ನಟ ಚೇತನ್‌ ಬಂಧನ ವಿರೋಧಿಸಿ ಪ್ರತಿಭಟನೆ

179

Get real time updates directly on you device, subscribe now.

ತುಮಕೂರು: ನಟ ಚೇತನ ಅಹಿಂಸಾರನ್ನು ಬಂಧಿಸಿರುವುದನ್ನ ಖಂಡಿಸಿ, ಪೊಲೀಸರು ಮತ್ತು ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರನ್ನು ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.

ದಲಿತ ಸ್ವಾಭಿಮಾನಿ ಸಂಘಟನೆ ರಾಜ್ಯಾಧ್ಯಕ್ಷ ಬಂಡೆ ಕುಮಾರ್‌ ಮಾತನಾಡಿ ನಟ ಚೇತನ್‌ ಅವರು ನ್ಯಾಯಾಧೀಶರನ್ನು ನಿಂದನೆ ಮಾಡಿರುವ ಆರೋಪದ ಮೇಲೆ ಸುಮೋಟೋ ಕೇಸ್‌ ದಾಖಲಿಸಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿರುವುದು ಸಂವಿಧಾನ ಬದ್ಧವಾಗಿಲ್ಲ, ಬಿಜೆಪಿ ಸರ್ಕಾರದಲ್ಲಿ ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ನೀಡಿರುವವರ ಮೇಲೆ ಕ್ರಮ ಕೈಗೊಳ್ಳದೆ ಚೇತನ್‌ ಅವರ ಮೇಲೆ ಏಕಾಏಕಿ ಪೊಲೀಸರೆ ಸ್ವಯಂ ಪ್ರಕರಣ ದಾಖಲಿಸಿರುವುದರ ಹಿಂದೆ ಲಜ್ಜೆಗೆಟ್ಟ ಸರ್ಕಾರಕ್ಕೆ ಧಿಕ್ಕಾರವಿರಲಿ ಎಂದು ಆಕೋಶ ಹೊರ ಹಾಕಿದರು.
ಈ ವೇಳೆ ಭೂಮಿ ಮತ್ತು ವಸತಿ ಹೋರಾಟ ಸಮಿತಿ ಸಂಚಾಲಕ ಅಂದ್ರಾಳ ನಾಗಭೂಷಣ್‌ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅನ್ಯಾಯ ಖಂಡಿಸುವ, ಪ್ರಶ್ನಿಸುವ ಅಭಿವ್ಯಕ್ತಿಯ ಸ್ವಾತಂತ್ರ್ಯದ ಹಕ್ಕನ್ನು ಹೊಂದಿದ್ದಾರೆ, ಆದರೆ ಸಾಮಾಜಿಕ ಕಾರ್ಯಕರ್ತ ಚೇತನ್‌ ಅವರನ್ನು ಯಾವುದೇ ಮಾಹಿತಿ ನೀಡದೆ ಬಂಧಿಸಿರುವುದು ಖಂಡನೀಯ ಹಾಗೂ ಅಸಂವಿಧಾನಿಕವಾಗಿದೆ, ಕೂಡಲೇ ರಾಜ್ಯಪಾಲರು ಎಚ್ಚೆತ್ತು ಪೊಲೀಸರು ಹಾಗೂ ಸರ್ಕಾರವನ್ನು ವಜಾ ಮಾಡಬೇಕೆಂದು ಒತ್ತಾಯಿಸಿದರು.
ಕೊಡಿಯಾಲ ಮಹಾದೇವ ಮಾತನಾಡಿದರು. ಈ ವೇಳೆ ಮುಖಂಡರಾದ ರಾಮೂರ್ತಿ, ಅಗ್ರಹಾರ ಜೆಟ್ಟಿ ನಾಗರಾಜು, ಕೆಂಚರಾಯ, ರಂಗಸ್ವಾಮಿ, ಹೆಗ್ಗೆರೆ ಕೃಷ್ಣ ಮೂರ್ತಿ, ಪೂಜಾ ಹನುಮಯ್ಯ, ಸುರೇಶ್‌, ಗಣೇಶ್‌, ನಾಗೇಶ್‌ ಸೇರಿದಂತೆ ಹಲವರು ಇದ್ದರು.

Get real time updates directly on you device, subscribe now.

Comments are closed.

error: Content is protected !!