ದಲಿತ ಯುವಕರ ಹತ್ಯೆ-ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಒತ್ತಾಯ

146

Get real time updates directly on you device, subscribe now.

ತುಮಕೂರು: ಗುಬ್ಬಿ ತಾಲೂಕು ಕಡಬ ಹೋಬಳಿಯ ಪೆದ್ದನಹಳ್ಳಿ ಇಬ್ಬರು ದಲಿತ ಯುವಕರ ಬರ್ಬರ ಹತ್ಯೆ ಕೃತ್ಯ ಖಂಡನೀಯ, ಇದು ಕ್ರೌರ್ಯದ ಪರಮಾವಧಿ, ಕೊಲೆಗೆ ಬಲವಾದ ಕಾರಣ ಇರಬೇಕು, ಆ ಬಗ್ಗೆ ತನಿಖೆ ಆಗಬೇಕು ಎಂದು ಪಿಯುಸಿಎಲ್ ಜಿಲ್ಲಾಧ್ಯಕ್ಷ ಕೆ.ದೊರೈರಾಜ್ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪೆದ್ದನಹಳ್ಳಿ ಜೋಡಿ ಹತ್ಯೆ ಸತ್ಯಶೋಧನಾ ವರದಿ ಬಿಡುಗಡೆ ಮಾಡಿ ಮಾತನಾಡಿ, ಹತ್ಯೆಯಾದ ಯುವಕರನ್ನು ಕಳ್ಳರು ಎಂದು ಹೇಳುತ್ತಾರೆ, ಅದು ಸುಳ್ಳು, ಕೆಳ ಜಾತಿಯವರು ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ, ದುರ್ಬಲರು, ಅಸಹಾಯಕರು ಎಂಬ ಕಾರಣಕ್ಕೆ ಕೊಲೆ ನಡೆದಿದ್ದು, ಆ ಕುಟುಂಬಕ್ಕೆ ನ್ಯಾಯ ಸಿಗಬೇಕು, ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಕೊಲೆ ಕೇಸ್ ಮುಚ್ಚಿ ಹಾಕುವ ಕೆಲಸ ಆಗ್ತಾ ಇದೆ, ಇದು ಪೂರ್ವ ಯೋಜಿತ ಮಾನವ ಹತ್ಯೆ, ಜಾತಿ ವ್ಯವಸ್ಥೆಯ ಮನಸ್ಸುಗಳಿಂದ ಈ ಘಟನೆ ನಡೆದಿದೆ, ಗುಂಪು ಸೇರಿ ಮಾಡಿರುವ ಹತ್ಯೆ ಸಮಾಜಕ್ಕೆ ಮಾರಕ, ಹತ್ಯೆ ಮಾಡಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.
ಇಬ್ಬರೂ ದಲಿತ ಯುವಕರ ಮೃತ ದೇಹಗಳ ಮಹಜರು ಮಾಡುವ ಸಂದರ್ಭದಲ್ಲಿ ಕುಟುಂಬಸ್ಥರಿಂದ ಖಾಲಿ ಹಾಳೆಯ ಮೇಲೆ ಸಹಿ ಪಡೆದುಕೊಂಡಿದ್ದಾರೆ, ಮೃತ ದೇಹ ಶವ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಸಂಬಂಧಿಕರಿಗೆ ಸೂಕ್ತ ಮಾಹಿತಿ ನೀಡಿಲ್ಲ, ಕನಿಷ್ಠ ಮೃತ ದೇಹವನ್ನು ಮತ್ತು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಚಿತ್ರಣ ನೋಡಲು ಸಹ ಅವಕಾಶ ನೀಡಿಲ್ಲ ಎಂದು ತಿಳಿಸಿದರು.
ಸಾಫಾಯಿ ಕರ್ಮಚಾರಿಗಳ ಕಾವಲು ಸಮಿತಿಯ ಸಂಚಾಲಕ ಡಾ.ಕೆ.ಬಿ.ಓಬಲೇಶ್ ಮಾತನಾಡಿ, ಪೆದ್ದನಹಳ್ಳಿಯ ಮೃತ ಗಿರೀಶ್ ಮತ್ತು ಮಂಚಲದೊರೆಯ ಗಿರೀಶ್ ಅವರ ಮೃತದೇಹವನ್ನು ಮತ್ತೊಮ್ಮೆ ಪೋಸ್ಟ್ ಮಾರ್ಟಮ್ ನಡೆಸಬೇಕು, ಪ್ರಾಮಾಣಿಕವಾಗಿ ಮೃತ ದೇಹಗಳನ್ನು ಮಹಜರು ಮಾಡಬೇಕು ಮತ್ತು ಈಗಿರುವ ಪೋಸ್ಟ್ ಮಾರ್ಟಮ್ ವರದಿಯ ಪ್ರತಿಯನ್ನು ಕುಟುಂಬಕ್ಕೆ ನೀಡಬೇಕೆಂದು ಒತ್ತಾಯಿಸಿದರು.
ಮೃತ ಮಂಚಲದೊರೆ ಗಿರೀಶನ ಅಕ್ಕ ಲೋಕಮ್ಮ ಮಾತನಾಡಿ, ಇದುವರೆಗೂ ನಮಗೆ ಯಾವುದೇ ಮಾಹಿತಿಯಾಗಲಿ, ಹೇಳಿಕೆಯಾಗಲಿ ಪಡೆದಿಲ್ಲ, ಪಿಟೇಶನ್ ಪ್ರತಿ ನೀಡಿಲ್ಲ, ನನ್ನ ತಮ್ಮ ಏನು ತಪ್ಪು ಮಾಡಿದ್ದ, ಅಷ್ಟೊಂದು ಬರ್ಬರವಾಗಿ ಕೊಲೆ ಮಾಡಿರುವ ಹಿಂದಿನ ಉದ್ದೇಶ ಏನು, ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಸ್ಲಂಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ಮೃತ ಗಿರೀಶ್ ಸಹೋದರ ಶ್ರೀಧರ ಪಿ.ಎಂ, ತುಮಕೂರು ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್, ತಿರುಮಲಯ್ಯ, ದಸಂಸದ ಪಿ.ಎನ್ರಾಮಯ್ಯ, ರಂಜನ್, ಆಟೋ ಶಿವರಾಜ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!