ನೆಲ, ಜಲ, ಭಾಷೆಯ ಅಸ್ಮಿತೆಗಾಗಿ ಒಗ್ಗಟ್ಟು ಅಗತ್ಯ

ಪಟ್ಟನಾಯಕನಹಳ್ಳಿಯಲ್ಲಿ ನಂಜಾವಧೂತ ಶ್ರೀಗಳ 43ನೇ ವರ್ಧತಿ ಮಹೋತ್ಸವ

149

Get real time updates directly on you device, subscribe now.

ಶಿರಾ: ತಮಿಳುನಾಡಿನಲ್ಲಿ, ನೀರು, ಭಾಷೆಯ ಆಸ್ಮಿತೆಯ ವಿಷಯದಲ್ಲಿ ಇಡೀ ತಮಿಳುನಾಡೇ ಒಂದು ಪಕ್ಷವಾಗುತ್ತದೆ, ಕರ್ನಾಟಕದಲ್ಲಿ ನಮ್ಮ ನಾಡು ನುಡಿಯ ವಿಷಯ ನೆಲದ ವಿಷಯವಾದರೆ ಎಲ್ಲಾ ಪಕ್ಷದವರು ಬೇರೆ ಬೇರೆ ಪಕ್ಷದವರಾಗುತ್ತಾರೆ, ಆದ್ದರಿಂದ ಮೂರು ಪಕ್ಷದವರು ಸೇರಿ ಒಂದು ಪಕ್ಷವಾಗಿ ಹೊರ ಹೊಮ್ಮಿದರೆ ನಮ್ಮ ಭಾಷೆಯ ಮೇಲೆ ದೌರ್ಜನ್ಯ ನೆಲದ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಬಹುದು, ನಮಗೆ ಸಿಗಬೇಕಿರುವ ಪಾಲು ಸಿಗದಿದ್ದಾಗ ನಾವೆಲ್ಲ ಒಗ್ಗಟ್ಟಾಗಿ ಕೇಳಿದರೆ ಅದಕ್ಕೆ ಶಕ್ತಿ ಬರುತ್ತದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಂಜಾವಭೂತ ಸ್ವಾಮೀಜಿ ಹೇಳಿದರು.

ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಸ್ಪಟಿಕಪುರಿ ಮಹಾಸಂಸ್ಥಾನ ಮಠದಲ್ಲಿ ಗುರುವಾರ ನಡೆದ ನಂಜಾವಧೂತ ಸ್ವಾಮೀಜಿಗಳ 43ನೇ ವರ್ಧತಿ ಮಹೋತ್ಸವ ಹಾಗೂ ನೀರಾವರಿ ಹಕ್ಕೊತ್ತಾಯ ದಿನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಭಕ್ತರಿಂದ ಗುರು ವಂದನೆ ಸ್ವೀಕರಿಸಿ ಮಾತನಾಡಿ, ನಮ್ಮನ್ನಾಳುವ ಸರಕಾರಗಳು ದೂರಗಾಮಿ ಚಿಂತನೆಯ ಯೋಜನೆಗಳನ್ನು ಮಾಡುವ ಅವಶ್ಯಕತೆ ಇದೆ, ಆಡಳಿತ ಮಾಡುವವರ ಮನಸ್ಥಿತಿ ಬದಲಾಗಬೇಕು, ದೇಶದ ಮುಂದಿನ ನಾಲ್ಕು ತಲೆಮಾರನ್ನು ಮನಸ್ಸಿನಲ್ಲಿಟ್ಟುಕೊಂಡು ಚಿಂತನೆ ಮಾಡಬೇಕು, ಆಗ ಮಾತ್ರ ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಪ್ರಸ್ತುತ ದಿನಗಳಲ್ಲಿ ರೈತ ಕೃಷಿಯಿಂದ ವಿಮುಖನಾಗುತ್ತಿದ್ದಾನೆ, ಬೆಳೆದಂತಹ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ, ಆದ್ದರಿಂದ ರೈತರು ತನ್ನ ಮೂಲ ಕಸುಬನ್ನು ಬಿಟ್ಟು ಬದುಕುವ ಬೇರೆ ಬೇರೆ ಮಾರ್ಗ ಹುಡುಕುತ್ತಿದ್ದಾನೆ, ಇದರ ಪರಿಣಾಮ ದೇಶ ಇನ್ನು ಕೆಲವೇ ವರ್ಷಗಳಲ್ಲಿ ಆಹಾರದ ಸಮಸ್ಯೆ ಎದುರಿಸಬೇಕಾಗುತ್ತದೆ, ಆಹಾರವನ್ನು ನಾವು ಬೆಳೆಯಲಿಲ್ಲ ಎಂದರೆ ನಾವು ಬದುಕುವುದಾರೂ ಹೇಗೆ, ಎಷ್ಟು ದಿವಸ ನೀವು ಭಾವನೆಗಳಲ್ಲಿಯೇ ಆಟ ಆಡಲು ಸಾಧ್ಯ? ಎಂದ ಅವರು ಕೆಲವು ಕೈಗಾರಿಕೋದ್ಯಮಿಗಳನ್ನು ತೃಪ್ತಿಪಡಿಸಲು ಹೋಗಿ ಈ ದೇಶದ ನೂರು ಕೋಟಿ ಮಿಕ್ಕ ಜನರ ಜೀವನ ಪರಿಸ್ಥಿತಿಗಳೇನು? ನಮ್ಮನ್ನಾಳುವವರ ಮನಸ್ಥಿತಿಗಳು ಬದಲಾಗಲಿಲ್ಲ ಎಂದರೆ ಎಂತಹ ನೀರಾವರಿ ಯೋಜನೆ ತಂದರೂ ರೈತರಿಗೆ ಉತ್ಸಾಹ ಇರುವುದಿಲ್ಲ, ನಂಬಿಕೆ ಬರುವುದಿಲ್ಲ ಎಂದರು.
ಮಧ್ಯ ಕರ್ನಾಟಕದ ಜನರ ಕುಡಿಯುವ ನೀರಿನ ಹಾಹಾಕಾರ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ನೂರಾರು ಟಿಎಂಸಿ ನೀರನ್ನು ವ್ಯರ್ಥವಾಗದಂತೆ ತುಮಕೂರು ಕೋಲಾರ ಚಿಕ್ಕಬಳ್ಳಾಪುರ ಚಿತ್ರದುರ್ಗ ಜಿಲ್ಲೆಗಳಿಗೆ ಹರಿಸುವಂತೆ ನಿರಂತರವಾಗಿ ಎರಡು ದಶಕಗಳ ಕಾಲ ನೀರಾವರಿ ಹಕ್ಕೊತ್ತಾಯ ದಿನ ಆಚರಣೆ ಮಾಡಿ ಸರಕಾರದ ಗಮನಸೆಳೆದ ಕಾರಣ ಅಪ್ಪರ್ ಭದ್ರ ನೀರಾವರಿ ಯೋಜನೆ ಅನುಷ್ಠಾನಗೊಳ್ಳದ ಸಾಧ್ಯವಾಯಿತು ಎಂದರು.
ರೇಷ್ಮೆ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ನಂಜಾವಧೂತ ಶ್ರೀಗಳು ತೋರಿದ ನೀರಾವರಿ ಹೋರಾಟ ಪ್ರತಿಫಲ ಇಂದು ಯಶಸ್ವಿಯಾಗಿದ್ದು ಅಪ್ಪರ್ ಭದ್ರಾ ನೀರಾವರಿ ಯೋಜನೆ ಇದಕ್ಕೆ ಬಹುದೊಡ್ಡ ಸಾಕ್ಷಿಯಾಗಿದೆ. ಇಂತಹ ರೈತರ ಚಿಂತನೆಯುಳ್ಳ ಶ್ರೀಗಳು ಶತಮಾನಗಳವರೆಗೆ ಬದುಕಿ ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕೆರೆಗೋಡು ಶ್ರೀಕ್ಷೇತ್ರದ ಪೀಠಾಧ್ಯಕ್ಷ ಶಿವಾನಂದ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಹುಲಿಕುಂಟೆ ಜಿಪಂ ಮಾಜಿ ಸದಸ್ಯ ರಾಮಕೃಷ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಜೆಡಿಎಸ್ ಯುವ ಮುಖಂಡ ಸತ್ಯಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ಸಮಾಜ ಸೇವಕ ಕ್ಯಾದಿಗುಂಟೆ ತಿಪ್ಪೇಸ್ವಾಮಿ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಹಲಗುಂಡೇಗೌಡ, ನಗರಸಭೆ ಅಧ್ಯಕ್ಷ ಆಂಜಿನಪ್ಪ, ಸದಸ್ಯರಾದ ರಾಮು, ಜಿಪಂ ಮಾಜಿ ಸದಸ್ಯ ಮುದಿಮಡು ರಂಗಸ್ವಾಮಯ್ಯ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!