ಅಬಕಾರಿ ಅಧಿಕಾರಿಗಳಿಂದ ಅಕ್ರಮ ಮದ್ಯ ನಾಶ

354

Get real time updates directly on you device, subscribe now.

ಪಾವಗಡ: ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು ೪೩೦.೧೦೫ ಲೀಟರ್ ಅಕ್ರಮ ಮದ್ಯವನ್ನು ಅಬಕಾರಿ ಅಧಿಕಾರಿಗಳು ಶುಕ್ರವಾರ ನಾಶಪಡಿಸಿದ್ದಾರೆ.
ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸುಮಾರು ೪೩೦.೧೦೫ ಲೀಟರ್ ಅಕ್ರಮ ಮದ್ಯ ಸಾಗಾಣಿಕೆ, ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡ ತಾಲ್ಲೂಕು ಅಬಕಾರಿ ಅಧಿಕಾರಿಗಳು ಮಧುಗಿರಿ ಅಬಕಾರಿ ಡಿವೈಎಸ್ಪಿ ಆರ್.ಸುರೇಶ್ ನೇತೃತ್ವದಲ್ಲಿ ಪಟ್ಟಣದ ಹೊರ ವಲಯದ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ನಾಶ ಪಡಿಸಿದ್ದಾರೆ.
ತಾಲ್ಲೂಕಿನಾದ್ಯಂತ ಅಕ್ರಮವಾಗಿ ಸಾಗಾಟ, ಮಾರಾಟ ನಡೆಸಿ ಸಿಕ್ಕಿ ಬಿದ್ದಿದ್ದ ೪೩೦.೧೦೫ ಲೀಟರ್ ಮದ್ಯ ಜಪ್ತಿ ಮಾಡಲಾಗಿತ್ತು. ಆ ಪೈಕಿ ಬಿಯರ್ ೧೦೩.೯೯೦ ಲೀ, ಸೇಂದಿ- ೧೮.೨೦೦ ಲೀ, ಕಳ್ಳಭಟ್ಟಿ- ೧೫.೩೨೦, ಬೆಲ್ಲದ ಕೊಳೆ- ೮೧.೦೦೦ ಲೀಟರ್ ನಷ್ಟು ಅಕ್ರಮ ಮದ್ಯದ ದಾಸ್ತಾನು ವಶಕ್ಕೆ ಪಡೆದು ನಾಶಪಡಿಸಲಾಗಿದೆ.
ಇದೇ ವೇಳೆ ಮಧುಗಿರಿ ಅಬಕಾರಿ ಡಿವೈಎಸ್ಪಿ ಸುರೇಶ್ ಮಾತನಾಡಿ, ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಮದ್ಯದ ಮಾಲುಗಳನ್ನು ಸರ್ಕಾರದ ವಶಕ್ಕೆ ಪಡೆದು ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನಾಶಪಡಿಸಲಾಗುತ್ತಿದೆ, ಅಕ್ರಮ ಮದ್ಯ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದರು.
ತಾಲ್ಲೂಕು ಅಬಕಾರಿ ಇನ್ಸ್ಪೆಕ್ಟರ್ ಎ.ಶಂಕರ್ ಮಾತನಾಡಿ, ಅಕ್ರಮವಾಗಿ ದೊರೆತ ೪೩೦.೧೦೫ ಲೀಟರ್ ಮದ್ಯದಲ್ಲಿ ಬಿಯರ್, ಕಳ್ಳಭಟ್ಟಿ ಸಾರಾಯಿ, ಸೇಂದಿ ವಶಪಡಿಸಿಕೊಳ್ಳಲಾಗಿದೆ. ಸನ್ನದ್ದುಗಳಲ್ಲಿ ಮಾತ್ರ ಮದ್ಯ ಪಡೆಯಿರಿ, ಇಲ್ಲ ಆಂಧ್ರದ ಗಡಿಭಾಗದಲ್ಲಿ ಹೆಚ್ಚು ಬೆಲೆ ದೊರೆಯುತ್ತೆ ಎಂದು ಅಕ್ರಮ ಮದ್ಯ ಮಾರಾಟದಲ್ಲಿ ಸಿಕ್ಕಿಬಿದ್ದರೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಪಡುತ್ತೀರಿ ಹಾಗೂ ಇಂತಹ ಅಕ್ರಮ ಮದ್ಯ ಮಾರಾಟದ ಚಟುವಟಿಕೆಗಳು ಕಂಡು ಬಂದರೆ ಸಾರ್ವಜನಿಕರು ಕೂಡಲೇ ಮಾಹಿತಿ ಅಥವಾ ಅರ್ಜಿ ಕಚೇರಿಗೆ ಸಲ್ಲಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೆಎಸ್ಬಿಸಿಎಲ್ ಅಸಿಸ್ಟಿಂಟ್ ಡಿಪೋ ಮ್ಯಾನೇಜರ್ ದೇವಣ್ಣ, ಅಬಕಾರಿ ಉಪ ನಿರೀಕ್ಷಕ ಪೃಥ್ವಿರಾಜ್, ಶಿವಬಸವಯ್ಯ, ಪುರಸಭೆ ಆರೋಗ್ಯ ನಿರೀಕ್ಷಕ ಶಂಸುದ್ದೀನ್, ಗ್ರಾಮ ಲೆಕ್ಕಾಧಿಕಾರಿ ತಿಮ್ಮಾರೆಡ್ಡಿ, ಅಬಕಾರಿ ಸಿಬ್ಬಂದಿ ನಾಗೇಶ್, ಮಾರುತಿ, ವಿನೋದ್, ರವಿಚಂದ್ರ, ಮಂಜುನಾಥ್ ಇದ್ದರು.

Get real time updates directly on you device, subscribe now.

Comments are closed.

error: Content is protected !!