ಅತ್ಯಾಧುನಿಕವಾಗಿ ಎಂ.ಜಿ.ಸ್ಟೇಡಿಯಂ ನಿರ್ಮಾಣ

ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರಲಿದೆ: ಡಾ.ಪರಮೇಶ್ವರ್

2,412

Get real time updates directly on you device, subscribe now.

ತುಮಕೂರು: ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 52 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿಂಥೆಟಿಕ್‌ ಟ್ರ್ಯಾಕ್‌ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ ಕ್ರೀಡಾಂಗಣ ನಿರ್ಮಾಣ ಕಾಮಗಾರಿಯನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್‌ ಅಥ್ಲೆಟಿಕ್‌ ಅಸೊಸಿಯೇಷನ್‌ ಅಧ್ಯಕ್ಷ, ಶಾಸಕ ಡಾ.ಜಿ.ಪರಮೇಶ್ವರ್‌ ಪರಿಶೀಲನೆ ನಡೆಸಿದರು.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಶಾಸಕ ಜ್ಯೋತಿಗಣೇಶ್‌ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಪರಮೇಶ್ವರ್‌ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುತ್ತಿರುವ ಸಿಂಥೆಟಿಕ್‌ ಟ್ರ್ಯಾಕ್‌, ಕೊಠಡಿ, ಜಿಮ್ನಾಸ್ಟಿಕ್‌, ಫುಟ್ ಬಾಲ್‌ ಕೋರ್ಟ್‌ ಸೇರಿದಂತೆ ಎಲ್ಲವನ್ನು ವೀಕ್ಷಿಸಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಭಾರತದಲ್ಲೇ ಅತ್ಯಾಧುನಿಕ ಸೌಲಭ್ಯಕ್ಕೆ ಹೊಂದಿಕೊಂಡಂತೆ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾವನೆಯನ್ನು ನಾನು ಸಚಿವನಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರದ ಮುಂದೆ ಇಡಲಾಗಿತ್ತು, ಅದೇ ಸಂದರ್ಭದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿತ್ತು, ಈ ಎಲ್ಲಾ ಸಂದರ್ಭವನ್ನು ಬಳಸಿಕೊಂಡು 52 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕ್ರೀಡಾಂಗಣವನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗುತ್ತಿದೆ ಎಂದರು.
ಕರ್ನಾಟಕದಲ್ಲೇ ಅತ್ಯಾಧುನಿಕ ಸೌಲಭ್ಯವುಳ್ಳ ಕ್ರೀಡಾಂಗಣ ಇದಾಗಲಿದೆ. ಫುಟ್ ಬಾಲ್‌ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡಲು ಈ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ, ಈ ಕ್ರೀಡಾಂಗಣದಲ್ಲಿ ಸುಮಾರು 800 ಕ್ರೀಡಾಪಟುಗಳು ವಾಸ್ತವ್ಯ ಹೂಡಲು ಸಹ ಕೊಠಡಿಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗುತ್ತಿದೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸಲು ಈ ಕ್ರೀಡಾಂಗಣ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದರು.
ತುಮಕೂರಿನಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ, ಈ ಕ್ರೀಡಾಂಗಣದಲ್ಲೇ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸಲು ತುಂಬಾ ಅನುಕೂಲವಾಗಲಿದೆ, ಈ ನಿಟ್ಟಿನಲ್ಲಿ ಶಾಸಕ ಜ್ಯೋತಿಗಣೇಶ್‌ ಬಹಳ ಆಸಕ್ತಿ ವಹಿಸಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ರೀಡಾಂಗಣವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದರು.
ಬಹಳ ಉತ್ತಮ ಕ್ರೀಡಾಂಗಣ ತುಮಕೂರಿಗೆ ಅವಶ್ಯಕತೆ ಇತ್ತು, ಆ ಕೆಲಸ ಈಗ ಆಗುತ್ತಿದೆ, ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಈ ಕ್ರೀಡಾಂಗಣ ಸಹಕಾರಿಯಾಗಲಿದೆ ಎಂದರು.
ಅಬ್ಬತ್ತನಹಳ್ಳಿಯ ಅಥ್ಲೆಟ್‌ ಪ್ರಿಯಾ ಮೋಹನ್‌ ಎಂಬ ಹುಡುಗಿ ಫ್ರಾನ್ಸ್ ಗೆ ಹೋಗುತ್ತಿದ್ದಾರೆ, ಅವರಿಗೆ ನನ್ನ ಪ್ರೋತ್ಸಾಹ ಸದಾ ಇದ್ದೇ ಇರುತ್ತದೆ ಎಂದರು.
ಕಂಠೀರವ ಸ್ಟೇಡಿಯಂಗೆ ಹೊಂದಿಕೊಂಡಂತೆ ತ್ರಿ ಸ್ಟಾರ್‌ ಹೋಟೆಲ್‌ ನಿರ್ಮಿಸುವಂತೆ ಸರ್ಕಾರದ ಮುಂದೆ ನಾವು ಪ್ರಸ್ತಾವನೆ ಇಟ್ಟಿದ್ದೇವೆ, ಸುಮಾರು 2 ಸಾವಿರ ಕೋಟಿ ಇನ್ವೆಸ್ಟ್ಮೆಂಟ್ ನ ಪ್ರಸ್ತಾವನೆ ಇದಾಗಿದೆ, ಇನ್ನು ಸರ್ಕಾರ ಈ ಪ್ರಸ್ತಾವನೆಗೆ ಅನುಮತಿ ನೀಡಿಲ್ಲ ಎಂದರು ತಿಳಿಸಿದರು.
ವಿದೇಶಗಳಲ್ಲಿ ಸ್ಟೇಡಿಯಂಗಳಲ್ಲಿ ಫೈಸ್ಟಾರ್‌, ತ್ರಿಸ್ಟಾರ್‌ ಹೋಟೆಲ್ ಗಳನ್ನು ಆರಂಭಿಸಿ, ಅದರಲ್ಲಿ ಬರುವ ಆದಾಯವನ್ನು ಕ್ರೀಡಾಂಗಣದ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ, ಅದೇ ರೀತಿ ನಮ್ಮಲ್ಲೂ ಮಾಡುವ ಚಿಂತನೆ ನಡೆಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಮಕ್ಕಳು ಸರಿ ದಾರಿಯಲ್ಲಿ ನಡೆಯಲು, ಶಿಸ್ತಿನಿಂದ ಬೆಳೆಯಲು ಕ್ರೀಡೆ ಅತ್ಯವಶ್ಯಕವಾಗಿದೆ, ಹಾಗಾಗಿ ಕ್ರೀಡೆಯಲ್ಲಿ ನಮ್ಮ ರಾಜ್ಯಕ್ಕೆ ಹೆಸರು ತರಲು ಹಣ ಖರ್ಚು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯೇ ನಡೆಯುತ್ತಿಲ್ಲ, ಬಿಪಿಎಡ್‌, ಸಿಪಿಎಡ್‌ ವ್ಯಾಸಂಗ ಮಾಡಿರುವವರು ಮನೆಯಲ್ಲಿ ಉಳಿಯುವಂತಾಗಿದೆ, ಹಾಗಾಗಿ ಈ ನಿಟ್ಟಿನಲ್ಲಿ ಗಮನ ಹರಿಸಿ ಕ್ರೀಡೆಗೆ ಹೆಚ್ಚು ಒತ್ತು ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ಹೇಳಿದರು.
ತಾಲ್ಲೂಕು ಕೇಂದ್ರಗಳಲ್ಲಿ ಇಂತಹ ಕ್ರೀಡಾಂಗಣಗಳನ್ನು ನಿರ್ಮಿಸಲು ಆಗುವುದಿಲ್ಲ, 400 ಮೀಟರ್‌ ಅಳತೆಯ ಕ್ರೀಡಾಂಗಣಗಳು ನಿರ್ಮಾಣವಾಗಿವೆ, ನಮ್ಮ ಮಕ್ಕಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಇಂತಹ ಸೌಲಭ್ಯ ಒದಗಿಸಬೇಕಾಗಿದೆ, ಹಾಗಾಗಿ ಜಿಲ್ಲಾ ಮಟ್ಟದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಕ್ರೀಡಾಂಗಣ ನಿರ್ಮಾಣದ ಅವಶ್ಯಕತೆ ಇದೆ, ಅತ್ಯಾಧುನಿಕ ಸೌಲಭ್ಯದ ಕ್ರೀಡಾಂಗಣ ತುಮಕೂರು ಜಿಲ್ಲೆಯ ಕ್ರೀಡಾಪಟುಗಳಿಗೆ ದೊರೆಯುತ್ತಿದೆ, ಇದನ್ನು ಉಪಯೋಗಿಸಿಕೊಂಡು ಜಿಲ್ಲೆಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು ಎಂದು ಸಲಹೆ ಮಾಡಿದರು.
ಕ್ರೀಡಾಂಗಣದ ಉದ್ಘಾಟನೆಗೆ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಷ್ಟ್ರೀಯ ಕ್ರೀಡಾಪಟುಗಳು ಎಲ್ಲರನ್ನು ಆಹ್ವಾನಿಸಲಾಗುವುದು, ಜೊತೆಗೆ ಅಂತಾರಾಷ್ಟ್ರೀಯ ಚಾಂಪಿಯನ್‌ ಶಿಪ್‌ ಸಹ ಮಾಡಲಾಗುವುದು ಎಂದರು.
ಶಾಸಕ ಜ್ಯೋತಿಗಣೇಶ್‌ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥ್ಲೆಟಿಕ್‌ ಅಸೋಸಿಯೇಷನ್‌ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್‌ ಅವರು ಕ್ರೀಡಾಂಗಣದ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಏನಾದರೂ ಬದಲಾವಣೆ ಅಗತ್ಯವಿದ್ದರೆ ಅವರಿಂದ ಸಲಹೆ ಸೂಚನೆ ಪಡೆದು ಆ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್‌ ಮೋಹನ್ ಕುಮಾರ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಪಾಲಿಕೆ ವಿಪಕ್ಷ ನಾಯಕ ಜೆ.ಕುಮಾರ್‌, ಅಥ್ಲೆಟಿಕ್‌ ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ್‌, ಹಿರಿಯ ಕ್ರೀಡಾಪಟುಗಳಾದ ಬಾಲಾಜಿ, ವೇಣುಗೋಪಾಲ್‌, ಆನಂದ್‌, ಗುರುಪ್ರಸಾದ್‌, ಪ್ರದೀಪ್‌, ಶಿವಪ್ರಸಾದ್‌, ಸುಧೀರ್‌ ದೇವದಾಸ್‌, ಮಲ್ಲಣ್ಣ, ಅನಿಲ್‌ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!