌ನಲ್ಲಿ ಮೃತರ ಮಾಹಿತಿ ನೀಡಬೇಕು, ಆದರೆ ಅಧಿಕಾರಿಗಳು ನಿಗದಿತ ನಮೂನೆಯಲ್ಲಿ ಎಸ್‌ಆರ್‌ಎಫ್‌ಐಡಿ ಮೃತರ ಪೋಷಕ, ಸಂಬಂಧಿಕರ ಹೆಸರನ್ನು ಭರ್ತಿ ಮಾಡದೇ ಕಳುಹಿಸುತ್ತಿದ್ದು, ಇದರಿಂದ ಪರಿಹಾರ ನೀಡಲು ತಾಂತ್ರಿಕ ಸಮಸ್ಯೆಗಳುಂಟಾಗುತ್ತಿವೆ, ಈ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿ, ತಹಶೀಲ್ದಾರ್‌ಗಳು ಹೆಚ್ಚಿನ ಗಮನ ವಹಿಸಬೇಕೆಂದು ತಿಳಿಸಿದರು.
ಕಳೆದ ನವೆಂಬರ್‌ನಲ್ಲಿ ಸುರಿದ ಮಹಾ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಂಪೂರ್ಣ ಹಾನಿಗೀಡಾದ ಎ ಮತ್ತು ಬಿ ಗುಂಪಿನ ಮನೆಗಳ ಜಿಪಿಎಸ್‌ ಮಾಡಿಸುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಪೈಕಿ-ಪಹಣಿ, ಒಟ್ಟು ಗೂಡಿಸುವಿಕೆ, ಪಹಣಿನ ಕಾಲಂ 3/9 ಮಿಸ್‌ಮ್ಯಾಚ್‌, ಭೂಮಿ ಪೆಂಡೆನ್ಸಿ ಕೆಲಸ ಬಾಕಿ ಇದ್ದು ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮಕೈಗೊಳ್ಳಬೇಕೆಂದು ತಿಳಿಸಿದರಲ್ಲದೆ, ಕಂದಾಯ ಗ್ರಾಮಗಳ ರಚನೆ ಸಂಬಂಧ ಆಯಾ ತಹಶೀಲ್ದಾರ್‌ ಹೆಚ್ಚಿನ ಗಮನ ವಹಿಸಬೇಕೆಂದರು.
ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಭೂಮಿ ಕಾಯ್ದಿರಿಸುವಿಕೆ, ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಸೇರಿದಂತೆ ವಿವಿಧ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ವಿ.ಅಜಯ್‌, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್‌, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್‌ಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!