ಭ್ರಷ್ಟಾಚಾರದ ವಿಷ ಬೀಜ ಬಿತ್ತಿದ್ದು ಕಾಂಗ್ರೆಸ್

ದೇಶ, ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ನಡೆಸಿದೆ: ಸಿ.ಟಿ.ರವಿ

185

Get real time updates directly on you device, subscribe now.

ತುಮಕೂರು: ದೇಶದಲ್ಲಿ ಭ್ರಷ್ಟಾಚಾರ ಎಂಬ ವಿಷ ಬೀಜ ಬಿತ್ತಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.

ನಗರದ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ದುರಾಡಳಿತದಿಂದಾಗಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಸೇರಿ ಹೋಗಿದೆ,ಅದನ್ನು ನಿಯಂತ್ರಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಪಿಎಸ್ಐ ನೇಮಕಾತಿಗೆ ಸಂಬಂಧಿಸಿದ ಅಕ್ರಮದ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿರುವುದು ಬಿಜೆಪಿ ಸರ್ಕಾರ, ಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಪರಾಧ ಹೇಗಾಗುತ್ತದೆ,ಅಕ್ರಮ ಮುಚ್ಚಿ ಹಾಕಿದರೆ ಅಕ್ರಮ ಆಗುತ್ತದೆ,ಈ ಅಕ್ರಮದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅವರನ್ನು ಪತ್ತೆ ಹಚ್ಚಿ ಬಂಧಿಸಿದರೆ ಅಪರಾಧವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಅಕ್ರಮ ಮುಚ್ಚಿ ಹಾಕುವ ಕೆಲಸವನ್ನು ಬಹಳ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ಮಾಡುತ್ತಾ ಬಂದಿದೆ, ಅರ್ಕಾವತಿ ಹಗರಣ, ಹ್ಯೂಬ್ಲೆಟ್ ವಾಚ್ ಹಗರಣ ಮುಚ್ಚಿ ಹಾಕಿದ್ದು ಯಾರು ಎಂದು ಸಿ.ಟಿ. ರವಿ ಪ್ರಶ್ನಿಸಿ, ಯಾವ ಗುತ್ತಿಗೆದಾರರು 40 ಪರ್ಸಂಟೇಜ್ ಕಮಿಷನ್ ಕೊಟ್ಟು ಕೆಲಸ ಮಾಡಲು ಸಾಧ್ಯವಿದೆ, ಇದೆಲ್ಲ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನಡೆಸಿರುವ ಷಡ್ಯಂತ್ರ ಎಂದರು.
ವ್ಯವಸ್ಥಿತವಾಗಿ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದಲೇ ಈಶ್ವರಪ್ಪನವರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ದೂರಿದರು.
ಸಾರ್ವಜನಿಕ ಜೀವನದಲ್ಲಿ ಕೆಲವು ಮೌಲ್ಯಗಳನ್ನು ಒಪ್ಪಿಕೊಂಡಿರುವ ಪಕ್ಷ ಅಪರಾಧಿ ಅಲ್ಲ ಎನ್ನುವುದನ್ನು ತೋರಿಸುವ ಸಲುವಾಗಿ ಹಲವು ಕ್ರಮ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಈಶ್ವರಪ್ಪನವರು ಸ್ವಯಂ ಪ್ರೇರಿತರಾಗಿಯೇ ರಾಜೀನಾಮೆ ನೀಡಿದ್ದಾರೆ, ಯಾರೂ ಅವರ ತಲೆದಂಡೆ ಮಾಡಿಲ್ಲ, ಇದೆಲ್ಲಾ ವಿರೋಧಿಗಳ ಷಡ್ಯಂತ್ರ ಎಂದರು.
ಕನ್ನಡವೇ ಸರ್ವ ಶ್ರೇಷ್ಠ
ನಮ್ಮ ರಾಜ್ಯದಲ್ಲಿ ಮಾತೃಭಾಷೆ ಕನ್ನಡವೇ ಸರ್ವಶ್ರೇಷ್ಠ, ನಾವು ಯಾರ ಗುಲಾಮರೂ ಆಗಬೇಕಿಲ್ಲ, ಈ ಕುರಿತು ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯನವರೇ ಇಂಗ್ಲಿಷ್ ಮತ್ತು ಸೋನಿಯಾಗಾಂಧಿಯವರ ಗುಲಾಮರಾಗಿದ್ದಾರೆ ಎಂದು ತಿರುಗೇಟು ನೀಡಿದರು.
ಆಯಾ ಪ್ರಾದೇಶಿಕ ಭಾಷೆಗಳಿಗೆ ಶಿಕ್ಷಣ ಕೊಡಬೇಕು ಎಂಬ ಅಂಶವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ, ಹಾಗೆಯೇ ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲೇ ಕೊಡಬೇಕು ಎಂಬುದನ್ನು ಪ್ರಸ್ತಾಪಿಸಲಾಗಿದೆ, ಹೀಗಿರುವಾಗ ಕನ್ನಡ ಭಾಷೆ ಕಡೆಗಣಿಸುವ ಅಂಶ ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ವಿನಾ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಗೊಂದಲ ಮೂಡಿಸುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರು ರಾಷ್ಟ್ರಭಾಷೆಗೆ ಪ್ರಾಧಾನ್ಯತೆ ಕೊಡುತ್ತಾರೋ ಅಥವಾ ನಮ್ಮ ಮೇಲೆ ಆಕ್ರಮಣಕಾರಿ ಮಾಡಿದ ಗುಲಾಮಗಿರಿ ಭಾಷೆಗೆ ಪ್ರಾಧಾನ್ಯತೆ ಕೊಡುತ್ತಾರೋ ಎಂದ ಅವರು, ಅಮಿತ್ ಶಾ ಅವರು ಮಾತೃಭಾಷೆಗೆ ಮನ್ನಣೆ ನೀಡಿ, ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಬದಲಿಗೆ ಹಿಂದಿ ಬಳಸಿ ಎಂದು ಹೇಳಿದ್ದಾರೆ, ಕನ್ನಡ ಬಿಟ್ಟು ಹಿಂದಿಯಲ್ಲಿ ಮಾತನಾಡಿ ಎಂದಿದ್ದರೆ ನಾವು ಸಹ ಧ್ವನಿ ಎತ್ತುತ್ತಿದ್ದೆವು ಎಂದು ತಿಳಿಸಿದರು.
ಇಂಗ್ಲಿಷ್ ಗುಲಾಮಗಿರಿ ಭಾಷೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ, ಈ ಮಾನಸಿಕತೆಯಲ್ಲಿ ಯೋಚನೆ ಮಾಡುವುದಾದರೆ ಸಿದ್ದರಾಮಯ್ಯನವರು ತಾನು ಇಂಗ್ಲಿಷ್ ಗುಲಾಮ ಎಂದು ಒಪ್ಪಿಕೊಳ್ಳಬೇಕು ಎಂದರು.
ರಾಜ್ಯದ ಉದ್ದಗಲಕ್ಕೂ ನಡೆದಿರುವ ಬೇರೆ ಬೇರೆ ಗಲಭೆಗಳಲ್ಲಿ ಕಾಂಗ್ರೆಸ್ ಪಕ್ಷ ಪಾತ್ರ ಇರುವುದು ಸ್ಪಷ್ಟವಾಗಿದೆ, ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸವನ್ನು ಜಮೀರ್ ಮಾತ್ರ ಅಲ್ಲ, ಆ ರೀತಿಯ ಬಹಳ ಜನ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!