ಯುವ ಜನರು ಉತ್ತಮ ಕೆಲಸಗಳತ್ತ ಗಮನ ಹರಿಸಲಿ: ರಾಜೇಂದ್ರ

135

Get real time updates directly on you device, subscribe now.

ತುಮಕೂರು: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇತ್ತೀಚಿನ ಬೆಳೆವಣಿಗೆಗಳು ಅತ್ಯಂತ ಅಪಾಯಕಾರಿ ಯಾಗಿದ್ದು, ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವಿಧಾನಪರಿಷತ್‌ ಸದಸ್ಯ ಆರ್‌.ರಾಜೇಂದ್ರ ತಿಳಿಸಿದ್ದಾರೆ.

ನಗರದ ಹೆಚ್‌ಎಂಎಸ್‌ಐಟಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ನಡುವೆ ಜಾತಿ, ಧರ್ಮದ ವಿಷಯ ನುಸುಳುವುದರಿಂದ ವೈಯಕ್ತಿಕ ದ್ವೇಷದ ಜೊತೆಗೆ, ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆಗಳೇ ಹೆಚ್ಚು, ಯುವಜನರು ಇಂತಹ ಕೃತ್ಯಗಳಿಗೆ ಸ್ಪಂದಿಸುವ ಕೆಲಸ ಮಾಡಬಾರದೆಂದು ಮನವಿ ಮಾಡಿದರು.
ಮಾಜಿ ಶಾಸಕ ಹಾಗೂ ಹೆಚ್‌ಎಂಎಸ್‌ಐಟಿಯ ನಿರ್ದೇಶಕ ಡಾ.ರಫಿಕ್‌ ಅಹಮದ್‌ ಮಾತನಾಡಿ, ಜನಸೇವೆ ಎಂಬುದು ಕೇವಲ ಚುನಾವಣೆ ಸಮಯಕ್ಕೆ ಮಾತ್ರ ಸಿಮೀತವಲ್ಲ, ಅದು ನಿರಂತರವಾಗಿದ್ದರೆ ಮಾತ್ರ ಜನರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯ ಎಂಬುದನ್ನು ಆರ್‌.ರಾಜೇಂದ್ರ ತೋರಿಸಿಕೊಟ್ಟಿದ್ದಾರೆ, ಕಾಂಗ್ರೆಸ್‌ ಪಕ್ಷದಿಂದ ವಿಧಾನಪರಿಷತ್‌ ಚುನಾವಣೆಗಳಲ್ಲಿ ಗೆದ್ದವರ ಸಂಖ್ಯೆ ಕಡಿಮೆಯೇ, ಆದರೂ ಕೋವಿಡ್‌ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡಿದ್ದಲ್ಲದೆ, ಕಳೆದ ನಾಲ್ಕು ವರ್ಷಗಳ ನಿರಂತರ ಸಂಪರ್ಕ ರಾಜೇಂದ್ರ ಅವರು ವಿಧಾನಪರಿಷತ್‌ ಪ್ರವೇಶಿಸುವಂತೆ ಮಾಡಿದೆ, ಆ ಕಾರಣದಿಂದ ಅವರನ್ನು ನಾವೆಲ್ಲರೂ ಇಂದು ಅಭಿನಂದಿಸುವ ಕೆಲಸ ಮಾಡುತಿದ್ದೇವೆ ಎಂದರು.
ಪಾಲಿಕೆಯ ವಿರೋಧ ಪಕ್ಷದ ನಾಯಕ ಜೆ.ಕುಮಾರ್‌ ಮಾತನಾಡಿ, ಯುವ ರಾಜಕಾರಣಿಯನ್ನು ವಿದ್ಯಾರ್ಥಿಗಳಾದ ನಿಮ್ಮ ಮುಂದೆ ಅಭಿನಂದಿಸುತ್ತಿರುವುದು ನಿಮಗೆ ಸ್ಪೂರ್ತಿಯಾಗಲಿ ಎಂಬ ಮಹತ್ವದ ಉದ್ದೇಶದಿಂದ ಈ ಕಾರ್ಯ ಮಾಡಲಾಗುತ್ತಿದೆ. ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚು, ಹಾಗಾಗಿ ಯುವಜನರು ಹೆಚ್ಚು ಸಕ್ರಿಯವಾಗಿ ರಾಜಕಾರಣಕ್ಕೆ ಬರಲಿ ಎಂಬುದು ನಮ್ಮಗಳ ಆಶಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್‌ಎಂಎಸ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎಸ್‌.ಷಫಿ ಅಹಮದ್‌ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಮೇಯರ್‌ ಫರೀದಾ ಬೇಗಂ, ಮಹಾನಗರ ಪಾಲಿಕೆ ಸದಸ್ಯರಾದ ಸೈಯದ್‌ ನಯಾಜ್‌, ಇನಾಯತ್‌ ಉಲ್ಲಾಖಾನ ಕೆ.ರೂಪ ಶೆಟ್ಟಾಳ್ಳಯ್ಯ, ಮಹೇಶ್‌ ಕುಮಾರ್‌, ಷಕೀಲ್‌ ಅಹಮದ್‌, ಕಾಲೇಜಿನ ಪ್ರಾಂಶುಪಾಲ ಡಾ.ಇರ್ಪಾನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆಟೋ ರಾಜು, ಮೆಹಬೂಬ್‌ ಪಾಷ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!