ನಾಗ ಮೋಹನ್ ದಾಸ್ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

130

Get real time updates directly on you device, subscribe now.

ಕುಣಿಗಲ್: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವರ್ಗಗಳಿಗೆ ಮೀಸಲಾತಿ ಹೆಚ್ಚಳ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ರವರ ವರದಿ ಜಾರಿಗೆ ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ರಾಜ್ಯಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಅಡಿಯಲ್ಲಿ ಪ್ರವಾಸಿ ಮಂದಿರದ ಬಳಿ ಸಂಘಟಿತರಾದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ತಾಲೂಕು ಕಚೇರಿವರೆಗೂ ಪ್ರತಿಭಟನೆ ನಡೆಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿದರು.
ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಶಾಸಕ ಡಾ.ರಂಗನಾಥ್, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿರುವಂತೆ ನಾನು ಹೋರಾಟ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ, ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ ಇಲ್ಲವಾದರೆ ಅಲ್ಲಿಯೆ ಬಿಡಿ ಎಂದು ಈಗ ನಿಮ್ಮ ಹಕ್ಕುಗಳಿಗೆ ಧಕ್ಕೆ ಬಂದಿದ್ದು ರಾಜ್ಯಸರ್ಕಾರ ಮೀಸಲಾತಿ ಹೆಚ್ಚಳ ವಿಷಯವನ್ನು ಕೇವಲ ಚುನಾವಣೆ ಪ್ರಚಾರದ ಸರಕಾಗಿಸಿದೆ, ಶೋಷಿತ ವರ್ಗಗಳ ಧ್ವನಿ ಕೇಳುತ್ತಿಲ್ಲ, ಇಂತಹ ಜಡ್ಡುಗಟ್ಟಿದ ಸರ್ಕಾರಕ್ಕೆ ಎಚ್ಚರಿಸಲು ಎಲ್ಲರೂ ಸಂಘಟಿತರಾಗಿ ಬೀದಿಗಿಳಿದಾಗ ಮಾತ್ರ ನಿಮಗೆ ನ್ಯಾಯ ಸಿಗುತ್ತದೆ, ಇಲ್ಲವಾದರೆ ಇಲ್ಲ, ಈಗ ಈ ವರ್ಗದ ಜನತೆ ನೀವೆ ತೀರ್ಮಾನಿಸಿ ಬೀದಿಯಲ್ಲಿರುವುದೊ ಅಥವಾ ಮನೆಯಲ್ಲಿ ಇರುವುದೋ ಎಂದು, ಕಾಂಗ್ರೆಸ್ ಸರ್ಕಾರ ಪ.ಜಾತಿ, ಪಂಗಡದ ಜನತೆಯ ಅಭಿವೃದ್ಧಿಗೆ ಹಲವು ಯೋಜನೆ, ಸವಲತ್ತು ನೀಡಿದ್ದು ಬಿಜೆಪಿ ಸರ್ಕಾರ ಅದನ್ನು ಮೊಟಕು ಮಾಡಿ ಶೋಷಣೆ ಮಾಡುತ್ತಿದೆ, ಜನಾಂಗದವರು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ನಿಮ್ಮ ಹಕ್ಕನ್ನು ಪಡೆಯಲು ಹೋರಾಟ ತೀವ್ರಗೊಳಿಸಬೇಕು, ತಾವು ಸೇರಿದಂತೆ ಸಂಸದ ಡಿ.ಕೆ.ಸುರೇಶ್ ನಿಮ್ಮೊಂದಿಗೆ ಇರುತ್ತೇವೆ ಎಂದರು.
ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಶಿವಶಂಕರ್, ಜಿ.ಕೆ.ನಾಗಣ್ಣ, ಕುಮಾರ, ರಾಮು, ದಲಿತ್, ಎಸ್.ಆರ್.ಚಿಕ್ಕಣ್ಣ, ರಾಜುವೆಂಕಟಪ್ಪ ಇತರರು ಮಾತನಾಡಿದರು. ಪ್ರಮುಖರಾದ ದೇವರಾಜು, ಗೋಪಾಲ್, ಶ್ರೀನಿವಾಸ ಇತರರು ಇದ್ದರು. ತಹಶೀಲ್ದಾರ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!