ಹೈನುಗಾರಿಕೆಯಿಂದ ರೈತರ ಅಭಿವೃದ್ಧಿ ಸಾಧ್ಯ

105

Get real time updates directly on you device, subscribe now.

ಕುಣಿಗಲ್‌: ಅತಿವೃಷ್ಟಿ, ಅನಾವೃಷ್ಟಿ ಯಿಂದ ರೈತರ ಆರ್ಥಿಕ ಸ್ಥಿತಿ ಕುಂಠಿತಗೊಂಡ ಸಮಯದಲ್ಲಿ ಸಹಕಾರಿ ಹೈನುಗಾರಿಕೆ ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಸಹಕಾರಿಯಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ, ಪಿಎಲ್‌ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌ ಹೇಳಿದರು.

ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಲ್ಲಿ ಕೋಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಉಪ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕೊವಿಡ್‌ನಿಂದಾಗಿ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಉದ್ದಿಮೆಗಳು ಮುಚ್ಚಿ ಹೋಗಿದ್ದ ಕಷ್ಟದ ಸಂದರ್ಭದಲ್ಲಿ ಸಹಕಾರಿ ಹೈನುಗಾರಿಕೆ ನಿರಂತರವಾಗಿ ನಡೆದು ಲಾಕ್‌ಡೌನ್‌ ಅವಧಿಯಲ್ಲೂ ತಾಲೂಕಿನ ಹೈನುಗಾರ ರೈತರ ಮನೆ ಬಾಗಿಲಿಗೆ 23 ಕೋಟಿ ರೂ. ಹಣ ಬಟವಾಡೆ ಮಾಡುವ ಮೂಲಕ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಒಕ್ಕೂಟ ಶ್ರಮಿಸಿದೆ. ರೈತರು ಒಕ್ಕೂಟದ ಸವಲತ್ತು ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ಇತ್ತೀಚೆಗೆ ರಾಸುಗಳಿಗೆ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದು ಇವುಗಳಿಂದ ರಕ್ಷಣೆಗೆ ಲಸಿಕೆ ಹಾಕಿಸುವ ಜೊತೆಯಲ್ಲಿ ರಾಸುಗಳಿಗೆ ಅತ್ಯಲ್ಪ ಮೊತ್ತ ನೀಡಿ ವಿಮೆ ಮಾಡಿಸುವ ಮೂಲಕ ಯಾವುದೇ ಅನಾಹುತ ಸಂಭವಿಸಿದಲ್ಲಿ ಆರ್ಥಿಕ ನಷ್ಟದಿಂದ ಪಾರಾಗಬಹುದು, ಹೈನುಗಾರರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಒಕ್ಕೂಟವು ಲಾಭ ಗಳಿಸುವ ಜೊತೆ ತಾವು ಲಾಭ ಗಳಿಸಬಹುದು, ತಾಲೂಕಿನಲ್ಲಿ ರೈತರು ನೀರಾವರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಬೇಕೆಂದರು.
ಕಿತ್ತನಾಗಮಂಗಲ ಅರೆಶಂಕರ ಮಠಾಧೀಶ ಸಿದ್ದರಾಮ ಚೈತನ್ಯಸ್ವಾಮೀಜಿ ಮಾತನಾಡಿ, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ರೈತರು ಕೂಡ ತಮ್ಮ ಜೀವನ ಗುಣಮಟ್ಟ ಸುಧಾರಣೆಗೆ ಹೆಚ್ಚು ಒತ್ತು ನೀಡಬೇಕು, ಕೃಷಿ ಚಟುವಟಿಕೆಗಳ ಜೊತೆಯಲ್ಲಿ ಕೃಷಿಯಾಧಾರಿತ ಇತರೆ ಉಪ ಕಸುಬು ಕೈಗೊಂಡು ದುಶ್ಚಟಗಳಿಂದ ದೂರಾಗಿ ಉತ್ತಮ ಜೀವನ ನಡೆಸುವಂತಾಗಬೇಕೆಂದರು.
ಕೋಡಿಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬೀರಯ್ಯ ಹಾಗೂ ನಿರ್ದೇಶಕರು, ಮುಖಂಡ ಗಂಗರಂಗಯ್ಯ, ಒಕ್ಕೂಟದ ಉಪ ವ್ಯವಸ್ಥಾಪಕಿ ನವ್ಯಶ್ರೀ, ಎಡೆಯೂರು ಹಾಲು ಶೀಥಲಿಕರಣ ಕೇಂದ್ರದ ವ್ಯವಸ್ಥಾಪಕ ಕುಮಾರ್‌ ಸೇರಿದಂತೆ ಒಕ್ಕೂಟದ ವಿಸ್ತರಣಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!