ಚಿರತೆಗಳ ಹಾವಳಿ ತಡೆಗೆ ಗ್ರಾಮಸ್ಥರ ಆಗ್ರಹ

382

Get real time updates directly on you device, subscribe now.

ಮಧುಗಿರಿ: ಚಿರತೆಗಳು ಸಾರ್‌ ಚಿರತೆಗಳು, ಅರಣ್ಯ ಇಲಾಖಾಧಿಕಾರಿಗಳು ಎಲ್ಲಿ ಸಾರ್‌ ಎಂದು ಪಟ್ಟಣದ ಪುರಸಭೆ ವ್ಯಾಪ್ತಿಯ ಸೀಮೆಯಾದ ಬಾವಿ ಸಮೀಪ ವಾಸಿಸುತ್ತಿರುವ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.

ಕಳೆದ ಒಂದು ವಾರದಿಂದ ರಾತ್ರಿಯಾಗುತ್ತಿದ್ದಂತೆ ವಿಶ್ವಪ್ರಸಿದ್ಧ ಏಕಶಿಲಾ ಬೆಟ್ಟದ ತಪ್ಪಲಿನಲ್ಲಿ 2 ಚಿರತೆಗಳು ಬೆಟ್ಟದ ಬುಡದಲ್ಲಿರುವ ಮನೆ ಹಿಂಬದಿಯಲ್ಲಿ ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿರುತ್ತವೆ, ನಾಯಿ, ಕುರಿ, ದನಗಳ ಮೇಲೆ ಚಿರತೆಗಳು ದಾಳಿ ಮಾಡುತ್ತಿವೆ, ಈ ವೇಳೆ ಪ್ರಾಣಿಗಳ ಚೀರಾಟ ಕಂಡು ಜನ ಭಯಭೀತರಾಗಿದ್ದಾರೆ, ಜನರು ತಮ್ಮ ಪ್ರಾಣ ರಕ್ಷಣೆಗಾಗಿ ಮನೆಗಳನ್ನು ಬಿಟ್ಟು ಹೊರಗಡೆ ಬರುತ್ತಿಲ್ಲ, ಕೆಲವು ಯುವಕರು ಪಟಾಕಿಗಳನ್ನು ಸಿಡಿಸಿದರೂ ಕೂಡ ಚಿರತೆಗಳು ಜಗ್ಗುತ್ತಿಲ್ಲ.
ರಾತ್ರಿ 8 ಆಗುತ್ತಿದ್ದಂತೆ ಚಿರತೆಗಳು ಕಾಣಿಸುತ್ತಿವೆ, ಬೆಳಗ್ಗೆ 9 ಗಂಟೆವರೆಗೂ ಮನೆಯಿಂದ ಯಾರು ಹೊರ ಬರುವಂತಿಲ್ಲ, ಇತ್ತೀಚೆಗೆ ಆನಂದ ರಾಯನ ಗುಡ್ಡ ಬೆಟ್ಟದಲ್ಲಿ ಹಾಡ ಹಗಲಿನಲ್ಲಿ ಚಿರತೆಗಳು ಕಂಡು ಬಂದಿತ್ತು, ಸಾರ್ವಜನಿಕರು ಕಣ್ಣಾರೆ ಕಂಡಿದ್ದರು. ಈಗ ರಾತ್ರಿಯಾಗುತ್ತಿದ್ದಂತೆ ಚಿರತೆಗಳು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಚಿರತೆ ಹಿಡಿಯುವ ಬೋನು ಇಡುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ವಾಸಿಸುತ್ತಿರುವ ಬಹುತೇಕರು ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು ಕೂಲಿಗೆ ಹೋಗಿ ಮನೆಯಲ್ಲಿ ಮಹಿಳೆಯರು ಒಂಟಿ ಇರುತ್ತಾರೆ ಈ ವೇಳೆಯಲ್ಲಿ ಏನಾದರೂ ಹಗಲಿನ ವೇಳೆಯಲ್ಲಿ ಚಿರತೆಗಳು ಕಂಡರೆ ಚಿರತೆಗಳು ಬಂದರೆ ಏನು ಮಾಡುವುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕರಡಿಗಳ ಕಾಟ ಇದ್ದು ಸಾರ್ವಜನಿಕರು ಜೀವ ಭಯದಲ್ಲೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಚಿರತೆ ಹಾವಳಿ ತಪ್ಪಿಸಿ
ಪುರಸಭೆ ವ್ಯಾಪ್ತಿಯ ಇಪ್ಪತ್ತೊಂದನೇ ವಾರ್ಡ್‌ನ ಸಿಹಿನೀರು ಬಾವಿ ಸಮೀಪ ಚಿರತೆಗಳು ವಾರದಿಂದ ರಾತ್ರಿಯಾಗುತ್ತಿದ್ದಂತೆ ಬಂದು ಜನರಿಗೆ ಉಪಟಳ ನೀಡುತ್ತಿವೆ, ಚಿರತೆ ಬಂದ ತಕ್ಷಣ ನಾಯಿ ಬೊಗಳುವ ಶಬ್ದದಿಂದಾಗಿ ನಾಗರಿಕರು ಮನೆ ಬಿಟ್ಟು ಹೊರ ಬಾರದೆ ಮನೆ ಒಳಗೆ ಸೇರಿಕೊಳ್ಳುತ್ತಿದ್ದಾರೆ, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕೂಡ ಯಾವುದೇ ಕ್ರಮ ಕೈಗೊಳ್ಳದ ಕಾರಣ ಜನರು ಅರಣ್ಯ ಇಲಾಖೆಯ ವಿರುದ್ಧ ಹರಿಹಾಯುತ್ತಿದ್ದಾರೆ.
ಪುರಸಭಾ ವ್ಯಾಪ್ತಿಯೊಳಗೆ ಈ ಘಟನೆ ನಡೆದಿದ್ದು ಇತ್ತೀಚೆಗೆ ಬಸವಣ್ಣನ ಬೆಟ್ಟದ ಮೇಲೆ 4 ಚಿರತೆ ಇದ್ದವು, ಅದನ್ನು ಸಾರ್ವಜನಿಕರು ಕಣ್ಣಾರೆ ಕಂಡಿದ್ದರು, ಇನ್ನಾದರೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!