ಸಕಾಲ ಯೋಜನೆ ಜನಸ್ನೇಹಿಯಾಗಿದೆ: ತಹಶೀಲ್ದಾರ್

135

Get real time updates directly on you device, subscribe now.

ಕುಣಿಗಲ್: ಸಕಾಲ ಯೋಜನೆಯು ಜನಸ್ನೇಹಿ ಯೋಜನೆಯಾಗಿದ್ದು, ಸರ್ಕಾರದ ಮಹತ್ವದ ಯೋಜನೆಯಾಗಿದೆ, ಸಾರ್ವಜನಿಕರು ಯೋಜನೆಯ ಅರಿವು ಪಡೆದು ನಿಗದಿತ ಅವಧಿಯೊಳಗೆ ಸರ್ಕಾರದ ವಿವಿಧ ಸೇವೆ ಪಡೆಯಬಹುದು ಎಂದು ತಹಶೀಲ್ದಾರ್ ಮಹಾಬಲೇಶ್ವರ್ ಹೇಳಿದರು.

ಬುಧವಾರ ಸಕಾಲಯೋಜನೆ ಜಾರಿಗೊಂಡು ಹತ್ತು ವರ್ಷ ಕಳೆದ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖಾ ಸಿಬ್ಬಂದಿಯೊಂದಿಗೆ ಸಕಾಲ ದಶಮಾನೋತ್ಸವ ಜಾಗೃತಿ ಜಾಥದಲ್ಲಿ ಪಾಲ್ಗೊಂಡು ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ನಲ್ಲಿ ಜನತೆಗೆ ಮಾಹಿತಿ ನೀಡಿ ಮಾತನಾಡಿ, ಸಕಾಲ ಯೋಜನೆಯಡಿಯಲ್ಲಿ 99 ಇಲಾಖೆಯ 1115 ಸೇವೆಗಳನ್ನು ಸಾರ್ವಜನಿಕರು ಪಡೆಯಬಹುದಾಗಿದೆ. ಸಕಾಲ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದಾಗ ನಿಗದಿತ ಅವಧಿಯೊಳಗೆ ಕಾಲಮಿತಿಯೊಳಗೆ ಸಾರ್ವಜನಿಕರಿಗೆ ಸವಲತ್ತು ನೀಡಲಾಗುವುದು. ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡುವುದರಿಂದ ವಿನಾಕಾರಣ ಸರ್ಕಾರಿ ಕಚೇರಿಗೆ ಅಲೆದಾಟವೂ ಇರುವುದಿಲ್ಲ, ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ಸರ್ಕಾರದ ಅರ್ಹ ಸೇವೆಗಳನ್ನು ಸಾರ್ವಜನಿಕರು ಪಡೆಯಬಹುದಾಗಿದೆ, ಇದೀಗ ಈ ಸೇವೆಯ ಇ-ಸವಲತ್ತಿನ ಮೂಲಕ ಅರ್ಜಿದಾರನಿಗೂ ಅವರ ಅರ್ಜಿಯ ಸ್ಥಿತಿಗತಿಯ ಮೂಲಕ ನೇರವಾಗಿ ಮಾಹಿತಿ ಲಭ್ಯವಾಗುವ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಸೇವೆ ಸಿಗುತ್ತದೆ, ಆದ್ದರಿಂದ ಸಾರ್ವಜನಿಕರು ಸರ್ಕಾರದ ವಿವಿಧ ಇಲಾಖೆಯಲ್ಲಿ ನಿಗದಿಗೊಳಿಸಿರುವ ಕೆಲ ಸೇವೆಗಳಗೆ ಸಮರ್ಪಕ ಸೇವಾ ಶುಲ್ಕ ಪಾವತಿಸಿ ಸರ್ಕಾರದ ಸೇವೆ ಪಡೆಯಬಹುದು. ಇದಕ್ಕೆ ಸಂಬಂಧಿಸಿದಂತೆ ಆಯಾ ಸರ್ಕಾರಿ ಕಚೇರಿಯಲ್ಲಿ ಸಕಾಲ ಯೋಜನೆಯ ಸೇವೆ ನೀಡುವ ವಿವರಗಳು ಲಭ್ಯ ಇದ್ದು ಅವುಗಳ ಮೂಲಕ ಸೇವೆ ಪಡೆದುಕೊಳ್ಳಬಹುದು ಎಂದರು.
ಸಕಾಲ ದಶಮಾನೋತ್ಸವದ ಅಂಗವಾಗಿ ತಾಲೂಕು ಕಚೇರಿಯಿಂದ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದ ವರೆಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಜಾಥಾ ನಡೆಸಿ ಯೋಜನೆಯ ಅರಿವು ಮೂಡಿಸಿದರು.
ತಾಪಂ ವ್ಯವಸ್ಥಾಪಕ ಗಂಗಾ‘ರ, ಶಿರಸ್ತೆದಾರ್ ಗಳಾದ ಸ್ಮಿತಾ, ಯಶೋಧ, ವಿಜಯಲಕ್ಷ್ಮೀ, ರಾಜಸ್ವ ನಿರೀಕ್ಷಕರಾದ ಶಿವಾನಂದರೆಡ್ಡಿ, ನಟರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!