ಹಕ್ಕುಪತ್ರಕ್ಕಾಗಿ ಹಕ್ಕಿಪಿಕ್ಕಿ ಜನರಿಂದ ಪ್ರತಿಭಟನೆ

206

Get real time updates directly on you device, subscribe now.

ಕೊರಟಗೆರೆ: ನಾವು ಕಾಡಿನಲ್ಲಿಯೇ ಸುಖವಾಗಿ ಜೀವನ ಮಾಡುತ್ತಿದ್ವಿ, ಈಗ ನಾಡಿನಲ್ಲಿ ನೋವು ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ, ಸರಕಾರ ನಮಗೆ ನೀಡಿದ ಭರವಸೆ ಈಗ ಹುಸಿಯಾಗಿದೆ, ಕಳೆದ 50 ವರ್ಷದಿಂದ ನಮ್ಮ ಹಕ್ಕಿಪಿಕ್ಕಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಮರೀಚಿಕೆ ಆಗಿದೆ ಎಂದು ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಂಘಟನೆಯ ರಾಜ್ಯಾಧ್ಯಕ್ಷ ಪುನೀತ್ಕುಮಾರ್ ಆರೋಪ ಮಾಡಿದರು.

ಕೊರಟಗೆರೆ ಪಟ್ಟಣದ ಕಂದಾಯ ಆವರಣದಲ್ಲಿ ರಾಜ್ಯ ಸರಕಾರ ಮತ್ತು ಕಂದಾಯ ಇಲಾಖೆಯ ವಿರುದ್ಧ ಹಕ್ಕಿಪಿಕ್ಕಿ ಸಮುದಾಯದ ಜನತೆಯ ಜೊತೆಗೂಡಿ ಆಕ್ರೋಶ ವ್ಯಕ್ತಪಡಿಸಿ ಮನೆಗಳ ಹಕ್ಕುಪತ್ರ ನೀಡುವಂತೆ ಉಪ ತಹಶೀಲ್ದಾರ್ ನರಸಿಂಹಮೂರ್ತಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
50 ವರ್ಷದಿಂದ ಕೊರಟಗೆರೆ ಕ್ಷೇತ್ರದ ಗಡಿ ಭಾಗದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ 150 ಕುಟುಂಬ ವಾಸವಿದ್ದಾರೆ, ಶಿಕ್ಷಣ ವಂಚಿತ ಕುಟುಂಬಕ್ಕೆ ಮನೆಯ ಹಕ್ಕುಪತ್ರ ಮರೀಚಿಕೆ ಆಗಿದೆ, ರಾಜಕೀಯ ನಾಯಕರು ಚುನಾವಣೆಗೆ ಮಾತ್ರ ನಮ್ಮನ್ನು ಬಳಸಿದ್ದಾರೆ. ರಾಜ್ಯ ಸರಕಾರ ಮತ್ತು ಕಂದಾಯ ಇಲಾಖೆ ನಮ್ಮ ಸಮುದಾಯದ ಕುಟುಂಬಕ್ಕೆ ಮನೆಯ ಹಕ್ಕು ಪತ್ರದ ಜೊತೆ ಶಿಕ್ಷಣದ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದು ಆಗ್ರಹ ಮಾಡಿದರು.
ಹಕ್ಕಿಪಿಕ್ಕಿ ಕಾಲೋನಿಯ ಗ್ರಾಮಸ್ಥ ರೆಡ್ಡಿಯಪ್ಪ ಮಾತನಾಡಿ ನಾವು ಕೊರಟಗೆರೆ ಕ್ಷೇತ್ರದ ಗಡಿ ಭಾಗದ ಗ್ರಾಮದಲ್ಲಿ ವಾಸವಿದ್ದೇವೆ, ನಮ್ಮ ಕುಟುಂಬಗಳಿಗೆ ಶಿಕ್ಷಣ ಮತ್ತು ಉದ್ಯೋಗದ ಸಮಸ್ಯೆಇದೆ, ಅಧಿಕಾರಿ ವರ್ಗ ಗ್ರಾಮಕ್ಕೆ ಬರ್ತಾರೆ ಮನವಿ ಪಡೆದು ಹೋಗುತ್ತಾರೆ, ನಮ್ಮೂರನ್ನು ಕಂದಾಯ ಗ್ರಾಮವನ್ನಾಗಿ ಮಾಡಿ ನಮ್ಮ ಸಮುದಾಯದ ಜನರ ಜೀವನಕ್ಕೆ ಬೆಳಕು ನೀಡಬೇಕಿದೆ ಎಂದು ಒತ್ತಾಯ ಮಾಡಿದರು.
ಮನವಿ ನೀಡಿದ ಸಂದರ್ಭದಲ್ಲಿ ಮುಖಂಡರಾದ ನಂದಕುಮಾರ್, ಶ್ಯಾಮನಾಥ್, ದಿವಾರಿ, ನಾರಾಯಣ್, ಭರತ್, ಏಸ್ಬಾಬು, ಮೇಘನ, ಸುಜಾತ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!