ಕಲ್ಲು ಗಣಿಗಾರಿಕೆ ನಿಲ್ಲಿಸದಿದ್ರೆ ಉಗ್ರ ಹೋರಾಟ: ಬೆಮೆಲ್

197

Get real time updates directly on you device, subscribe now.

ತುರುವೇಕೆರೆ: ಶಾಸಕರೇ, ಸಂಸದರೆ ರಾಜಕೀಯ ಬದಿಗಿರಿಸಿ ಕೋಳಘಟ್ಟ ಜನತೆಯ ಸಮಸ್ಯೆಗೆ ಪರಿಹಾರ ದೊರಕಿಸಿ, ಮಾನವೀಯತೆ ಪ್ರದರ್ಶಿಸಿ ಎಂದು ಕಾಂಗ್ರೆಸ್ ವಕ್ತಾರ ಮುರುಳಿಧರ ಹಾಲಪ್ಪ ಆಗ್ರಹಿಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕಳೆದ 4 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕೋಳಘಟ್ಟ ಗ್ರಾಮದ ಜನತೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಕಳೆದ ಒಂದೂವರೆ ತಿಂಗಳಿನಿಂದ ಕಲ್ಲುಗಣಿಗಾರಿಕೆ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡದಿರುವುದು ಬೇಸರದ ಸಂಗತಿ, ಕೋಳಘಟ್ಟ ಜನ ವಸತಿ ಪ್ರದೇಶದಲ್ಲಿ ಸ್ಫೋಟಕದಿಂದ ಅನಾಹುತ ಸಂಭವಿಸುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಗಣಿ ಸಚಿವರಿಗೆ ತುರುವೇಕೆರೆ ಎಲ್ಲಿ ಬರುತ್ತದೆ ಎಂದು ತಿಳಿಯದಾಗಿದೆ ಎಂದರು.
ಮಾಜಿ ಎಂಎಲ್ಸಿ ಸದಸ್ಯ ಬೆಮೆಲ್ ಕಾಂತರಾಜ್ ಮಾತನಾಡಿ ಕೋಳಘಟ್ಟ ಕಲ್ಲು ಗಣಿಗಾರಿಕೆಯನ್ನು ಗ್ರಾಮಸ್ಥರ ಒತ್ತಾಯದಂತೆ ಸ್ಥಗಿತಗೊಳಿಸುವ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಳ್ಳಬೇಕು, ಸ್ಥಳೀಯರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಮುಂದಾಗದಿದ್ದರೆ ತುರುವೇಕೆರೆ ಬಂದ್ ಮಾಡುವ ಮೂಲಕ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೆ ದಿನಕ್ಕೆ ಕಾಲಿರಿಸಿದೆ, ಕಳೆದ ಮೂರು ದಿನಗಳಿಂದ ಗ್ರಾಮದ ಮಹಿಳೆಯರು ಹಾಗೂ ಪರುಷರು ಪ್ರತಿಭಟನೆಗೆ ಸೀಮಿತವಾಗಿದ್ದರು. ಒಟ್ಟಾರೆ ಇಡೀ ಕೋಳಘಟ್ಟ ಗ್ರಾಮವೇ ತಾಲೂಕು ಕಚೇರಿ ಆವರಣಕ್ಕೆ ಸ್ಥಳಾಂತರಗೊಂಡಿದ್ದು, ಅಡುಗೆ ತಯಾರು ಮಾಡಿಕೊಂಡು ಬಯಲ ಭೋಜನ ಮಾಡುತ್ತಿದ್ದಾರೆ. ಇದೀಗ ಗ್ರಾಮದಲ್ಲಿದ್ದ ತಮ್ಮ ದನ ಕರುಗಳನ್ನು ತಾಲೂಕು ಕಚೇರಿ ಆವರಣದಲ್ಲಿ ಕಟ್ಟುವ ಮೂಲಕ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚೌದ್ರಿರಂಗಪ್ಪ, ಬೆಸ್ಕಾಂ ಮಾಜಿ ನಿರ್ದೇಶಕ ವಸಂತಕುಮಾರ್, ದಾನಿಗೌಡ, ರೈತ ಸಂಘದ ಅಧ್ಯಕ್ಷರಾದ ತಿಮ್ಮಲಾಪುರ ಶಂಕರಣ್ಣ, ನಾಗೇಂದ್ರ, ಶ್ರೀನಿವಾಸ್ಗೌಡ, ಕಿಸಾನ್ ಘಟಕದ ಸ್ವರ್ಣಕುಮಾರ್, ಪಪಂ ಸದಸ್ಯ ಯಜಮಾನ್ ಮಹೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!