ರೈತರ ಶೋಷಣೆ ಖಂಡಿಸಿ ಬೃಹತ್ ಸಮಾವೇಶ 21ಕ್ಕೆ

134

Get real time updates directly on you device, subscribe now.

ಕುಣಿಗಲ್: ಕೇಂದ್ರ ಸರ್ಕಾರ ರೈತವಿರೋಧಿ ಕಾಯಿದೆಗಳ ರದ್ದುಗೊಳಿಸಿದರೂ ರಾಜ್ಯಸರ್ಕಾರ ರದ್ದುಗೊಳಿಸದೆ ಪಟ್ಟಭದ್ರ ಹಿತಾಸಕ್ತಿಗಳ ಬಳಸಿಕೊಂಡು ರಾಜ್ಯದ ರೈತರ ಶೋಷಣೆ ಮಾಡುತ್ತಿರುವುದು ಸೇರಿದಂತೆ ಹಲವು ಅಕ್ರಮ ಖಂಡಿಸಿ ಇದೇ 21ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ಮಾರಕವಾದ ಕೃಷಿ ಕಾಯಿದೆ ಹಿಂಪಡೆದರೂ ರಾಜ್ಯ ಸರ್ಕಾರ ಇನ್ನು ಹಿಂಪಡೆದಿಲ್ಲ, ರಾಜ್ಯದಲ್ಲಿ ಕೃಷಿ ಭೂಮಿಯನ್ನು ಬೃಹತ್ ರಿಯಲ್ ಎಸ್ಟೇಟ್ ಉದ್ದಿಮೆದಾರರು ಖರೀದಿ ಮಾಡಿಕೊಳ್ಳುತ್ತಿದ್ದಾರೆ, ರೈತರು ಕೃಷಿಗೆ ಬಳಸುವ ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಹನಿ ನೀರಾವರಿ ಸಲಕರಣೆ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿ ರೈತರ ಉತ್ಪನ್ನಗಳ ದರ ಕಡಿಮೆ ಮಾಡಿ ರೈತರು ಕೃಷಿಯಿಂದ ವಿಮುಖವಾಗುವಂತೆ ಮಾಡುವ ಹುನ್ನಾರ ಮಾಡುತ್ತಿದೆ, ಹಾಲು ಖರೀದಿ ದರ ಕಡಿಮೆ ಮಾಡಿ ಹೈನುಗಾರಿಕೆ ನಂಬಿಕೊಂಡ ಹೈನುಗಾರರ ಬದುಕು ಬೀದಿಗೆ ಬೀಳುವಂತೆ ಮಾಡಿದ್ದಾರೆ, ಸಾಮಾನ್ಯ ಜನರು ಬೆಲೆ ಏರಿಕೆಯಿಂದ ಬಳಲುವಂತೆ ಮಾಡಿದ್ದು ಜನರ ಗಮನ ಬೇರೆಡೆ ಸೆಳೆಯಲು ಕೋಮುಗಲಭೆ ಸೃಷ್ಟಿಸುವ ಮೂಲಕ ಜನರು ಮತ್ತಷ್ಟು ಪರದಾಡುವಂತೆ ಮಾಡುತ್ತಿದ್ದಾರೆ. ರಾಜ್ಯದ ಮೂರು ರಾಜಕೀಯ ಪಕ್ಷಗಳು ರೈತ, ಜನ ವಿರೋಧೀಯಾಗಿದ್ದು, ಇವುಗಳಿಗೆ ತಕ್ಕ ಪಾಠ ಕಲಿಸಲು ಮುಂದಿನ ಚುನಾವಣೆಗಳಲ್ಲಿ ರೈತ ಸಂಘವು ಇತರೆ ಪಕ್ಷದೊಂದಿಗೆ ರಾಜಕೀಯ ಕಣಕ್ಕಿಳಿಯುವ ಬಗ್ಗೆ ಸಮಾಲೋಚಿಸಲು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಸಮಾವೇಶವನ್ನು ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಉದ್ಘಾಟಿಸಲಿದ್ದು ಪಂಜಾಬ್ ಸಿಎಂ ಭಗವಂತ ಸಿಂಗ್ ಮಾನೆ ಸೇರಿದಂತೆ ರೈತ ಸಂಘದ ಪ್ರಮುಖರು ಉಪಸ್ಥಿತರಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಮೂರು ಪಕ್ಷಗಳು ಹೊಂದಾಣಿಕೆ ರಾಜಕಾರಣ ಮಾಡುವ ಮೂಲಕ ರಾಜ್ಯದ ಜನರನ್ನು ಬೆಲೆ ಏರಿಕೆಯಿಂದ ಬಳಲುವಂತೆ ಮಾಡಿದ್ದಾರೆ, ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿವೆ, ರೈತರಲ್ಲೆ ಗುಂಪು ಗಾರಿಕೆ ಮಾಡಿ ರೈತರಿಂದ ರಾಗಿ ಖರೀದಿ ಮಾಡಲು ಪ್ರತ್ಯೇಕತೆವಾದ ಅನುಸರಿಸಿ ರೈತರ ಶೋಷಣೆ ಮಾಡಿದ್ದಾರೆ, ರೈತರ ರಾಗಿ ಖರೀದಿಗೂ ಮಿತಿ ಹಾಕಿ ರಾಗಿ ಖರೀದಿ ದಲ್ಲಾಳಿಗಳಿಗೆ ಹಿಂಬಾಗಿಲ ಮೂಲಕ ಅವಕಾಶ ನೀಡಿ ರೈತರ ಶೋಷಣೆ ಮಾಡುತ್ತಿದ್ದಾರೆ, ರಾಜ್ಯದಾದ್ಯಂತ ಅಕ್ರಮ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿ ರೈತರ ಜಮೀನುಗಳನ್ನು ಕಬಳಿಸಿ ಗಣಿಗಾರಿಕೆ ಮಾಡುತ್ತಾ ರೈತ ವಿರೋಧಿಯಾಗಿದ್ದು, ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಮೂರು ಪಕ್ಷದವರೂ ಭಾಗಿಯಾಗುವ ಮೂಲಕ ರೈತರ, ಜನರ ವಿರೋಧಿಯಾಗಿದ್ದ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವ ಜನರು, ರೈತರು ಇದಕ್ಕೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ರೈತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಬೇಕೆಂದು ಮನವಿ ಮಾಡಿದರು. ರೈತ ಸಂಘದ ಪದಾಧಿಕಾರಿಗಳಾದ ವೆಂಕಟೇಶ್, ಸಂತೋಷ್, ರಂಗಸ್ವಾಮಿ, ಲಕ್ಷ್ಮಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!