ಗುಬ್ಬಿಯಲ್ಲಿ ಡಬಲ್ ಮರ್ಡರ್- ಹತ್ಯೆ ಬಗ್ಗೆ ಹಲವು ಅನುಮಾನ

ಪಂಪ್ ಮೋಟಾರ್ ಕದಿಯಲು ಬಂದವರ ಕೊಲೆ

1,468

Get real time updates directly on you device, subscribe now.

ಗುಬ್ಬಿ: ಗುರುವಾರ ತಡರಾತ್ರಿ ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿ ಗ್ರಾಮದ ಬಳಿ ಇಬ್ಬರು ಯುವಕರನ್ನು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಪೆದ್ದನಹಳ್ಳಿಯ ದಲಿತ ಕಾಲೊನಿ ನಿವಾಸಿ ಗಿರೀಶ್(32) ಹಾಗೂ ಮಂಚಲದೊರೆ ಗ್ರಾಮದ ಗಿರೀಶ್ (33)ಎಂಬ ಇಬ್ಬರು ಯುವಕರನ್ನು ಹತ್ಯೆ ಮಾಡಲಾಗಿದೆ, ಹತ್ಯೆಗೆ ನಿಖರವಾದ ಕಾರಣ ಇದುವರೆಗೂ ತಿಳಿದುಬಂದಿಲ್ಲ ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ, ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯ ತೋಟದ ಮಧ್ಯೆ ಇರುವ ನೀರಿನ ಹೊಂಡದಲ್ಲಿ ಒಬ್ಬ ವ್ಯಕ್ತಿಯ ಶವ ಪತ್ತೆಯಾದರೆ ದಾರಿ ಮಧ್ಯೆ ಮತ್ತೊಬ್ಬನ ಶವ ಪತ್ತೆಯಾಗಿದೆ, ಗುರುವಾರ ತಡರಾತ್ರಿ ಇಬ್ಬರನ್ನು ಹತ್ಯೆ ಮಾಡಿರುವ ಶಂಕೆಯಿದ್ದು, ಮುಂಜಾನೆ ದಾರಿ ಹೋಕರು ಆ ದಾರಿಯಲ್ಲಿ ಶವಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರೈತರ ತೋಟದಲ್ಲಿ ಮೋಟಾರ್ ಪಂಪ್ ಸೆಟ್ ಕದಿಯಲು ಬಂದು ನೇರವಾಗಿ ಸಿಕ್ಕಿಬಿದ್ದ ಯುವಕರಿಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಆಟೋ ಚಾಲಕನಾಗಿದ್ದ ಗಿರೀಶ್ ಪೆದ್ದನಹಳ್ಳಿ ಸುತ್ತಮುತ್ತ ಆಟೋ ಓಡಿಸಿಕೊಂಡಿದ್ದ, ಮೂರು ತಿಂಗಳ ಹಿಂದೆ ಗಿರೀಶ್ ವಿರುದ್ಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನದ ಕೇಸ್ ದಾಖಲಾಗಿತ್ತು, ಮೂರು ತಿಂಗಳು ಜೈಲುಶಿಕ್ಷೆ ಅನುಭವಿಸಿ ಹೊರಬಂದಿದ್ದ ಗಿರೀಶ್ ಗುರುವಾರ ಸಂಜೆ ಮಂಚಲದೊರೆ ಗ್ರಾಮದ ಗಿರೀಶ್ ಎಂಬಾತನನ್ನು ಪೆದ್ದನಹಳ್ಳಿಗೆ ಕರೆಸಿಕೊಂಡಿದ್ದ, ಇಬ್ಬರೂ ಮನೆಯಲ್ಲಿ ಒಟ್ಟಿಗೆ ಊಟ ಮಾಡಿ ರಾತ್ರಿ 11 ಗಂಟೆ ಸುಮಾರಿಗೆ ಪೆದ್ದನಹಳ್ಳಿ ಗ್ರಾಮದ ತೋಟದಲ್ಲಿ ಮೋಟರ್ ಪಂಪ್ ಸೆಟ್ ಕದಿಯಲು ಹೋಗಿದ್ದರು ಎನ್ನಲಾಗಿದೆ.
ಈ ವೇಳೆ ಯುವಕರಿಬ್ಬರೂ ತೋಟದ ಮಾಲೀಕನ ಕೈಗೆ ಸಿಕ್ಕಿಬಿದಿದ್ದು, ಮಾಲೀಕನ ಕಡೆಯವರು ತಡ ರಾತ್ರಿಯವರೆಗೂ ಯುವಕರ ಬಟ್ಟೆಬಿಚ್ಚಿ ಅಮಾನುಷವಾಗಿ ಥಳಿಸಿ ಕೊಲೆ ಮಾಡಿದ್ದಾರೆ, ಮೃತ ದೇಹಗಳನ್ನು ತೋಟದಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಅಂದರೆ ಒಬ್ಬನ ಶವ ಪೆದ್ದನಹಳ್ಳಿಯ ನೀರಿನ ಕಟ್ಟೆ ಬಳಿ, ಮತ್ತೊಬ್ಬನ ಶವ ನೀರಿನ ಕಟ್ಟೆಯ ರಸ್ತೆಬದಿ ಬಿಸಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಧಿಕಾರಿ ರಾಹುಲ್ ಕುಮಾರ್, ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ಕುಮಾರಪ್ಪ,ಸಿಪಿಐ ನದಾಫ್, ಪಿಎಸ್ಐ ನಟರಾಜು ಸೇರಿದಂತೆ ಶ್ವಾನದಳ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿಗಳ ಪತ್ತೆಗೆ ಪೊಲೀಸ್ ತಂಡ ರಚನೆ ಮಾಡಲಾಗಿದೆ.

Get real time updates directly on you device, subscribe now.

Comments are closed.

error: Content is protected !!