ಕಲ್ಲು ಗಣಿಗಾರಿಕೆ ಮಾಡಿ ಶಾಸಕರಿಂದ ಲೂಟಿ

257

Get real time updates directly on you device, subscribe now.

ಕುಣಿಗಲ್: ತಾಲೂಕನ್ನು ಪ್ರತಿನಿಧಿಸಿದ ಯಾವುದೇ ಜನಪ್ರತಿನಿಧಿ ಕಲ್ಲುಗಣಿಗಾರಿಕೆ ಮಾಡಿರಲಿಲ್ಲ, ಶಾಸಕ ಡಾ.ರಂಗನಾಥ್ ತಮ್ಮ ಹೆಸರಲ್ಲಿ ಅಲ್ಲದೆ ಬೇನಾಮಿ ಹೆಸರಲ್ಲಿ ಕಲ್ಲುಗಣಿಗಾರಿಕೆ ವ್ಯಾಪಕವಾಗಿ ಮಾಡಿ ತಾಲೂಕಿನ ಖನಿಜ ಲೂಟಿ ಹೊಡೆದು ತಾಲೂಕಿಗೆ, ಸರ್ಕಾರಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಆರೋಪಿಸಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ಸೋಮವಾರ ಬೀಸೆಗೌಡನದೊಡ್ಡಿಯ ಸರ್ಕಲ್ನಲ್ಲಿ ಶಾಸಕರ ಒಡೆತನದ ರಂಗನಾಥ್ ಸ್ಟೋನ್ ಕ್ರಷರ್ ಹಾಗೂ ಬೇರೆಯವರ ಕ್ರಷರ್ಗಳಿಂದ ಆಗುತ್ತಿರುವ ಮಾಲಿನ್ಯ, ಸಮಸ್ಯೆ ನಿಲ್ಲಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಂದು ವಿವಿಧ ಇಲಾಖಾಧಿಕಾರಿಗಳು ಆಗಮಿಸಿ ಗಣಿಗಾರಿಕೆ ಸಮಸ್ಯೆಯ ವರದಿ ನೀಡಬೇಕು, ಯಾವ ಇಲಾಖಾಧಿಕಾರಿ ಬರುವುದಿಲ್ಲವೊ ಅವರ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸುತ್ತೇವೆ, ತಾಲೂಕಿನಲ್ಲಿ ಗಣಿ ಹಗರಣ ಬಳ್ಳಾರಿ ಗಣಿ ಹಗರಣಕ್ಕಿಂತ ದೊಡ್ಡದಾಗಿದೆ, ಹಾಲಿ ಶಾಸಕರು ತಾಲೂಕಿನಲ್ಲಿ ಮನಬಂದಂತೆ ಕಲ್ಲು ಗಣಿಗಾರಿಕೆ ನಡೆಸುವ ಮೂಲಕ ತಾಲೂಕಿನ ಪರಿಸರ ಹಾಳು ಮಾಡುತ್ತಾ ಜನತೆಗೆ ದ್ರೋಹ ಎಸಗಿದ್ದಾರೆ, ಶಾಸಕರ ಪ್ರಭಾವಕ್ಕೆ ಹೆದರಿ ರಾಜಧನ ಪಾವತಿ ನಿಟ್ಟಿನಲ್ಲಿ ಯಾವುದೇ ಚೆಕ್ ಪೋಸ್ಟ್ ಇಲ್ಲ, ಗಣಿಗಾರಿಕೆ ಬಫಝೋನ್ನಲ್ಲಿ ೫೦೦ ಕೋಟಿ ಮೊತ್ತದ ಕೆಪಿಟಿಸಿಎಲ್ ರಿಸೀವಿಂಗ್ ಸ್ಟೇಷನ್ ಇದೆ, ಶಾಸಕರ ಗಣಿಗಾರಿಕೆಗೆ ಅನುಕೂಲವಾಗಲು ಸುಮಾರು ಆರಕ್ಕೂ ಹೆಚ್ಚು ಗ್ರಾಮ, ಎರಡು ಕೆರೆಯನ್ನೆ ನಕ್ಷೆಯಲ್ಲಿ ತೋರಿಸಿಲ್ಲ, ಇದೆಲ್ಲಾ ನೋಡಿದರೆ ಶಾಸಕರು ತಮ್ಮ ಸ್ವಾರ್ಥಕ್ಕೆ ಎಲ್ಲಾ ಗ್ರಾಮ, ಕೆರೆಗಳನ್ನು ಒಕ್ಕಲೆಬ್ಬಿಸುವ ಅನುಮಾನ ಮೂಡುತ್ತಿದೆ, ಗ್ರಾಮದಲ್ಲಿ ಸಮಸ್ಯೆ ಎದುರಿಸುತ್ತಿರುವ ಮಹಿಳೆ ೧೩ ದಿನದಿಂದ ಪ್ರತಿಭಟನೆ ಮಾಡಿದರೂ ಇದುವರೆಗೂ ಯಾರು ಬಂದು ಸಮಸ್ಯೆ ಆಲಿಸಿಲ್ಲ ಎಂದರೆ ಶಾಸಕ ಕಾರ್ಯವೈಖರಿ ಏನೆಂದು ತಿಳಿಯುತ್ತದೆ, ಅಧಿಕಾರಿಗಳು ಶಾಸಕರ ಪ್ರಭಾವಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ, ಅಧಿಕಾರಿಗಳಿಗೆ ನೆನಪಿರಲಿ ಶಾಸಕ ಡಾ.ರಂಗನಾಥ್ ಅಧಿಕಾರ ಇನ್ನು ಒಂದು ವರ್ಷ ಮಾತ್ರ, ಆಮೇಲೆ ಅಧಿಕಾರಿಗಳ ರಕ್ಷಣೆ ಯಾರು ಮಾಡುವುದಿಲ್ಲ ಎಂದು ಎಚ್ಚರಿಸಿದರು.
ತಾಲೂಕು ಸಂಘದ ಅಧ್ಯಕ್ಷ ಅನಿಲ್ಕುಮಾರ್ ಮಾತನಾಡಿ, ಬೀಸೆಗೌಡನದೊಡ್ಡ ಸುತ್ತಮುತ್ತಲ ಗ್ರಾಮಗಳಲ್ಲಿ ಗಣಿಗಾರಿಕೆಯ ಅಬ್ಬರಕ್ಕೆ ರೇಷ್ಮೆ ಬೆಳೆ ನೆಲ ಕಚ್ಚಿದೆ, ಅವೈಜ್ಞಾನಿಕ ಸ್ಪೋಟಕ್ಕೆ ರೈತರ ಬೋರ್ವೆಲ್ಗಳಲ್ಲಿ ಮೋಟಾರ್ ಕೆಳಗೆ ಬಿದ್ದು ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ, ಶಾಸಕರ ಪ್ರಭಾವಕ್ಕೆ ಹೆದರಿ ಯಾವುದೇ ಅಧಿಕಾರಿಗಳು ರೈತರ ಸಮಸ್ಯೆ ಆಲಿಸಲು ಬರುತ್ತಿಲ್ಲ, ಸೋಮವಾರ ಗಣಿ ಬಾಧಿತ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋರಾಟ ಯಶಸ್ವಿಗೊಳಿಸಬೇಕೆಂದರು.
ಮಾನವಹಕ್ಕು, ಭ್ರಷ್ಟಾಚಾರ ನಿರ್ಮೂಲನ ವೇದಿಕೆ ತಾಲೂಕು ಅಧ್ಯಕ್ಷ ನಿಡಸಾಲೆ ಸತೀಶ್ ಮಾತನಾಡಿ, ಇಬ್ಬರು ಗಣಿ ಉದ್ಯಮಿಗಳ ಮನೆ ದೀಪ ಬೆಳಗಿಸಲು ನೂರಾರು ಬಡವರ ಮನೆಯ ದೀಪ ಆರಿಸಲು ಹೊರಟಿರುವುದು ಖಂಡನೀಯ, ಸೋಮವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಗಣಿ ಮಾಲೀಕರು ಆಗಮಿಸಿ ರೈತರಿಗೆ ಸ್ಪಷ್ಟ ಉತ್ತರ ನೀಡಬೇಕೆಂದರು.
ಪ್ರಮುಖರಾದ ವೆಂಕಟೇಶ್, ಲಕ್ಷ್ಮಣ, ರಂಗಸ್ವಾಮಿ, ಖೈಸರ್, ನಾಗಮ್ಮ, ಲಕ್ಷ್ಮಮ್ಮ, ಶಾರದಮ್ಮ, ಯೋಗೀಶ, ಗ್ರಾಪಂ ಸದಸ್ಯ ಬಸವರಾಜು ಇತರರುಉಪಸ್ಥಿತರಿದ್ದು, ಗಣಿಗಾರಿಕೆ ಸಮಯದಲ್ಲಿ ಬಳಸುವ ಬೃಹತ್ ಸ್ಪೋಟಕದ ವೀಡಿಯೋ, ರಿಗ್ ಯಂತ್ರ ಬಳಸಿ ೬ ಇಂಚು ಸ್ಪೋಟ ಮಾಡುವ ಕುಳಿ ತೋಡುವ ರಿಗ್ ಯಂತ್ರಗಳ ಚಿತ್ರ ಬಿಡುಗಡೆ ಮಾಡಿದರು.

Get real time updates directly on you device, subscribe now.

Comments are closed.

error: Content is protected !!