ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ

ದೇವರಾಯನ ದುರ್ಗಕ್ಕೆ ಹರಿದು ಬಂದ ಭಕ್ತ ಸಾಗರ

257

Get real time updates directly on you device, subscribe now.

ತುಮಕೂರು: ಇತಿಹಾಸ ಪ್ರಸಿದ್ದ ಕರಿಗಿರಿ ಕ್ಷೇತ್ರ ದೇವರಾಯನದುರ್ಗದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕರಿಗಿರಿ ಕ್ಷೇತ್ರದಲ್ಲಿ ಲಕ್ಷ್ಮಿನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವ ಮದ್ಯಾಹ್ನ ೧ ಗಂಟೆಗೆ ಸರಿಯಾಗಿ ಪುಬ್ಬಾ ನಕ್ಷತ್ರದಲ್ಲಿ ಭಕ್ತಾದಿಗಳ ಹರ್ಷೋದ್ಘಾರದ ನಡುವೆ ಗರುಡ ಬಂದು ರಥವನ್ನು ಪ್ರದಕ್ಷಿಣೆ ಹಾಕಿದ ನಂತರ ವಿದ್ಯುಕ್ತವಾಗಿ ನೆರವೇರಿತು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್ ಕುಮಾರ್, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಟಿ.ಸುನೀಲ್ ಕುಮಾರ್ ಅವರು ಶ್ರೀಲಕ್ಷ್ಮಿ ನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು.
ರಥೋತ್ಸವದ ಅಂಗವಾಗಿ ಮುಂಜಾನೆಯೇ ಶ್ರೀಸ್ವಾಮಿಗೆ ಅಭಿಷೇಕ ನೆರವೇರಿತು. ದೇವರು ಮತ್ತು ರಥಕ್ಕೆಗೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಮುಂಜಾನೆಯಿಂದಲೇ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿದ್ದು, ೭ ಗಂಟೆಯ ನಂತರ ಶ್ರೀಲಕ್ಷ್ಮಿನರಸಿಂಹ ಸ್ವಾಮಿ ಭಕ್ತರ ಮನೆಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆಯಾದ ನಂತರ ಮದ್ಯಾಹ್ನ ೧ ಗಂಟೆಗೆ ರಥದ ಬಳಿ ಬಂದ ದೇವರನ್ನು ರಥಕ್ಕೆ ಕೂರಿಸಲಾಯಿತು.
ಮದ್ಯಾಹ್ನ ೧ ಗಂಟೆಗೆ ರಥಕ್ಕೆ ಗರುಡ ಪ್ರದಕ್ಷಿಣೆ ಹಾಕಿದ ನಂತರ ಭಕ್ತರ ಜೈಕಾರ, ವೇದ ಘೋಷದೊಂದಿಗೆ ರಥವನ್ನು ಮುಂದಕ್ಕೆ ಎಳೆಯಲಾಯಿತು, ರಥದ ಗಾಲಿಗಳು ಮುಂದಕ್ಕೆ ಚಲಿಸುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಭಕ್ತಾದಿಗಳು ರಥಕ್ಕೆ ಹೂ, ಬಾಳೆಹಣ್ಣು, ದವನ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು.
ರಥೋತ್ಸವದಲ್ಲಿ ಪಾಲ್ಗೊಳ್ಳಲು ಬಂದ ಭಕ್ತಾದಿಗಳಿಗೆ ಅಲ್ಲಲ್ಲಿ ಕೊಪ್ಪಲು ಹಾಕಿಕೊಂಡಿದ್ದ ಭಕ್ತರು ಪಾನಕ, ಮಜ್ಜಿಗೆ ನೀಡಿ ಅವರ ದಣಿವನ್ನು ತಣಿಸಿದರು. ಹಾಗೆಯೇ ದೇವಾಲಯದ ವತಿಯಿಂದಲೂ ಭಕ್ತಾದಿಗಳಿಗಾಗಿ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ. ೧೮ ರಂದು ಸೂರ್ಯ ಮಂಡಲೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಅಶ್ವವಾಹನೋತ್ಸವ, ೧೯ ರಂದು ತೀರ್ಥಸ್ನಾನ, ಉಯ್ಯಾಲೋತ್ಸವ, ಧ್ವಜಾರೋಹಣ, ಚಿತ್ರಗೋಪುರೋತ್ಸವ ಹಾಗೂ ಜಲಕ್ರೀಡೆ ಉತ್ಸವ, ೨೦ ರಂದು ದವನೋತ್ಸವ, ೨೧ ರಂದು ಉಯ್ಯಾಲೋತ್ಸವ, ಕುಂಭಿಬೆಟ್ಟದಲ್ಲಿ ಹಾಗೂ ಪ್ರಸಾದ ವಿನಿಯೋಗ, ಹನುಮಂತೋತ್ಸವ ಹಾಗೂ ಶಯನೋತ್ಸವ, ೨೨ ರಂದು ಮಹಾಭಿಷೇಕ ಹಾಗೂ ಗರುಡೋತ್ಸವ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿದಿನ ಸಂಜೆ ೬ ರಿಂದ ೮ ಗಂಟೆಯವರೆಗೆ ಉಯ್ಯಾಲೋತ್ಸವ ಸೇವೆ ನೆರವೇರುತ್ತಿದೆ ಎಂದು ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಪ್ರಧಾನ ಅರ್ಚಕ ವೆಂಕಟರಾಜ್ ಭಟ್ಟರು ಮತ್ತು ಆಗಮಿಕರಾದ ಟಿ.ಕೆ.ವಾಸುದೇವ್ ಅವರಿಂದ ಶ್ರೀಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ರಥೋತ್ಸವದಲ್ಲಿ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!