ಜನತಾ ಜಲಧಾರೆ ರಥಯಾತ್ರೆ ಸಕಲ ಸಿದ್ಧತೆ

78

Get real time updates directly on you device, subscribe now.

ತುಮಕೂರು: ಜೆಡಿಎಸ್ ಪಕ್ಷದ ಮಹಾತ್ವಾಕಾಂಕ್ಷೆಯ ಜನತಾ ಜಲಧಾರೆ ರಥಯಾತ್ರೆ ಏಪ್ರಿಲ್ 27ರ ಬುಧವಾರ ತುಮಕೂರು ನಗರಕ್ಕೆ ಆಗಮಿಸುತಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದೆ ಎಂದು ಜೆಡಿಎಸ್ ಪಕ್ಷದ ಮುಖಂಡ ಎನ್.ಗೋವಿಂದರಾಜು ತಿಳಿಸಿದ್ದಾರೆ.

ನಗರದ ಜೆಡಿಎಸ್ ಕಚೇರಿಯಲ್ಲಿ ಜನತಾ ಜಲಧಾರೆ ರಥಯಾತ್ರೆಯ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆ ಹಾಗೂ ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ತುಮಕೂರಿನ ಗಾಜಿನಮನೆಯಲ್ಲಿ ಬಹಿರಂಗ ಕಾರ್ಯಕ್ರಮ ನಡೆಯಲಿದ್ದು, 10 ಸಾವಿರಕ್ಕು ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಬಿಜೆಪಿ ಪಕ್ಷದ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಟಿ. ನಿವೃತ್ತ ನೌಕರ ಹೆಚ್.ಎಂ.ರವೀಶಯ್ಯ ತಮ್ಮ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಪಕ್ಷಗಳ ಪ್ರಮುಖ ಮುಖಂಡರು ಜೆಡಿಎಸ್ ಪಕ್ಷ ಸೇರಲಿದ್ದಾರೆ, 2018ರ ಚುನಾವಣೆಯಲ್ಲಿ ಕೇವಲ 5 ಸಾವಿರ ಮತಗಳಿಂದ ಸೋಲು ಅನುಭವಿಸಿರುವ ಜೆಡಿಎಸ್ ಪಕ್ಷ, ಎಲ್ಲಾ ಮುಖಂಡರ ಸಹಕಾರದೊಂದಿಗೆ 2023ರ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದಿಂದ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಲಿದೆ ಎಂಬ ವಿಶ್ವಾಸವನ್ನು ಎನ್.ಗೋವಿಂದರಾಜು ವ್ಯಕ್ತಪಡಿಸಿದರು.
ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ಬಹಳ ಮಹತ್ವದ ಕಾರ್ಯಕ್ರಮವಾದ ಜನತಾ ಜಲಧಾರೆ ರಥೆಯಾತ್ರೆಯ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಪಕ್ಷದ ಹಿರಿಯ ಮುಖಂಡರು, ಡಿಫಿಟೆಡ್ ಕ್ಯಾಂಡಿಯೇಟ್ ಆಗಿರುವ ನನಗೆ ವಹಿಸಿಕೊಟ್ಟಿದ್ದಾರೆ, ಕಾರ್ಯಕ್ರಮವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಸುವ ನಿಟ್ಟಿನಲ್ಲಿ ಇಂದು ಪಕ್ಷದ ಎಲ್ಲಾ ವಿಭಾಗಗಳ ಮುಖಂಡರ ಸಭೆ ಕರೆಯಲಾಗಿದೆ, ಎಲ್ಲರ ಸಲಹೆ, ಸೂಚನೆ, ಮಾರ್ಗದರ್ಶನ ಪಡೆದು ಸಮಿತಿ ರಚಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಲಾಗುವುದು ಎಂದರು.
ತುಮಕೂರಿಗೆ ಆಗಮಿಸುವ ಜನತಾ ಜಲಧಾರೆ ರಥಯಾತ್ರೆ ವಾಹನವನ್ನು ಕುಣಿಗಲ್ ಸರ್ಕಲ್ನಲ್ಲಿ ಅದ್ದೂರಿಯಾಗಿ, ಪೂರ್ಣಕುಂಬದೊಂದಿಗೆ ಸ್ವಾಗತಿಸಿ ನಂತರ ಅಧರ್ನಾರೀಶ್ವರ ದೇವಾಲಯದಿಂದ ನಗರ ವಿವಿಧ ಬೀದಿಗಳಲ್ಲಿ ರಥಯಾತ್ರೆಯ ಮೆರವಣಿಗೆ ತೆರಳಿ ಬಹಿರಂಗ ಕಾರ್ಯಕ್ರಮ ನಡೆಯುವ ಗಾಜಿನ ಮನೆಗೆ ಬರಲಿದೆ, ಐದು ನೂರಕ್ಕು ಹೆಚ್ಚಿನ ಮಹಿಳೆಯರು ಪೂರ್ಣಕುಂಬ ಹೊರಲಿದ್ದಾರೆ, 10 ಕ್ಕು ಹೆಚ್ಚು ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ ಎಂದು ವಿವರಿಸಿದರು.
ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಹೆಚ್ಎಂಟಿ ನಿವೃತ್ತ ನೌಕರರ ಹೆಚ್.ಎಂ.ರವೀಶ್ ಮಾತನಾಡಿ, ಬಿಜೆಪಿ ಪಕ್ಷದ ಇತ್ತೀಚಿನ ಬೆಳವಣಿಗೆ ಪಕ್ಷದಲ್ಲಿ ಉಸಿರು ಕಟ್ಟಿಸುವ ವಾತಾವರಣ ನಿರ್ಮಿಸಿವೆ, ಕೋಮು ಸೌರ್ಹಾದಕ್ಕೆ ಹೆಸರಾದ ಕನ್ನಡ ನಾಡಿನಲ್ಲಿ ನಡೆಯುತ್ತಿರುವ ಕೋಮು ಪ್ರಚೋದನೆಗಳು ಯುವ ಜನತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ, ಇವುಗಳನ್ನು ಮನಗಂಡು ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಷರತ್ತು ರಹಿತವಾಗಿ ಸೇರುತಿದ್ದೇನೆ, ಮೊದಲು ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ, ನನ್ನನ್ನುಗುರುತಿಸಿ ಪಕ್ಷದಲ್ಲಿ ಯಾವುದಾದರೂ ಹುದ್ದೆ ನೀಡಿದರೆ ಅದನ್ನು ಸಹ ಯಾವುದೇ ಲೋಪ ದೋಷವಿಲ್ಲದಂತೆ ನಿರ್ವಹಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ಮಾತನಾಡಿ, ಪಕ್ಷದ ಜನತಾ ಜಲಧಾರೆ ರಥಯಾತ್ರೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಪ್ರತಿ ವಿಧಾನಸಭಾವಾರು ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ, ಇಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎನ್.ಗೋವಿಂದರಾಜು ನೇತೃತ್ವದಲ್ಲಿ ಎಲ್ಲಾ ಮುಂಚೂಣಿ ಘಟಕಗಳ ಮುಖಂಡರ ಸಭೆ ನಡೆಸಲಾಗಿದೆ, ಇದರ ಜೊತೆಗೆ ಬಿಜೆಪಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ ಮತ್ತು ಅವರ ಬೆಂಬಲಿಗರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ, ಅವರನ್ನು ಪ್ರೀತಿಪೂರ್ವಕವಾಗಿ ಸಭೆಗೆ ಸ್ವಾಗತಿಸುತ್ತೇವೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿಕೊಳ್ಳಲೇಬೇಕೆಂಬ ಶಪಥ ನಮ್ಮದಾಗಿದೆ, ಇದಕ್ಕೆ ಪೂರಕವಾಗಿ ಜನತಾ ಜಲಧಾರೆ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ತುಮಕೂರು ನಗರ ಜೆಡಿಎಸ್ ಅಧ್ಯಕ್ಷ ಬೆಳ್ಳಿ ಲೋಕೇಶ್ ಮಾತನಾಡಿ, ಬಿಜೆಪಿಯಲ್ಲಿ ಅತ್ಯಂತ ಸಕ್ರಿಯ ಕಾರ್ಯಕರ್ತರಾಗಿದ್ದ ರವೀಶಯ್ಯ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ, ಗುತ್ತಿಗೆದಾರರು ಆಗಿರುವ ಅವರು ಶೇ.40 ರ ಕಮಿಷನ್ಗೆ ಬೇಸತ್ತು ಪಕ್ಷ ತೊರೆದಿದ್ದು, ಅವರನ್ನು ಅತ್ಯಂತ ಆ‘ರದಿಂದ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ, ಮುಂದಿನ 2023ರ ಚುನಾವಣೆಯಲ್ಲಿ 123 ಸದಸ್ಯರನ್ನು ಗೆಲ್ಲಿಸಿಕೊಳ್ಳಬೇಕೆಂಬ ಮಹತ್ವದ ಛಲದಿಂದ ಈ ಹೋರಾಟ ನಡೆಯುತ್ತಿದೆ ಎಂದರು.
ಈ ವೇಳೆ ಪಕ್ಷದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಕೃಷ್ಣಮೂರ್ತಿ, ಗಂಗಣ್ಣ, ದೇವರಾಜು, ಪುಟ್ಟೀರಪ್ಪ, ಪಾಲಿಕೆ ಸದಸ್ಯರಾದ ಶ್ರೀನಿವಾಸ್, ಧರಣೇಂದ್ರಕುಮಾರ್, ಮಂಜುನಾಥ್, ಮಹಿಳಾ ಘಟಕದ ತಾಹೀರಾಭಾನು, ಹೊಸದಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಹೆಚ್ಎಂಟಿ ನಿವೃತ್ತ ನೌಕರರಾದ ಎಸ್.ನಾಗರಾಜು, ಸಿದ್ದರಾಜು, ಡಾ.ಜಿ.ವೆಂಕಟೇಶಲು, ಲಕ್ಷ್ಮಣ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!