ಶಾಸಕ ರಂಗನಾಥ್ ಗೆ ಜನಪರ ಕಾಳಜಿ ಇಲ್ಲ

ತಮ್ಮ ಕ್ರಷರ್ ಆರಂಭಿಸಲು ಬಹಳ ಕಾಳಜಿ ಇದೆ: ಕೃಷ್ಣಕುಮಾರ್

198

Get real time updates directly on you device, subscribe now.

ಕುಣಿಗಲ್: ತಾಲೂಕನ್ನು ಪ್ರತಿನಿಧಿಸುತ್ತಿರುವ ಶಾಸಕರಿಗೆ ಜನರಸಮಸ್ಯೆ ಬಗೆಹರಿಸುವ ಕಾಳಜಿ ಇಲ್ಲ, ನಿಂತು ಹೋಗಿರುವ ತಮ್ಮ ಕ್ರಷರ್ ಆರಂಭಿಸಲು ಬಹಳ ಕಾಳಜಿ ಇದೆ ಎಂದು ಬಿಜೆಪಿ ಮುಖಂಡ, ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಹೇಳಿದರು.

ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಜನರ ಸಮಸ್ಯೆ ನಿಟ್ಟಿನಲ್ಲಿ ಅಹವಾಲು ಸ್ವೀಕರಿಸಿದ ನಂತರ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅನುದಾನ ನೀಡಿದರೂ ಶಾಸಕರು ಅವುಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳದೆ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಲೆ ಕಾಲ ಕಳೆದಿದ್ದಾರೆ, ತಾಲೂಕನ್ನು ಪ್ರತಿನಿಧಿಸಿದ ಯಾವುದೇ ಶಾಸಕರಾಗಲಿ ಕಲ್ಲು ಗಣಿಗಾರಿಕೆಗೆ ಕೈ ಹಾಕಲಿಲ್ಲ, ಈ ಶಾಸಕರು ತಾಲೂಕಿನಲ್ಲಿ ಗಣಿಕಾರಿಕೆಗೆ ಕೈಹಾಕಿ ತಾಲೂಕಿನ ಜನರ ಶೋಷಣೆ ಮಾಡುತ್ತ, ಕಲ್ಲು ಗಣಿಗಾರಿಕೆಯಲ್ಲಿ ಸಂಪಾದಿಸಿದ ಹಣವನ್ನೆ ಮತ್ತೆ ಚುನಾವಣೆಯಲ್ಲಿ ಚೆಲ್ಲಿ, ತಾಲೂಕಿನ ಮತ್ತಷ್ಟು ಬಂಡೆಗಳ ನಿರ್ನಾಮ ಮಾಡಲು ಯೋಜನೆ ಹಾಕಿಕೊಂಡು ಕಾರ್ಯಗತ ಮಾಡುವಲ್ಲೆ ಹಗಲಿರುಳು ಶ್ರಮಿಸುತ್ತಿದ್ದಾರೆ ಹೊರತು ತಾಲೂಕಿನ ಅಭಿವೃದ್ಧಿ ಬಗ್ಗೆಯಲ್ಲ ಎಂದು ಹರಿಹಾಯ್ದರು.
ಶಾಸಕರಾಗಿ ನಾಲ್ಕು ವರ್ಷ ಎರಡು ತಿಂಗಳು ಕಳೆದರೂ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ, ಹೇಮಾವತಿ ನಾಲಾ ಕಾಮಗಾರಿ ಚಾಲನೆಗೆ ಕ್ರಮ ಕೈಗೊಂಡಿಲ್ಲ, ರಾಜ್ಯ ಸರ್ಕಾರ ನೀಡಿರುವ ಬೆಸ್ಕಾಂ ಸ್ಥಾವರಗಳ ಚಾಲನೆಗೆ ಕ್ರಮ ಕೈಗೊಂಡಿಲ್ಲ, ಅಧಿಕಾರಿಗಳ ಸಭೆ ನಡೆಸಿ ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸ ನಿಗದಿತ ಅವಧಿಯೊಳಗೆ ಆಗುವಂತೆ ನೋಡಿಕೊಂಡಿಲ್ಲ, ಬಗರ್ ಹುಕುಂ ಸಾಗುವಳಿದಾರರಿಗೆ ಉಳುಮೆ ಚೀಟಿ ನೀಡುವಲ್ಲಿ ಕ್ರಮ ವಹಿಸಿಲ್ಲ, ಆಶ್ರಯ ಸಮಿತಿಯ ಮೂಲಕ ಬಡ ಜನತೆಗೆ ನಿವೇಶನ, ವಸತಿ ಯೋಜನೆ ತಲುಪಿಸಲು ಶ್ರಮಿಸಿಲ್ಲ, ತಾಲೂಕಿನ ನೀರನ್ನು ಬೇರೆಡೆಗೆ ಹರಿಸಲು ಯೋಜನೆ ಮಾಡುವ ಮೂಲಕ ತಾಲೂಕಿನ ನೀರಾವರಿ ಕ್ಷೇತ್ರಕ್ಕೆ ಸಾಕಷ್ಟು ಅನ್ಯಾಯ ಮಾಡಿದ್ದಾರೆ, ದೊಡ್ಡಕೆರೆಯ ಅಚ್ಚುಕಟ್ಟಿನ ಪ್ರದೇಶಕ್ಕೆ ನೀರಿದ್ದರೂ ಬಿಡದಂತೆ ಮಾಡಿದ್ದಾರೆ, ಕಾಲಕಾಲಕ್ಕೆ ಮಳೆಯಾಗುತ್ತಿರುವುದರಿಂದ ದೊಡ್ಡಕೆರೆ ಅಚ್ಚುಕಟ್ಟುದಾರರು ಉಳಿದಿದ್ದಾರೆ, ಇಲ್ಲವಾದಲ್ಲಿ ತೋಟಗಾರಿಕೆ ನೆಲಕಚ್ಚಿ ರೈತರು ಪರದಾಡುವಂತಾಗುತ್ತಿತ್ತು, ಚುನಾವಣೆ ವರ್ಷವಾಗಿರುವುದರಿಂದ ಹಿಂದಿನ ಶಾಸಕರು ಮಂಜೂರು ಮಾಡಿಸಿರುವ ಕಾಮಗಾರಿ ಸೇರಿದಂತೆ ಗ್ರಾಮ ಪಂಚಾಯಿತಿ ನರೇಗಾ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡಿಕೊಂಡು ಕಾಲ ಕಳೆಯುತ್ತಿದ್ದು ತಾಲೂಕನ್ನು ಅಭಿವೃದ್ಧಿ ವಿಷಯದಲ್ಲಿ ಹಿಂದಕ್ಕೆ ಕೊಂಡೊಯ್ದಿದ್ದಾರೆ ಎಂದರು.
ಜೈನ ಸಮಾಜದ ಬಾಂಧವರು, ಪಟ್ಟಣದಲ್ಲಿ ಮಂಜೂರು ಮಾಡಲಾಗಿದ್ದ ಎರಡುಗುಂಟೆ ಜಮೀನು ಒತ್ತುವರಿ ಆಗಿರುವುದರಿಂದ ಸ್ಮಶಾನ ಒತ್ತುವರಿ ತೆರವುಗೊಳಿಸಿಕೊಡಬೇಕೆಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಸ್ಮಶಾನ ಒತ್ತುವರಿ ತೆರವುಗೊಳಿಸಲು ಕ್ರಮಕ್ಕೆ ಆಗ್ರಹಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಎ.ಸಂತೋಶ್, ಯುವ ಬಿಜೆಪಿ ಅಧ್ಯಕ್ಷ ಧನುಶ್ ಗಂಗಾಟ್ಕಾರ್, ಪ್ರಮುಖರಾದ ಶ್ರೀನಿವಾಸ್, ಅಮರ್, ಸಲ್ಮಾನ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!