ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ

ಪಾಲಿಕೆ ಎದುರು ನೀರು ಸರಬರಾಜು ನೌಕರರ ಪ್ರತಿಭಟನೆ

169

Get real time updates directly on you device, subscribe now.

ತುಮಕೂರು: ಗುತ್ತಿಗೆ ಪದ್ದತಿ ರದ್ದು ಮಾಡಿ ನೇರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಖಾಲಿ ಇರುವ ವಾಟರ್ಮನ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು ಹಾಗೂ ಇನ್ನಿತರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ತುಮಕೂರು ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ಸದಸ್ಯರು ಪಾಲಿಕೆ ಎದುರು ಪ್ರತಿಭಟನಾ ಧರಣಿ ನಡೆಸಿದರು.

ಪ್ರತಿಭಟನಾ ನಿರತ ವಾಟರ್ ಮನ್ ಗಳನ್ನು ಉದ್ದೇಶಿಸಿ ಮಾತನಾಡಿದ ಕೆ.ಕುಮಾರ್, ಮಹಾ ನಗರಪಾಲಿಕೆಯಲ್ಲಿ ಕಳೆದ 20- 25 ವರ್ಷಗಳಿಂದ ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ನೀರು ಗಂಟಿಗಳಿಗೆ ಇದುವರೆಗೂ ಖಾಯಂ ಆಗಿಲ್ಲ, ಅಲ್ಲದೆ ವೇತನವೂ ಸರಿಯಾದ ಸಮಯಕ್ಕೆ ದೊರೆಯುವುದಿಲ್ಲ, ಪ್ರತಿ ಬಾರಿಯೂ ಪ್ರತಿಭಟನೆ ಮಾಡಿಯೇ ವೇತನ ಪಡೆಯಬೇಕಾದ ಸ್ಥಿತಿ ಇದೆ, ಸ್ವತಃ ರಾಜ್ಯಪಾಲರೆ ಪಾಲಿಕೆಗಳಲ್ಲಿ ಗುತ್ತಿಗೆ ನೌಕರರ ಪದ್ಧತಿ ರದ್ದು ಮಾಡುವಂತೆ ಸೂಚನೆ ನೀಡಿದ್ದರೂ ಇದುವರೆಗೂ ಅದನ್ನು ರಾಜ್ಯ ಸರಕಾರಗಕಳು ಜಾರಿಗೆ ತಂದಿಲ್ಲ, ಈ ಹಿಂದೆ ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ, ಅಲ್ಲದೆ 5-04-2022 ರಂದು ಮನವಿ ಸಲ್ಲಿಸಿ, 19-04-2022 ರೊಳಗೆ ನಮ್ಮ ಸೇವೆ ಖಾಯಂ ಗೊಳಿಸದಿದ್ದಲ್ಲಿ 20 ರಿಂದ ಮುಷ್ಕರ ನಡೆಸುವುದಾಗಿ ತಿಳಿಸಿದ್ದೇವೆ, ಆದರೆ ಇದುವರೆಗೂ ಪಾಲಿಕೆ ಆಡಳಿತ ನಮ್ಮ ಮನವಿಗೆ ಮನ್ನಣೆ ನೀಡಿಲ್ಲ, ಈ ಹಿನ್ನೆಲೆಯಲ್ಲಿ ಇಂದಿನಿಂದ ಹೋರಾಟ ಆರಂಭಿಸಿರುವುದಾಗಿ ತಿಳಿಸಿದರು.
ನೀರು ಗಂಟಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರೊಂದಿಗೆ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿದ 15ನೇ ವಾರ್ಡಿನ ಪಾಲಿಕೆ ಕೌನ್ಸಿಲರ್ ಗಿರಿಜಾ ಧನಿಯಕುಮಾರ್, ಕಳೆದ 15- 20 ವರ್ಷದಿಂದ ಅತಿ ಕಡಿಮೆ ವೇತನಕ್ಕೆ ಇವರು ದುಡಿಯುತಿದ್ದಾರೆ, ಇವರ ಸೇವೆ ಖಾಯಂ ಗೊಳಿಸಬೇಕು ಎಂಬ ಕಾರಣದಿಂದ 2019ರಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರಗಳನ್ನು ಚರ್ಚೆ ಮಾಡಿ, ಇವರ ಸೇವೆ ಖಾಯಂಗೊಳಿಸಲು ಪೌರಾಡಳಿತ ಇಲಾಖೆಗೆ ನಿರ್ಣಯ ಕಳುಹಿಸಿಕೊಡಲಾಗಿದೆ, ಆದರೆ ಇದುವರೆಗೂ ರಾಜ್ಯ ಸರಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ, ನೀರು ಗಂಟಿಗಳಿಗೂ ಮಕ್ಕಳು, ಸಂಸಾರವಿದೆ, ಇಂದಿನ ಬೆಲೆ ಹೆಚ್ಚಳದ ಕಾಲದಲ್ಲಿ ಮಕ್ಕಳ ಓದು, ಮನೆ ಬಾಡಿಗೆ ಇವುಗಳನ್ನು ನಾವು ಪರಿಗಣಿಸ ಬೇಕಿದೆ, ಅಲ್ಲದೆ ನೇರ ಪಾವತಿಯ ಮೂಲಕ ಅವರ ಬೆವರಿನ ಹಣ ಅವರಿಗೆ ಸೇರುವಂತೆ ಮಾಡಬೇಕು, ಈ ನಿಟ್ಟಿನಲ್ಲಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ, ಇಂದೇ ಮೇಯರ್ ಮತ್ತು ಆಯುಕ್ತರೊಂದಿಗೆ ಮಾತನಾಡಿ, ಸಮಸ್ಯೆಯ ಪರಿಹಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ನೀರು ಗಂಟಿಗಳು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದರಿಂದ ಇಂದು ನಾವು ನೆಮ್ಮದಿಯಿಂದ ಇದ್ದೇವೆ, ಇಲ್ಲದಿದ್ದಲ್ಲಿ ದಿನಕ್ಕೆ ಕುಡಿಯುವ ನೀರಿನ ವಿಚಾರವಾಗಿಯೇ ಸಾವಿರಾರು ಫೋನ್ ಕರೆಗಳಿಗೆ ಉತ್ತರಿಸಬೇಕಿತ್ತು, ಈಗ ಎಲ್ಲರೂ ಒಗ್ಗೂಡಿ ಕೆಲಸ ಬಹಿಷ್ಕರಿಸಿ ಮುಷ್ಕರ ನಿರತವಾಗಿರುವುದಿಂದ ಮುಂದಿನ ಎರಡು ಮೂರು ದಿನಗಳಲ್ಲಿ ನೀರಿನ ಕೊರತೆ ತಲೆದೋರಲಿದೆ, ಹಾಗಾಗಿ ಪಾಲಿಕೆಯ ಆಡಳಿತ ಶೀಘ್ರವಾಗಿ ಸಮಸ್ಯೆ ಬಗೆಹರಿಸಿ ಜನರಿಗೆ ಬೇಸಿಗೆಯಲ್ಲಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಲ್ಲಾ ನೀರು ಗಂಟಿಗಳು ಕೆಲಸ ಬಹಿಷ್ಕರಿಸಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!