ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಿ

ತೋಟಗಾರಿಕಾ ಬೆಳೆಗಳ ವೀಕ್ಷಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಲಹೆ

135

Get real time updates directly on you device, subscribe now.

ತುಮಕೂರು: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಗಿರಿರಾಜ್ ಸಿಂಗ್ ಅವರು ಸೋಮವಾರ ಜಿಲ್ಲೆಯ ಬೆಳ್ಳಾವಿ ಹೋಬಳಿ ಮಷಣಾಪುರ ಗ್ರಾಮದ ಪ್ರಗತಿಪರ ರೈತ ಎಂ.ಎಸ್. ಮೃತ್ಯುಂಜಯ ಅವರ ತೋಟಕ್ಕೆ ಭೇಟಿ ನೀಡಿ ಸಮಗ್ರ ಸಾವಯವ ಕೃಷಿ ವ್ಯವಸ್ಥೆಯಡಿ ಬೆಳೆದಿರುವ ವಿವಿಧ ತೋಟಗಾರಿಕಾ ಮಿಶ್ರ ತಳಿ ಬೆಳೆಗಳನ್ನು ವೀಕ್ಷಿಸಿದರು.

ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತೆಂಗು, ಅಡಿಕೆ, ಮೆಣಸು, ಏಲಕ್ಕಿ, ಕಾಫಿ, ಸಪೋಟ, ಸೀಬೆ, ಮಾವು, ಡ್ರ್ಯಾಗನ್ ಫ್ರೂಟ್, ರೋಸ್ ಆ್ಯಪಲ್, ಮಲೆಯನ್ ಆ್ಯಪಲ್, ಎಗ್ ಪ್ರೂಟ್, ಜಾಕಾಯಿ ಸೇರಿದಂತೆ 250ಕ್ಕೂ ಹೆಚ್ಚು ದೇಸಿ, ವಿದೇಶಿ ಫಲ ಪುಷ್ಪ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದು, ರೈತ ಎಂ.ಎಸ್.ಮೃತ್ಯುಂಜಯ ಅವರ ಮಗ ಕೇಶವಸ್ವಾಮಿ ಅವರೊಂದಿಗೆ ತೋಟಕ್ಕೆ ತೆರಳಿದ ಸಚಿವರು ಪ್ರತಿಯೊಂದು ಬೆಳೆಯ ಬಗ್ಗೆಯೂ ತೀವ್ರ ಕುತೂಹಲದೊಂದಿಗೆ ಮಾಹಿತಿ ಪಡೆದರು.
ನಂತರ ಸಚಿವರು, ಸದರಿ ರೈತ ಮಾಡಿರುವ ಸಾವಯವ ಕೃಷಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸದರಿ ರೈತ ತೆಂಗು, ಅಡಿಕೆಯಂತಹ ದೀರ್ಘಾವಧಿ ಬೆಳೆಗಳ ನಡುವೆ ಮಿಶ್ರ ಬೆಳೆಗಳನ್ನು ಬೆಳೆದು ವಾರ್ಷಿಕ 20ಲಕ್ಷ ರೂ. ಗೂ ಹೆಚ್ಚು ಲಾಭ ಗಳಿಸಿದ್ದಾರೆ ಎಂದರಲ್ಲದೆ, ರೈತನ ಸಾಧನೆಯನ್ನು ಸ್ಥಳೀಯ ಗ್ರಾಮ ಪಂಚಾಯತಿಯು ಗುರುತಿಸಿ ರೈತನು ಅಳವಡಿಸಿಕೊಂಡಿರುವ ಕೃಷಿ ಪದ್ಧತಿಗಳ ಬಗ್ಗೆ ಇತರ ರೈತರಿಗೂ ತಿಳಿಯುವಂತೆ ಹೆಚ್ಚಿನ ಪ್ರಚಾರ ಕೈಗೊಂಡು ತರಬೇತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ರೈತ ಮೃತ್ಯುಂಜಯ ಅವರ ತೋಟದಲ್ಲಿ ಬೆಳೆಸಿರುವ ಅಂಜೂರ ಮರವು ಸುಮಾರು 10 ವರ್ಷದ್ದಾಗಿದ್ದು, 2 ರಿಂದ 3 ಕ್ವಿಂಟಾಲ್ ಹಣ್ಣು ಉತ್ಪಾದನೆ ಮಾಡುತ್ತಿದ್ದು, ಕೆಜಿ ಗೆ 100 ರೂ. ಗಳಂತೆ ವಹಿವಾಟು ಮಾಡಿ ಲಾಭ ಗಳಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತ ಕೇಶವಸ್ವಾಮಿ ನೆನಪಿನ ಕಾಣಿಕೆಯಾಗಿ ಅಂಜೂರದ ಸಸಿಯನ್ನು ಸಚಿವರಿಗೆ ನೀಡಿದರು. ಈ ಸಂದರ್ಭದಲ್ಲಿ ಸಚಿವರು ರೈತನ ತೋಟದಲ್ಲಿ ಬಾದಾಮಿ ಸಸಿ ನೆಟ್ಟು ನೀರೆರೆದರು.
ತದ ನಂತರ ಸಾತೇನಹಳ್ಳಿ ಗ್ರಾಮದ ಜಲಾನಯನ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಮೊದಲಿಗೆ ಸ್ವ ಸಹಾಯ ಸಂಘದ ಮಹಿಳೆಯರು ತಯಾರಿಸಿದಂತಹ ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ವೀಕ್ಷಿಸಿ ಇದರಿಂದ ಬರುವಂತಹ ಲಾಭಾಂಶದ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದರು.
ರೈತ ಉತ್ಪಾದಕ ಸಂಘ, ಸ್ವ ಸಹಾಯ ಸಂಘ ಮತ್ತು ಸ್ಥಳೀಯ ರೈತ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಶ್ರೀಗಂಧ ಕೃಷಿಯು ಅತ್ಯಂತ ಲಾಭಾದಾಯಕ ಎಂದ ಸಚಿವರು, ಶ್ರೀಗಂಧ ಮತ್ತು ತೇಗ ಬೆಳೆಯುವ ಬಗ್ಗೆ ರೈತರ ಅಭಿಪ್ರಾಯ ಆಲಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ರೈತರು, ಶ್ರೀಗಂಧ ಬೆಳೆಯು ಕೈಗೆ ಬರಲು 20 ವರ್ಷ ಕಾಯಬೇಕು, ಅಲ್ಲದೆ ಮರ ಬೆಳೆದಂತೆಲ್ಲಾ ಕಳ್ಳರ ಉಪಟಳ ಹೆಚ್ಚು ಎಂದು ಸಚಿವರಿಗೆ ವಿವರಿಸಿದರು.
ತದ ನಂತರ ಸಚಿವರು ಮಾತನಾಡಿ, ಕೇವಲ 3 ವರ್ಷದಲ್ಲಿ ಶ್ರೀಗಂಧದ ಬೀಜ ಲಭ್ಯವಾಗಿ ಅದರಿಂದ ಎಣ್ಣೆ ಉತ್ಪಾದಿಸಿ ರೈತರು ಲಾಭ ಪಡೆಯಬಹುದು, ಶ್ರೀಗಂಧ ಸಂಶೋಧನಾ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಿ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಸಚಿವರು ರೈತ ಮೃತ್ಯುಂಜಯ ಅವರ ತೋಟದ ಎಳನೀರು, ಹಲಸಿನ ಹಣ್ಣು ಸವಿದರು. ಸಂಸದ ಜಿ.ಎಸ್.ಬಸವರಾಜು, ಕೇಂದ್ರ ಭೂ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅಜಯ್ ತಿರ್ಕೆ, ಜಂಟಿ ಕಾರ್ಯದರ್ಶಿ ಉಮಾಕಾಂತ್ ಮತ್ತು ರಾಜ್ಯದ ಹಿರಿಯ ಐಎಎಸ್ ಅಧಿಕಾರಿಗಳಾದ ವೆಂಕಟೇಶ್, ಉಮಾ ಮಹದೇವನ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ.ವಿದ್ಯಾಕುಮಾರಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕೇಂದ್ರ ಸಚಿವರಿಗೆ ಅಗತ್ಯ ಮಾಹಿತಿ ನೀಡಿದರು.

Get real time updates directly on you device, subscribe now.

Comments are closed.

error: Content is protected !!