ಸಂವಿಧಾನ ಶಿಕ್ಷಣದ ಮೂಲ ಪಠ್ಯವಾಗಲಿ: ಕೆ.ದೊರೆರಾಜ್

229

Get real time updates directly on you device, subscribe now.

ತುಮಕೂರು: ದೇಶದಲ್ಲಿ ನಿಮಾರ್ಣವಾಗಿರುವಸಂವಿಧಾನ ವಿರೋಧಿ ವಾತಾವರಣ ಇಂದು ಜನರನ್ನು ಉದ್ರೇಕಗೊಳಿಸುವ ಪ್ರಕ್ರಿಯೆಗೆ ಒಳಗಾಗುತ್ತಿದ್ದು, ಸನಾತನ ಸಿದ್ಧಾಂತ ಪ್ರತಿಪಾದಿಸುವ ಸಂಘಟನೆಯ ಕೈಗೆ ಅಧಿಕಾರ ಸಿಕ್ಕಿರುವುದರಿಂದ ಪ್ರಜಾಪ್ರಭುತ್ವವನ್ನು ಬಹುಸಂಖ್ಯೆಯ ಆಧಾರದಲ್ಲಿ ದುರುಉಪಯೋಗ ಮಾಡಿಕೊಳ್ಳಲಾಗುತ್ತಿದೆ, ಆದ್ದರಿಂದ ಸಂವಿಧಾನದ ಆಶಯಗಳ ಬಗ್ಗೆ ನಮ್ಮ ಶಿಕ್ಷಣದ ಮೂಲ ಪಠ್ಯವಾಗಿಸಬೇಕೆಂದು ಹಿರಿಯ ಚಿಂತಕ ಕೆ.ದೊರೆರಾಜ್‌ ಅಭಿಪ್ರಾಯಪಟ್ಟರು.

ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಸಂವಿಧಾನ ಸ್ನೇಹಿ ಬಳಗದಿಂದ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನ ಸಾಮಾನ್ಯರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲದಿರುವುದರಿಂದ ದೇಶದಲ್ಲಿ ಕೋಮು ಉದ್ವೇಗ ಪರಿಸ್ಥಿತಿ ನಿರ್ಮಾಣವಾಗಿದೆ, ಬಲಪಂಥೀಯ ಅಧಿಕಾರವನ್ನು ಕೆಳಗಿಳಿಸಲು ಯುವ ಜನರನ್ನು ಹಾಗೂ ಅಸಂಘಟಿತ ವಲಯದಲ್ಲಿರುವ ಸಾಮಾನ್ಯರನ್ನು ಬೌದ್ಧಿಕವಾಗಿ ಸಂವಿಧಾನದ ಮೌಲ್ಯಗಳ ಬಗ್ಗೆ ಮನವರಿಕೆ ಮಾಡುವ ಮೂಲಕ ಸೈದ್ಧಾಂತಿಕ ಸಂಘರ್ಷವನ್ನು ಸಂವಿಧಾನದ ಸಿದ್ಧಾಂತದ ಮೇಲೆ ಕೆಳಗಿಳಿಸಬೇಕಿದೆ, ಇದಕ್ಕಾಗಿ ನಾವು ವ್ಯಾಪಕ ಅರಿವು ಮತ್ತು ಜಾಗೃತಿ ಕೈಗೊಂಡು ಸ್ವಾತಂತ್ರ, ಸಮಾನತೆ, ಬಂಧುತ್ವ ಹಾಗೂ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಜನ ಸಾಮಾನ್ಯರನ್ನು ಮತ್ತು ಯುವ ಜನರನ್ನು ತಲುಪಬೇಕು, ಜನರ ಮಾತುಗಳನ್ನು ನಾವು ಕೇಳಿಸಿಕೊಂಡು ನಂತರ ಕಾರ್ಯಕ್ರಮ ರೂಪಿಸಬೇಕು, ಹಾಗಾಗಿ ಸಂವಿಧಾನ ವಿರೋಧಿಯಾಗಿರುವ ರಾಜಕೀಯ ಪಕ್ಷ ಮತ್ತು ಸಂಘಟನೆಗಳನ್ನು ಹೊರತು ಪಡಿಸಿ ಜನ ಸಾಮಾನ್ಯರನ್ನು ಪ್ರತಿನಿಧಿಸುವ ಸಂಘಟನೆಗಳ ಜೊತೆಗೂಡಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಬದುಕಿನ ಮೇಲಾಗುವ ಅನಾಹುತಗಳನ್ನು ತಪ್ಪಿಸುವ ಮೂಲಕ ಮನುಷ್ಯ ಸಮಾಜವನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.
ಸಮಾಲೋಚನಾ ಸಭೆಯಲ್ಲಿ ಎಐಎಂಎಸ್‌ಎಸ್‌ಸಂಘಟನೆಯ ಕಲ್ಯಾಣಿ ಮತ್ತು ಅಶ್ವಿನಿ, ಸ್ಲಂಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ, ಎಪಿಸಿಆರ್‌ ಸಂಘಟನೆಯ ತಾಜೂದ್ದೀನ್‌ ಶರೀಫ್‌, ಮಾದಿಗ ದಂಡೋರದ ಆಟೋ ಶಿವರಾಜ್‌ ಮಾತನಾಡಿ, ಸಂವಿಧಾನದ ಮೌಲ್ಯಗಳು ಹಾಗೂ ದೇಶದಲ್ಲಿ ಮತ್ತು ರಾಜ್ಯದಲ್ಲಾಗುತ್ತಿರುವ ಸಂವಿಧಾನ ವಿರೋಧಿ ಘಟನೆಗಳ ಬಗ್ಗೆ ಚರ್ಚಿಸಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಲು ಯುವ ಜನರನ್ನು ತಲುಪಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸಂವಿಧಾನದ ಮೌಲ್ಯಗಳ ಕುರಿತು ಕಾನೂನು ತಜ್ಞರಿಂದ ಜನಪರ ಸಂಘಟನೆಗಳ ಮುಖಂಡರಿಗೆ ಅರಿವಿನ ಶಿಬಿರ, ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆ ಕುರಿತು ಚರ್ಚೆ ಹಾಗೂ ಸ್ಲಂಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂವಿಧಾನ ಅರಿವು ಜಾಗೃತಿ ಕೈಗೊಳ್ಳಲು ತೀರ್ಮಾನಿಸಲಾಯಿತು, ಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ವಾಸೀಂ, ಪಿಯುಸಿಎಲ್ ನ ತಿರುಮಲಯ್ಯ, ತುಮಕೂರು ಸ್ಲಂ ಸಮಿತಿಯ ಶಂಕರಯ್ಯ, ಅರುಣ, ಮೋಹನ್‌, ಫಾರೂಕ್‌ ಉಪಸ್ಥಿತರಿದ್ದರು. ಸಂವಿಧಾನ ಸ್ನೇಹಿ ಬಳಗದ ತೇಜಸ್ ಕುಮಾರ್‌ ಸಭೆಯ ನಿರ್ವಹಣೆ ಮಾಡಿದರು.

Get real time updates directly on you device, subscribe now.

Comments are closed.

error: Content is protected !!