ತಿಗಳ ಸಮಾಜ ನಿಗಮ ಸ್ಥಾಪನೆಗೆ ಪ್ರಯತ್ನಿಸುವೆ

ಸಮಾಜದ ಬೇಡಿಕೆ ಈಡೇರಿಸಲು ನಾನು ಬದ್ಧ: ಯಡಿಯೂರಪ್ಪ

302

Get real time updates directly on you device, subscribe now.

ತುಮಕೂರು: ತಿಗಳ ಸಮಾಜದ ಬನ್ನಿರಾಯಸ್ವಾಮಿ ದೇಗುಲದ ಜಾಗ ಮಂಜೂರಾತಿ ನಂತರ ದೇಗುಲ ನಿರ್ಮಾಣಕ್ಕೆ 25 ಲಕ್ಷ ಸ್ವಂತ ಹಣ ಕೊಡುತ್ತೇನೆ ಹಾಗೂ ತಿಗಳ ಸಮಾಜದ ನಿಗಮ ಸ್ಥಾಪಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸï.ಯಡಿಯೂರಪ್ಪ ಭರವಸೆ ನೀಡಿದರು.

ನಗರದ ಗಾಜಿನಮನೆಯಲ್ಲಿ ಸೋಮವಾರ ನಡೆದ ಅಗ್ನಿವಂಶ ಕ್ಷತ್ರಿಯ ತಿಗಳರ ಸಮಾಜದ ನೇತೃತ್ವದಲ್ಲಿ 2ನೇ ವರ್ಷದ ಮೂಲ ಪುರುಷ ಶ್ರೀಅಗ್ನಿ ಬನ್ನಿನಾರಾಯಣ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಿಗಳ ಜನಾಂಗ ಇಂದಿನ ಸಮಾಜದಲ್ಲಿ ಸಣ್ಣ ಹಿಡುವಳಿದಾರ ಜೀವನ ಸಾಗಿಸುತ್ತಿದ್ದಾರೆ, ಈ ಸಮಾಜ ಶೈಕ್ಷಣಿಕ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದೆ, ಈ ಸಮುದಾಯದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುವ ಅನಿವಾರ್ಯದ ಜೊತೆಗೆ ನಿಮಗೆಲ್ಲ ಶಿಕ್ಷಣ ಅತ್ಯಗತ್ಯ, ಹಾಗಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ನಿಮ್ಮೆಲ್ಲ ಬೇಡಿಕೆ ಈಡೇರಿಕೆಗೆ ಪ್ರಾತಿನಿಧ್ಯಯ ಸಿಗುವಂತೆ ಸರ್ಕಾರ ಸ್ಪಂದಿಸಲಿದೆ ಎಂದು ತಿಳಿಸಿದರು.
ಮೇಲು ಕೀಳು ಭಾವನೆ ತೊರೆದು ಬದುಕಬೇಕು, ನಾನು ಮುಖ್ಯಮಂತ್ರಿಯಾದ ಅವಧಿಯಲ್ಲಿ ಎಲ್ಲಾ ಜಾತಿ ಸಮಾಜದವರಿಗೆ ಸಮಾನ ಸಹಕಾರ ಕೊಟ್ಟಿದ್ದೀನಿ, ಮೋದಿಯವರ ಕನಸಿನಂತೆ, ತಿಗಳ ಸಮಾಜದ ಬೇಡಿಕೆಯ ಮನವಿ ಸ್ವೀಕರಿಸಿದ ನಂತರ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸ್ಥಾಪಿಸಲು ಪ್ರಯತ್ನ ಮಾಡುತ್ತೇನೆ, ಬನ್ನಿರಾಯ ಸ್ವಾಮಿ ದೇಗುಲದ ಸ್ಥಳಕ್ಕೆ ಕುಂದೂರು ಪ್ರದೇಶದ ಸರ್ಕಾರಿ ಭೂಮಿಯಲ್ಲಿ 1.9 ಗುಂಟೆ ಭೂಮಿ ಮಂಜೂರು ಮಾಡಿಸುತ್ತೇನೆ, ಸಮಾಜದ ನಿಗಮ ಸ್ಥಾಪಿಸಲು ಪ್ರಯತ್ನಿಸುವೆ, ದೇವಸ್ಥಾನ ನಿರ್ಮಾಣಕ್ಕೆ ಸ್ವಂತ 25 ಲಕ್ಷ ಹಣ ಕೊಡುತ್ತೇನೆ ಎಂದು ತಿಳಿಸಿದರು.
ಜೀವನದಲ್ಲಿ ಹತಾಶರಾಗದೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು, ಅದಕ್ಕೆ ಪ್ರಧಾನಿ ಹಲವು ಯೋಜನೆ ನೀಡಿದ್ದಾರೆ, ವುಗಳ ಪ್ರಯೋಜನ ಮಾಡಿಕೊಳ್ಳಿ, ಇದೇ ರೀತಿ ಸಂಘಟಿತರಾಗಿ ಸಮಾಜ ಕಟ್ಟುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಏ.1 ರಂದು ಶಿವಕುಮಾರ ಸ್ವಾಮೀಜಿಗಳ ಜನ್ಮ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮನವಾಗಲಿದೆ, ತಾವೆಲ್ಲರೂ ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರು.
ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಮಾತನಾಡಿ, ಸಮಾಜದ ಬಂಧುಗಳು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನ ಗುರುತಿಸಿಕೊಳ್ಳುವ ಕಾರ್ಯವಾಗಬೇಕಿದೆ, ಜೊತೆಗೆ ಸೂಕ್ತ ವೇದಿಕೆಗಳನ್ನು ಸೃಷ್ಟಿಸಿಕೊಳ್ಳಬೇಕಿದೆ, ಸಮಾಜದ ಶ್ರೇಯೋಭಿವೃದ್ಧಿಗೆ ಸರ್ಕಾರ ವಿಶೇಷ ಪ್ರಾತಿನಿಧ್ಯ ಕೊಡಬೇಕು ಎಂದು ಒತ್ತಾಯಿಸಿದರು.
ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ತಿಗಳ ಜನಾಂಗವಿದು, ಆದರೆ ವಾಸ್ತವವಾಗಿ ಸಾಕಷ್ಟು ಸವಾಲು ಎದುರಿಸುತ್ತಿದ್ದಾರೆ, ಸಮಾಜದ ಜನರು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಪ್ರಗತಿಯಾಗಬೇಕಾದರೆ ಮೊದಲು ಶಿಕ್ಷಣವಂತರಾಗಬೇಕು, 400 ಕೋಟಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ, ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು ಎಂದರು.
ಶನೇಶ್ವರ ಮಠದ ಸೋಮಶೇಖರ ಸ್ವಾಮೀಜಿ ಮಾತನಾಡಿ, ಸಮ ಸಮಾಜ ನಿರ್ಮಾಣವಾಗಬೇಕಾದರೆ ನಮ್ಮಲ್ಲಿ ಸಾಮರಸ್ಯ ಮನೋಭಾವನೆ ಬೆಳೆಸಿಕೊಳ್ಳಬೇಕು, ಹಾಗಾಗಿ ಪ್ರತಿಯೊಬ್ಬರೂ ಸಂಘಟಿತರಾಗಬೇಕಿದೆ ಎಂದು ಆಶೀರ್ವಚನ ನೀಡಿದರು.
ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಹಾಸ್ಯ ಚಟಾಕಿ ಹಾರಿಸಿ ರಂಜಿಸಿದರು, ಮಜಾ ಟಾಕೀಸ್ನ ರೆಮೊ ಸಿನಿಮಾ ಗೀತೆಗಳನ್ನು ಹಾಡುವ ಮೂಲಕ ನೆರೆದವರನ್ನು ರಂಜಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಹಳದಿ ಬಾವುಟಗಳನ್ನು ಹಿಡಿದ ತಿಗಳ ಸಮಾಜದ ಬಂಧುಗಳು ಮೆರವಣಿಗೆ ನಡೆಸಿ ಟೋಲ್ ಗೇಟ್ ಬಳಿ ಅತಿಸಂಖ್ಯೆಯಲ್ಲಿ ನೆರೆದು ಜೈ ತಿಗಳ ಸಮಾಜವೆಂಬ ಘೋಷ ವಾಕ್ಯ ಮೊಳಗಿಸುತ್ತ ಗಾಜಿನ ಮನೆ ಕಡೆ ಧಾವಿಸಿ ಬಂದರು.
ಶಾಸಕ ಜ್ಯೋತಿ ಪ್ರಕಾಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಸುರೇಶ್ ಗೌಡ, ರಾಜ್ಯ ತಿಗಳರ ಮಹಾಸಭಾದ ಅಧ್ಯಕ್ಷ ಸುಬ್ಬಣ್ಣ, ಬಿಜೆಪಿ ಜಿಲ್ಲಾಧ್ಯಕ್ಷÀ ಲಕ್ಷ್ಮೀಶ್, ರಾಜ್ಯ ಕ್ಷತ್ರಿಯ ಒಕ್ಕೂಟ ರಾಜ್ಯಾಧ್ಯಕ್ಷ ಉದಯ್ ಸಿಂಗ್, ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ ಇತರರು ಇದ್ದರು.

ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಬಿ.ಎಸ್.ವೈ
ತುಮಕೂರು: ಏಪ್ರಿಲ್ 1 ರಂದು ಅಮಿತ್ ಷಾ ತುಮಕೂರಿಗೆ ಬರ್ತಿದ್ದಾರೆ, ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗ್ತಾರೆ ಎಂದು ಸಿದ್ದಗಂಗಾ ಮಠದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಏ.1 ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ ಜನ್ಮ ದಿನಾಚರಣೆ ಕಾರ್ಯಕ್ರಮದ ಪೂರ್ವ ಸಿದ್ಧತೆ ಪರೀಶಿಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾರ್ಯಕ್ರಮದಲ್ಲಿ ಎರಡ್ಮೂರು ಲಕ್ಷ ಜನರು ಸೇರೋ ಅಪೇಕ್ಷೆ ಇದೆ, ದೊಡ್ಡ ಪ್ರಮಾಣದಲ್ಲಿ ಜನ ಸೇರಿಸೋ ಪ್ರಯತ್ನವನ್ನ ನಮ್ಮೆಲ್ಲ ಶಾಸಕರು, ಸಚಿವರು ಮಾಡ್ತಿದ್ದಾರೆ ಎಂದರು.
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡೋ ವಿಚಾರವನ್ನು ಕೇಂದ್ರ ಗೃಹ ಸಚಿವರು ಬಂದಾಗ ಅವರೊಟ್ಟಿಗೆ ಮಾತನಾಡ್ತೇನೆ, ಅವರೇನು ತೀರ್ಮಾನ ತೆಗೆದುಕೊಳ್ತಾರೋ ನೋಡೋಣ ಎಂದರು.

Get real time updates directly on you device, subscribe now.

Comments are closed.

error: Content is protected !!