ಪ್ರಾಣಿ ಜನ್ಯ ರೋಗ ಮನುಷ್ಯರನ್ನು ಕಾಡುತ್ತಿದೆ: ಡಾ.ಸುರೇಶ್

189

Get real time updates directly on you device, subscribe now.

ತುಮಕೂರು: ನಿಸರ್ಗದ ಬದಲಾವಣೆಯಿಂದ ಅನೇಕ ಪ್ರಾಣಿ ಜನ್ಯ ರೋಗಗಳು ಮನುಷ್ಯರನ್ನು ಕಾಡುತ್ತಿವೆ, ಇವುಗಳನ್ನು ತಡೆಯುವುದು ಪಶುವೈದ್ಯಕೀಯ ಇಲಾಖೆಗೆ ದೊಡ್ಡ ಸವಾಲಾಗಿದೆ, ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳುವ ಮೂಲಕ ಇವುಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಪಶುವೈದ್ಯರು ಮಾಡಬೇಕಿದೆ ಎಂದು ಭಾರತ ಸರಕಾರದ ಪಶುವೈದ್ಯಕೀಯ ಇಲಾಖೆಯ ನಿವೃತ್ತ ಆಯುಕ್ತ ಡಾ.ಸುರೇಶ್ ಎಸ್.ಹೊನ್ನಪ್ಪಗೊಳ್ ತಿಳಿಸಿದರು.

ನಗರದ ಎಂ.ಜಿ.ರಸ್ತೆಯ ಸಿಯೋನ್ ಬ್ಯಾಕ್ವೆಟ್ ಹಾಲ್ ನಲ್ಲಿ ವಿಶ್ವ ಪಶುವೈದ್ಯ ದಿನಾಚರಣೆಯ ಅಂಗವಾಗಿ ಕರ್ನಾಟಕ ಪಶುವೈದ್ಯ ಸಂಘ ತುಮಕೂರು ಜಿಲ್ಲಾ ಶಾಖೆ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಂತ್ರಿಕ ವಿಚಾರ ಸಂಕಿರಣದ ದಿಸ್ಕೂಚಿ ಭಾಷಣ ಮಾಡಿದ ಅವರು, ಶೇ.75ರಷ್ಟು ಪ್ರಾಣಿ ಜನ್ಯ ರೋಗಗಳು ಮನುಷ್ಯನಲ್ಲಿ ಕಾಣಿಸಿಕೊಳ್ಳುತ್ತಿವೆ.ಇವುಗಳ ನಿಯಂತ್ರಣದಲ್ಲಿ ಪಶುವೈದ್ಯರ ಪಾತ್ರ ಅಪಾರವಿದೆ ಎಂದರು.
ಸರಕಾರದಿಂದ ಹೈನುಗಾರರಿಗೆ ನೀಡುವ ವಿವಿಧ ಯೋಜನೆಗಳ ಜವಾಬ್ದಾರಿ ನಿರ್ವಹಣೆ ಮತ್ತು ಜಾನುವಾರುಗಳ ಆರೋಗ್ಯದ ಜೊತೆಗೆ, ಅವುಗಳ ಮಾಲೀಕರ ಅರ್ಥಿಕ ಸಬಲೀಕರಣವನ್ನು ಉನ್ನತ್ತಿಗೊಳಿಸುವ ಗುರುತರ ಜವಾಬ್ದಾರಿಯೂ ಪಶುವೈದ್ಯರ ಮೇಲಿದೆ, ಹೀಗಾಗಿ ಇತ್ತೀಚಿನ ದಿನಗಳಲ್ಲಿ ಪಶು ವೈದ್ಯರು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ.ಇದರ ನಿವಾರಣೆಗೆ ಸಮಾಜ, ಸಂಘ ಸಂಸ್ಥೆಗಳು ಹಾಗೂ ಸರಕಾರಗಳು ಪಶುವೈದ್ಯರೊಂದಿಗೆ ಕೈಜೋಡಿಸಬೇಕಿದೆ.ಇಲಾಖೆ ಖಾಲಿ ಇರುವ ಪಶುವೈದ್ಯರ ಹುದ್ದೆಗಳನ್ನು ತುಂಬುವ ಜೊತೆಗೆ, ಆಧುನಿಕ ತಂತ್ರಜ್ಞಾನ,ಅದಕ್ಕೆ ಸಂಬಂಧಿಸಿದ ಪ್ರಯೋಗಾಲಯಗಳು,ಯಂತ್ರೋಪಕರಣಗಳನ್ನು ನೀಡುವ ಮೂಲಕ ಪಶುವೈದ್ಯರು ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾದಾಗ ಮಾತ್ರ ವೃತ್ತಿ ಒತ್ತಡದಿಂದ ಮುಕ್ತರಾಗಲು ಸಾಧ್ಯ ಎಂದು ಡಾ.ಸುರೇಶ್.ಎಸ್.ಹೊನ್ನಪ್ಪಗೋಳ ಸಲಹೆ ನೀಡಿದರು.
ಮಾನವ ವೈದ್ಯರಿಗಿಂತ ಪಶು ವೈದ್ಯರು ವೃತ್ತಿ ಅತ್ಯಂತ ಕಷ್ಟಕರವಾಗಿದೆ.ಬಹುತೇಕ ಮಾನವ ದೇಹದ ರಚನೆ ಒಂದೇ ತರನಾಗಿರುತ್ತದೆ.ಆದರೆ ಆದರೆ ಪ್ರತಿ ಪ್ರಾಣಿಯ ದೇಹ ರಚನೆ ವಿಭಿನ್ನವಾಗಿದ್ದು, ಇವುಗಳನ್ನು ಅಭ್ಯಾಸಿಸಿ, ಅವುಗಳಿಗೆ ಬರಬಹುದಾದ ರೋಗಗಳನ್ನು ತಿಳಿದು, ಚಿಕಿತ್ಸೆ ನೀಡುವುದರ ಜೊತೆಗೆ,ಪ್ರಾಣಿಗಳ ಉಪ ಉತ್ಪನ್ನಗಳ ಮೇಲೆ ಅವಲಂಭಿತರವಾಗಿರುವ ಅವುಗಳ ಮಾಲೀಕರ ಪ್ರಾಣಿಗಳ ಅರ್ಥಿಕ ಅವಲಂಬನೆಯನ್ನು ಗಮನಿಸಿ ಕಾರ್ಯನಿರ್ವಹಿಸಬೇಕಿದೆ. ಇದನ್ನು ಸಮಾಜ ಅರ್ಥ ಮಾಡಿಕೊಂಡು, ಪಶುವೈದ್ಯರೊಂದಿಗೆ ಸಹಕರಿಸಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ನಮ್ಮಲ್ಲಿ ಮನೆ ಗೆದ್ದು, ಮಾರು ಗೆಲ್ಲು ಎಂಬ ಮಾತಿದೆ, ಹಾಗಾಗಿ ಪಶುವೈದ್ಯರು ವೃತ್ತಿ ಜೀವನ ಮತ್ತು ಕೌಟುಂಬಿಕ ಜೀವನ ಎರಡರಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಿದೆ, ಹಾಗಾದಾಗ ಮಾತ್ರ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯ, ಪ್ರಾಣಿಗಳ ಜೀವ ಉಳಿಸುವ ನಿಮಗೆ ಪ್ರಾಣಿಗಳಿಂದಲೇ ಕಲಿಯುವಂತಹ ಅನೇಕ ಅಂಶಗಳಿರುತ್ತವೆ, ಅವುಗಳ ತಾಳ್ಮೆ, ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವ ರೀತಿ, ತನ್ನ ಸಹಪಾಠಿಗಳಿಗೆ ನೋವಾದಾಗ ಸ್ಪಂದಿಸುವ ರೀತಿ, ಇವುಗಳನ್ನು ಗಮನಿಸಿ ನಾವು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶೇ. 99 ರಷ್ಟು ಭಾಗ ಒತ್ತಡದಿಂದ ಮುಕ್ತರಾಗಬಹುದು, ಒಂದು ಸಂಘ ರಾಜಕೀಯ ರಹಿತ ಉದ್ದೇಶ ಹೊಂದಿದ್ದರೆ ಅದು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬಲ್ಲದು ಎಂಬುದಕ್ಕೆ ತುಮಕೂರು ಜಿಲ್ಲಾ ಪಶುವೈದ್ಯರ ಸಂಘ ಉತ್ತಮ ಉದಾಹರಣೆ ಎಂದು ಹಲವು ಸನ್ನಿವೇಶಗಳ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್, 2000 ನೇ ಇಸವಿಯಿಂದ ಏಪ್ರಿಲ್ ಕೊನೆಯ ಶನಿವಾರವನ್ನು ವಿಶ್ವ ಪಶುವೈದ್ಯಕೀಯ ದಿನವನ್ನಾಗಿ ಆಚರಿಸಲಾಗುತ್ತಿದೆ, ಇತ್ತೀಚಿನ ದಿನಗಳಲ್ಲಿ ಪಶುವೈದ್ಯರು ಸಾಕಷ್ಟು ಒತ್ತಡ ಅನುಭವಿಸುತಿದ್ದು, ಅತ್ಯಂತ ಕಿರಿಯ ವಯಸ್ಸಿಗೆ ಕೆಲವರು ಹೃದ್ರೋಗದಂತಹ ಮಾರಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ, ಆದ್ದರಿಂದ ಈ ವರ್ಷದ ಪಶುವೈದ್ಯಕೀಯ ದಿನದ ಘೋಷವಾಕ್ಯ ಎನಾನ್ಸಿಂಗ್ ವೆಟನರಿ ರೆಜಿಲೆನ್ಸ್ ಎಂಬುದಾಗಿದೆ, ರೈತರ ಮನೆಬಾಗಿಲಿಗೆ ಹೋಗಿ ಸೇವೆ ಒದಗಿಸುವ ನಮಗೆ ರೈತರನ್ನು ಸಂಭಾಳಿಸುವುದು ಸವಾಲಿನ ಕೆಲಸವಾಗಿದೆ, ಇದರಿಂದ ಮಾನಸಿಕ ಮತ್ತು ದೈಹಿಕ ಒತ್ತಡಕ್ಕು ಪಶು ವೈದ್ಯರು ಒಳಗಾಗುತ್ತಿದ್ದು, ಇದರಿಂದ ಹೊರ ಬರುವ ನಿಟ್ಟಿನಲ್ಲಿ ಇಲಾಖೆಗಳು, ಸಂಘ ಸಂಸ್ಥೆಗಳು ಪಶುವೈದ್ಯರೊಂದಿಗೆ ಕೈಜೋಡಿಸಬೇಕಿದೆ ಎಂದರು.
ವೇದಿಕೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಉಪನಿರ್ದೇಶಕ ಡಾ.ಬಿ.ಕೆ.ನಾಗರಾಜು, ಪಶುವೈದ್ಯಕೀಯ ಇಲಾಖೆಯ ತುಮಕೂರು ಜಿಲ್ಲೆಯ ಉಪನಿರ್ದೇಶಕ ಡಾ.ಜಿ.ವಿ.ಜಯಣ್ಣ, ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್, ಪ್ರಧಾನ ಕಾರ್ಯದರ್ಶಿ ಡಾ.ಆರ್.ಎಂ.ನಾಗಭೂಷಣ್, ಉಪಾಧ್ಯಕ್ಷ ಡಾ.ಎ.ಸಿ.ದಿವಾಕರ್, ಜಂಟಿ ಕಾರ್ಯದರ್ಶಿ ಡಾ.ಮಹದೇವಯ್ಯ, ಖಜಾಂಚಿ ಡಾ.ಬಿ.ಆರ್.ನಂಜುಂಡೇಗೌಡ, ಮಹಿಳಾ ಪ್ರತಿನಿಧಿ ಡಾ.ಹೆಚ್.ಶಶಿಕಲ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!