ಮಾವಿನ ಹಣ್ಣಿನ ಬೆಲೆ ಕುಸಿತ- ಕಂಗಾಲಾದ ವರ್ತಕರು

268

Get real time updates directly on you device, subscribe now.

ತುಮಕೂರು: ರೈತರು ಹಾಗೂ ವರ್ತಕರಿಗೆ ಬಹು ನಿರೀಕ್ಷೆಯ ಈ ವರ್ಷದ ಮಾವಿನ ಹಣ್ಣಿನ ವ್ಯಾಪಾರ ಸಂಪೂರ್ಣ ಕುಸಿತ ಕಂಡಿದ್ದು ಮಾವಿನ ಹಣ್ಣಿಗೆ ಬೆಲೆ ಇಲ್ಲದೆ ರೈತರು ಹಾಗೂ ವರ್ತಕರು ಮಾವಿನ ಹಣ್ಣನ್ನು ರಸ್ತೆಗೆ ಸುರಿದು ಆಕ್ರೋಶ ಹೊರ ಹಾಕಿದ ಘಟನೆ ತುಮಕೂರು ನಗರದ ಹೊರ ವಲಯದ ಹೊಸೂರು ಬಳಿ ನಡೆದಿದೆ.

ತುಮಕೂರಿನ ಮಾವಿನ ಹಣ್ಣಿನ ಮಂಡಿ ವರ್ತಕರು ಕರ್ನಾಟಕ ರಾಜ್ಯ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಗೆ ತುಮಕೂರು ಜಿಲ್ಲೆಯಿಂದ ಮಾವಿನ ಹಣ್ಣನ್ನು ಪ್ರತಿವರ್ಷ ರ್ತು ಮಾಡುತ್ತಿದ್ದು, ಈ ಬಾರಿ ಅಕಾಲಿಕ ಮಳೆಯಿಂದಾಗಿ ಹಾಗೂ ಮಾವಿನ ಹಣ್ಣು ಖರೀದಿ ಮಾಡಬೇಕಾದ ಫ್ಯಾಕ್ಟರಿಗಳ ದ್ವಂದ್ವ ನೀತಿಯಿಂದ ಮಾವಿನ ಹಣ್ಣು ವ್ಯಾಪಾರಿಗಳು ವ್ಯಾಪಾರವಿಲ್ಲದೆ ಸಂಪೂರ್ಣ ನಷ್ಟ ಅನುಭವಿಸುತ್ತಿದ್ದಾರೆ, ಆ ಮೂಲಕ ಕೋಟ್ಯಾಂತರ ರೂಪಾಯಿ ಬಂಡವಾಳವಾಗಿ ಹೂಡಿರುವ ವರ್ತಕರು ಸೇರಿದಂತೆ ರೈತರಿಗೂ ಉತ್ತಮ ಬೆಲೆ ಸಿಗುತ್ತಿಲ್ಲ, ಹಾಗಾಗಿ ಸರ್ಕಾರ ಕೂಡಲೇ ರೈತರು ಹಾಗೂ ಮಾವಿನಹಣ್ಣು ವರ್ತಕರ ರಕ್ಷಣೆಗೆ ಮುಂದಾಗಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾವಿನ ಮಂಡಿ ವರ್ತಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಖುದ್ದುಸ್ ಅಹಮದ್ ಮಾತನಾಡಿ, ಅಕಾಲಿಕ ಮಳೆಯಿಂದ ಈ ಬಾರಿ ಮಾವಿನ ಹಣ್ಣಿಗೆ ಬೆಲೆ ಸಿಗುತ್ತಿಲ್ಲ, ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ವ್ಯಾಪಾರ ಮಾಡುತ್ತಿರುವ ವರ್ತಕರು ಸಹ ಈ ಬಾರಿ ನಷ್ಟ ಅನುಭವಿಸುತ್ತಿದ್ದು ಫ್ಯಾಕ್ಟರಿಗಳು ಮಾವಿನ ಹಣ್ಣನ್ನು ಖರೀದಿ ಮಾಡುತ್ತಿಲ್ಲ, ಬಹುತೇಕ ಫ್ಯಾಕ್ಟರಿಗಳು ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಗುಜರಾತ್ ರಾಜ್ಯಗಳಲ್ಲಿ ಇರುವುದರಿಂದ ಖರೀದಿಗೆ ಮುಂದಾಗುತ್ತಿಲ್ಲ, ಮಾವಿನ ಹಣ್ಣಿನ ಬೆಲೆ ಸಂಪೂರ್ಣ ಕುಸಿದಿದೆ, ಹಾಗಾಗಿ ಕೂಡಲೇ ಸರ್ಕಾರ ಮಾವಿನಹಣ್ಣಿನ ರೈತರು ಹಾಗೂ ವರ್ತಕರ ರಕ್ಷಣೆಗೆ ಮುಂದಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಂಡಿ ವರ್ತಕ ಶೌಕತ್ ಆಲಿ ಮಾತನಾಡಿ, ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಾಕಷ್ಟು ಮಾವಿನಹಣ್ಣು ಬರುತ್ತಿದ್ದು ಅದರ ಜೊತೆಯಲ್ಲಿಯೇ ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ ಸೇರಿದಂತೆ ವಿವಿಧ ಭಾಗಗಳಿಂದ ಮಾವಿನಹಣ್ಣು ಬರುತ್ತಿದೆ, ಹಣ್ಣನ್ನು ಖರೀದಿ ಮಾಡಬೇಕಾದ ಫ್ಯಾಕ್ಟರಿಗಳು ಈ ಬಾರಿ ಮಾವಿನ ಹಣ್ಣನ್ನು ಖರೀದಿ ಮಾಡದೆ ಇರುವುದರಿಂದ ಮಾವಿನ ಹಣ್ಣು ವ್ಯಾಪಾರಿಗಳು ಸಂಪೂರ್ಣ ಬೀದಿಗೆ ಬೀಳುವಂತಾಗಿದೆ. ಇನ್ನು ರಾಜ್ಯದ ಮಾವಿನ ಹಣ್ಣಿಗೆ ವಿವಿಧ ರಾಜ್ಯಗಳಲ್ಲಿ ಸಾಕಷ್ಟು ಬೇಡಿಕೆ ಇದ್ದರೂ ಅಕಾಲಿಕ ಮಳೆಯಿಂದ ಈ ಬಾರಿ ಮಾವಿನ ಹಣ್ಣನ್ನು ಖರೀದಿಗೆ ಫ್ಯಾಕ್ಟರಿಗಳು ಮುಂದಾಗುತ್ತಿಲ್ಲ, ಕೂಡಲೇ ರೈತರು ಹಾಗೂ ಮಾವಿನ ಹಣ್ಣು ವ್ಯಾಪಾರಿಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು, ಅಕಾಲಿಕ ಮಳೆಯಿಂದಾಗಿ ಮಾವಿನಹಣ್ಣು ಕೊಳೆಯುವ ಸ್ಥಿತಿಗೆ ಬಂದಿದ್ದು ಅವುಗಳ ಶೇಖರಣೆ ಹಾಗೂ ಅವುಗಳ ರಫ್ತಿಗು ಸಹ ಸಂಪೂರ್ಣ ತೊಂದರೆಯಾಗುತ್ತಿದೆ, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಮತ್ತೋರ್ವ ವರ್ತಕ ಅಬ್ದುಲ್ ಅಜೀಜ್ ಬಾಬು ಮಾತನಾಡಿ, ಏಷ್ಯಾದ ಅತಿದೊಡ್ಡ ಫುಡ್ ಪಾರ್ಕ್ ತುಮಕೂರು ಜಿಲ್ಲೆಯಲ್ಲಿ ಇದೆ, ಆದರೆ ಅದರಿಂದ ವರ್ತಕರಿಗೆ ಯಾವುದೇ ಉಪಯೋಗವಿಲ್ಲ, ಕೇವಲ ಅಲ್ಪ ಪ್ರಮಾಣದ ಮಾವಿನ ಹಣ್ಣನ್ನು ತೆಗೆದುಕೊಂಡು ಹೋಗುತ್ತಾರೆ, ಇದರಿಂದ ಮಾವಿನಹಣ್ಣು ವ್ಯಾಪಾರಿಗಳಿಗೆ ಯಾವುದೇ ಉಪಯೋಗವಿಲ್ಲ , ಇನ್ನು ಅಕಾಲಿಕ ಮಳೆಯಿಂದಾಗಿ ವಿವಿಧ ರಾಜ್ಯಗಳಲ್ಲಿ ತಮ್ಮ ರಾಜ್ಯದಲ್ಲಿಯೇ ಬರುವ ಮಾವಿನ ಹಣ್ಣಿಗೆ ಮೊದಲ ಆದ್ಯತೆ ನೀಡುತ್ತಿದ್ದು ರಾಜ್ಯದ ಹಣ್ಣನ್ನು ಖರೀದಿ ಮಾಡುತ್ತಿಲ್ಲ, ಹೀಗಾಗಿ ಈ ಬಾರಿಯ ಮಾವಿನಹಣ್ಣು ವ್ಯಾಪಾರಿಗಳು ಸಂಪೂರ್ಣ ನಷ್ಟ ಅನುಭವಿಸುವಂತಾಗುತ್ತದೆ, ಪ್ರತಿದಿನ 200 ರಿಂದ 400 ಟನ್ ನಷ್ಟು ಹಣ್ಣು ತುಮಕೂರು ಮಾವಿನ ಮಂಡಿಗೆ ಬರುತ್ತಿದ್ದು ಅವುಗಳನ್ನು ರ್ತು ಮಾಡುವುದು ಬಹುದೊಡ್ಡ ಸಮಸ್ಯೆಯಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾವಿನ ಮಂಡಿ ವರ್ತಕರ ಸಂಘದ ಉಪಾಧ್ಯಕ್ಷ ಚಂದ್ ಪಾಶ, ಎಸ್.ಎಸ್.ಬಾಬು, ಜೆ.ಜೆ.ಜಾವೀದ್, ಚಾಂದ್ ಪಾಷಾ, ಚಾಂದು ಸೇರಿದಂತೆ ಹಲವು ವರ್ತಕರು ಹಾಗೂ ರೈತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!