ತಡವಾಗಿ ಬೆಳಕಿಗೆ ಬಂತು ಯುವಕನ ಆತ್ಮಹತ್ಯೆ ಪ್ರಕರಣ

272

Get real time updates directly on you device, subscribe now.

ಕುಣಿಗಲ್: ಅರಣ್ಯ ರಕ್ಷಕನ ಸಮಯ ಪ್ರಜ್ಞೆಯಿಂದಾಗಿ ಆರು ತಿಂಗಳ ಕೆಳಗೆ ನಡೆದ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿ ಹಾಗೂ ಹುಲಿಯೂರು ದುರ್ಗ ರಸ್ತೆಯ ಶನಿಮಹಾತ್ಮ ದೇವಾಲಯದ ಬದಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಪಲ್ಸರ್ ಬೈಕ್ವೊಂದು ನಿಂತಿತ್ತು. ಗಸ್ತು ನಡೆಸುತ್ತಿದ್ದ ಅರಣ್ಯ ರಕ್ಷಕ ಬೈಕ್ ಕಂಡು ಹುಲಿಯೂರು ದುರ್ಗ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಹುಲಿಯೂರು ದುರ್ಗ ಪಿಎಸ್ಐ ಚೇತನ್ ಕುಮಾರ್ ಮತ್ತು ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿ ಬೈಕ್ ನ ದಾಖಲೆ ಪರಿಶೀಲಿಸಿದಾಗ ಸದರಿ ಬೈಕ್, ಆರು ತಿಂಗಳಿಂದ ಕಾಣೆಯಾಗಿರುವ ವ್ಯಕ್ತಿಗೆ ಸೇರಿರುವುದಾಗಿ ಬೆಳಕಿಗೆ ಬಂದಿತು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ವ್ಯಕ್ತಿಯೊಬ್ಬರ ಅಸ್ಥಿಪಂಜರ ದೊರಕಿತ್ತು. ಸದರಿ ಅಸ್ತಿ ಪಂಜರವು, ಕುಣಿಗಲ್ ತಾಲೂಕಿನ ಅರಮನೆ ಹೊನ್ನಮಾಚನಹಳ್ಳಿ ವಾಸಿ ಹಾಲಿ ಬೆಂಗಳೂರು ಹೊಯ್ಸಳ ನಗರದಲ್ಲಿರುವ ಸಂತೋಷ್ (30) ಎಂಬುವರದ್ದು ಎಂದು ತಿಳಿದು ಬಂದಿದೆ.
ಸದರಿ ಸಂತೋಷ್ ತಾಲೂಕಿನ ಕೆಬ್ಬಳ್ಳಿಯ ಶಾಲಿನಿ ಎಂಬಾಕೆಯ ಪ್ರೀತಿಸಿ ಮದುವೆಗೆ ಯತ್ನಿಸಿದ್ದು, ಮನೆಯವರು ಒಪ್ಪದ ಹಿನ್ನೆಲೆಯಲ್ಲಿ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು 2021ರ ನವೆಂಬರ್ನಲ್ಲಿ ಮೃತ ಪಟ್ಟಿದ್ದಳು. ಆಕೆ ಮೃತಪಟ್ಟ ಮರುದಿನದಿಂದ ಸಂತೋಷ್ ನಾಪತ್ತೆಯಾಗಿದ್ದ, ಘಟನೆ ಸಂಬಂಧ ದೂರು ದಾಖಲಾಗಿತ್ತು, ಅರಣ್ಯದಲ್ಲಿ ಅನಾಥ ಬೈಕ್ ಸಮೀಪವೆ ವಿಷದ ಬಾಟಲಿ ಪತ್ತೆಯಾದ ಹಿನ್ನೆಲೆಯಲ್ಲಿ ಸಂತೋಷ್ ಸಹ ಆತ್ಮಹತ್ಯೆಗೆ ಶರಣಾದ ಎನ್ನಲಾಗಿದೆ. ಹುಲಿಯೂರು ದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!