ಸಣ್ಣ ವ್ಯಾಪಾರಿಗಳ ವ್ಯಾಪಾರಕ್ಕೆ ಅವಕಾಶ ನೀಡಲು ಮನವಿ

114

Get real time updates directly on you device, subscribe now.

ತುಮಕೂರು: ಜಾತ್ರೆ, ವಿಶೇಷ ಹಬ್ಬ ಹರಿದಿನ, ಉತ್ಸವ, ಉರುಸ್‌ಗಳಲ್ಲಿ ಕಡ್ಲೆಪುರಿ, ಮಕ್ಕಳ ಆಟಿಕೆ ಸೇರಿದಂತೆ ಸಣ್ಣಪುಟ್ಟ ವಸ್ತುಗಳನ್ನು ವ್ಯಾಪಾರ ಮಾಡುವ ಜನರಿಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್‌ ಅಹಮದ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಆತಿಕ್‌ ಅಹಮದ್‌, ತುಮಕೂರು ಜಿಲ್ಲೆ ಉತ್ಸವ, ಜಾತ್ರೆಗಳಿಗೆ ಬಹಳ ಪ್ರಸಿದ್ದವಾದ ಸ್ಥಳ. ವರ್ಷಕ್ಕೆ ಕನಿಷ್ಠವೆಂದರೂ 30 ರಿಂದ 70ರವರೆಗೆ ಜಾತ್ರೆಗಳು ನಡೆಯುತ್ತವೆ.ಈ ಜಾತ್ರೆಗಳಲ್ಲಿ ಮಂಡಕ್ಕಿ, ಕಾರ ಸೇವಿಗೆ, ಸಿಹಿ ಪದಾರ್ಥ, ಮಕ್ಕಳ ಆಟಿಕೆ ವಸ್ತುಗಳು, ಗಿರ್‌ಗಿಟ್ಲೆ, ರಾಟೆ, ಪ್ಲಾಸ್ಟಿಕ್‌ ಸಾಮಾನು,ಕಬ್ಬಿನ ಹಾಲು, ಜ್ಯೂಸ್‌, ಬಳೆ, ಹೆಣ್ಣು ಮಕ್ಕಳ ಸೌಂಧರ್ಯ ವರ್ಧಕ ವಸ್ತುಗಳು, ಬಾಚಣಿಗೆ, ಹೇರ್‌ಪಿನ್‌, ರಬ್ಬರ್‌, ರಿಬ್ಬನ್‌, ಕುಂಕುಮ ಡಬ್ಬಿ, ಅಲಂಕಾರಿಕ ಹೂವಿನ ಹಾರಗಳು ಸೇರಿದಂತೆ ನೂರಾರು ರೀತಿಯ ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ತೆರೆದು ವಹಿವಾಟು ನಡೆಸುವ ಮೂಲಕ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ 3 ವರ್ಷಗಳಿಂದ ಇಂತಹ ಜಾತ್ರೆಗಳು, ಉರುಸ್‌, ವಿಶೇಷ ಉತ್ಸವ ರದ್ದಾಗಿರುವ ಕಾರಣ ಅವರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ ಎಂದರು.
ಅಂದು ದುಡಿದು ಬಂದ ಹಣದಲ್ಲಿ ತಿಂದು ಬದುಕುತಿದ್ದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ, ಹಾಗಾಗಿ ಜಿಲ್ಲಾಡಳಿತ ಪಬ್‌, ಬಾರ್‌, ಸಿನಿಮಾ ಟಾಕೀಸ್‌, ಮನರಂಜನಾ ಸ್ಥಳಗಳಿಗೆ ಅನುಮತಿ ನೀಡಿದ ರೀತಿಯೇ ಈ ಬಡ ವ್ಯಾಪಾರಿಗಳಿಗೂ ಅನುಮತಿ ನೀಡಿ ಅವರು ಜೀವನ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕೆಂಬುದು ನಮ್ಮ ಮನವಿಯಾಗಿದೆ. ಒಂದು ವೇಳೆ ಜಿಲ್ಲಾಡಳಿತ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ವ್ಯಾಪಾರಿಗಳ ಕುಟುಂಬದವರೊಂದಿಗೆ ಸೇರಿ ಜಿಲ್ಲಾಡಳಿಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅತೀಕ್‌ ಅಹಮದ್‌ ತಿಳಿಸಿದರು.
ಕಡ್ಲೆಪುರಿ ವ್ಯಾಪಾರಿ ತಿಪ್ಪೇಸ್ವಾಮಿ ಮಾತನಾಡಿ, ಒಂದು ಜಾತ್ರೆಗೆ ಕಡ್ಲೆಪುರಿ ಅಂಗಡಿ ಹಾಕಿದರೆ ಸುಮಾರು 150 ರಿಂದ 200 ಚೀಲ ಕಡ್ಲೆಪುರಿ ಮಾರಾಟ ಮಾಡುತ್ತಿದ್ದವು, ನಮ್ಮಂತೆ ಇತರೆ ಸೀಜನಬಲ್‌ ವ್ಯಾಪಾರಸ್ಥರು ಸಹ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡಸುತ್ತಿದ್ದರು, ಜಾತ್ರೆ, ಉರುಸ್‌, ಹಬ್ಬದ ಸಂದರ್ಭಗಳಲ್ಲಿ ಅಲ್ಲಿನ ಆಡಳಿತ ಮಂಡಳಿ ವಿಧಿಸುವ ಸುಂಕ ಪಾವತಿಸಿ ನಾವುಗಳು ವ್ಯಾಪಾರ ನಡೆಸಿ, ಬಂದ ಹಣದಲ್ಲಿ ಮನೆ ಬಾಡಿಗೆ, ಮಕ್ಕಳ ಓದು, ಗಾಡಿ ಬಾಡಿಗೆ ಎಲ್ಲವನ್ನು ನಿರ್ವಹಿಸುತ್ತಾ ಬಂದಿದ್ದವು, ಆದರೆ ಕಳೆದ ಮೂರು ವರ್ಷಗಳಿಂದ ಜಾತ್ರೆಗಳು ಬಂದಾಗಿವೆ, ಈಗ ಜಿಲ್ಲಾಡಳಿತ ಜಾತ್ರೆಗಳಲ್ಲಿ ನಾವು ವ್ಯಾಪಾರ ಮಾಡುವ ವಸ್ತುಗಳನ್ನು ಹಾಕದಂತೆ ನಿರ್ಭಂಧ ವಿಧಿಸಿದೆ, ಹಾಗಾಗಿ ಜೀವನ ನಡೆಸುವುದು ತುಂಬ ಕಷ್ಟವಾಗಿದ್ದು, ವಿಷ ಕುಡಿಯುವುದೊಂದು ಬಾಕಿ ಎಂಬಂತಾಗಿದೆ, ಜಿಲ್ಲಾಡಳಿತ ನಮಗೆ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂಬುದು ಮನವಿಯಾಗಿದೆ ಎಂದರು.
ಈ ವೇಳೆ ವ್ಯಾಪಾರಿಗಳಾದ ಸೈಯದ್‌ ಮುಖದಂ, ಅಜಯ್‌, ರಾಜು ದಸ್ತಗೀರ್‌ ಸಾಬ್‌ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!