ಟಿಕಾಯತ್ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

186

Get real time updates directly on you device, subscribe now.

ತುಮಕೂರು: ರೈತ ನಾಯಕ ರಾಕೇಶ್ಸಿಂಗ್ ಟಿಕಾಯತ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಕರ್ನಾಟಕದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ರೈತರ ಕ್ಷಮೆ ಕೇಳಬೇಕು ಹಾಗೂ ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ರೈತರು, ಪ್ರಗತಿಪರ ಚಿಂತಕರು, ಕರವೇ ಕಾರ್ಯಕರ್ತರು ಸಂಯುಕ್ತ ಹೋರಾಟ ಕರ್ನಾಟಕದ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ರೈತರು, ಪ್ರಗತಿಪರ ಚಿಂತಕರು, ದಲಿತ ಸಂಘರ್ಷ ಸಮಿತಿ ಸದಸ್ಯರು, ಮಹಿಳಾ ಹೋರಾಟಗಾರರು, ಕನ್ನಡಪರ ಸಂಘಟನೆಗಳ ಸದಸ್ಯರು ಪಾಲ್ಗೊಂಡು ಸರಕಾರದ ವಿರುದ್ಧ, ಗೃಹಮಂತ್ರಿಗಳ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ನಿನ್ನೆಯ ಘಟನೆ ತಲೆ ತಗ್ಗಿಸುವಂತಹ ವಿಚಾರವಾಗಿದೆ, ಅತಿಥಿ ದೇವೋಭವ ಎಂಬುದು ಕರ್ನಾಟಕದ ಸಂಸ್ಕೃತಿ, ಇದಕ್ಕೆ ವಿರುದ್ಧವೆಂಬಂತೆ ರಾಜ್ಯಕ್ಕೆ ಅತಿಥಿಯಾಗಿ ಬಂದ ರೈತ ನಾಯಕ ರಾಕೇಶ್ ಸಿಂಗ್ ಟಿಕಾಯತ್ ಅವರ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಿರುವುದು ಇಡಿ ರಾಜ್ಯಕ್ಕೆ ಮಾಡಿದ ಅಪಮಾನ, ಇದನ್ನು ಇಡೀ ದೇಶದ ರೈತ ಸಮೂಹ ಉಗ್ರವಾಗಿ ಖಂಡಿಸುತ್ತದೆ, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ಕೂಡಲೇ ಅವರ ಕ್ಷಮೆ ಕೇಳಬೇಕು, ಹಲ್ಲೆ ಮಾಡಿದವರನ್ನು ಬಂಧಿಸಿ, ಉಗ್ರ ಶಿಕ್ಷೆಗೆ ಗುರಿಪಡಿಸಬೇಕು, ಇಂತಹ ಘಟನೆಗಳು ಮರು ಕಳುಹಿಸದಂತೆ ಸರಕಾರ ಎಚ್ಚರಿಕೆ ವಹಿಸಬೇಕು, ರೈತ ನಾಯಕರ ಪ್ರವಾಸದ ವೇಳೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರಕಾರ ರೋಹಿತ್ ಚಕ್ರತಿರ್ಥ ಎಂಬ ಅರೆಬರೆ ತಿಳುವಳಿಕೆ ಉಳ್ಳ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿ ಇಡೀ ಶೈಕ್ಷಣಿಕ ವಲಯವನ್ನೇ ಗೊಂದಲದ ಗೂಡಾಗಿದೆ, ಅಲ್ಲದೆ ಕನ್ನಡಿಗರು ಒಪ್ಪುವ ಕುವೆಂಪು ಅವರ ರಚಿಸಿದ ನಾಡಗೀತೆಗೆ ಅಪಮಾನ ಮಾಡುವ ಮೂಲಕ ಕನ್ನಡನಾಡಿಗೆ ಕಳಂಕ ತಂದಿರುವ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಿ ಆತನ ನೇತೃತ್ವದ ಸಮಿತಿ ವಜಾ ಮಾಡಬೇಕೆಂದು ಗೋವಿಂದರಾಜು ಆಗ್ರಹಿಸಿದರು.
ಪ್ರಗತಿಪರ ಚಿಂತಕ ಡಾ.ಬಸವರಾಜು ಮಾತನಾಡಿ, ರಾಕೇಶ್ಸಿಂಗ್ ಟಿಕಾಯತ್ ರೈತ ವಿರೋಧಿ ಕಾಯ್ದೆಗಳ ವಾಪಸ್ ಗೆ ಆಗ್ರಹಿಸಿ ಒಂದು ವರ್ಷ ಹದಿಮೂರು ದಿನಗಳ ಕಾಲ ನಿರಂತರ ಹೋರಾಟ ರೂಪಿಸಿ ಸರಕಾರದ ಮೇಲೆ ಒತ್ತಡ ತಂದು ಕಾಯ್ದೆ ವಾಪಸ್ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದವರು, ಇಂತಹವರು ತಮ್ಮ ಮೇಲಿದ್ದ ಆರೋಪದ ಬಗ್ಗೆ ಸ್ಪಷ್ಟನೆ ನೀಡಲು ಬಂದ ವೇಳೆ ಪತ್ರಕರ್ತರ ಸೋಗಿನಲ್ಲಿ ನುಸಳಿ ಹಲ್ಲೆ ನಡೆಸಿ ಮಸಿ ಬಳಿದಿರುವುದು ಖಂಡನೀಯ, ಇದು ಇಡೀ ರೈತ ಸಮುದಾಯಕ್ಕೆ ಮಾಡಿದ ಅಪಮಾನ ಎಂದರು.
ಪ್ರತಿಭಟನಾನಿರತರ ಕುರಿತು ಸಾಹಿತಿ ಡಾ.ಜಿ.ವಿ.ಆನಂದಮೂರ್ತಿ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಉದ್ಯಮಿ ತಾಜುದ್ದೀನ್ ಷರೀಫ್, ಡಿಎಸ್ಎಸ್ ನ ಪಿ.ಎನ್.ರಾಮಯ್ಯ, ರಂಗಧಾಮಯ್ಯ, ಎಐಎಂಎಸ್ಎಸ್ನ ಕಲ್ಯಾಣಿ, ಮಂಜುಳ ಗೋನಾಳ, ಎಐಕೆಕೆಎಂಎಸ್ನ ರತ್ನಮ್ಮ, ಪಂಡಿತ್ ಜವಹರ್ ಮಾತನಾಡಿದರು. ರೈತ ಸಂಘದ ರವೀಶ್, ಬಿ.ಉಮೇಶ್, ಅಜ್ಜಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!