ದೇಗುಲ ಪ್ರವೇಶಕ್ಕೆ ದಲಿತರಿಗೆ ನಿಷೇಧ- ಶಾಂತಿ ಸಭೆ

301

Get real time updates directly on you device, subscribe now.

ಕುಣಿಗಲ್: ತಾಲೂಕಿನ ಎಡೆಯೂರು ಹೋಬಳಿಯ ರಾಗಿಹಳ್ಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶಕ್ಕೆ ನಿಷೇಧಿಸಿದ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗ್ರಾಮಸ್ಥರ ಶಾಂತಿ ಸಭೆ ನಡೆಸಿದರು.

ರಾಗಿಹಳ್ಳಿಯಲ್ಲಿ ಆಂಜನೇಯಸ್ವಾಮಿ ದೇವಾಲಯ ನಿರ್ಮಾಣ ಮಾಡಿದ್ದು, ಸದರಿ ದೇವಾಲಯ ಗ್ರಾಮಕ್ಕೆ ಸೇರಿದ್ದಾಗಿದೆ. ಗ್ರಾಮಸ್ಥರು ಎಲ್ಲಾ ಸೇರಿ ದೇವಾಲಯ ನಿರ್ಮಾಣ ಮಾಡಿ, ಇದಕ್ಕೆ ಸಂಬಂಧಿಸಿದಂತೆ ಟ್ರಸ್ಟ್ ಸಹ ರಚನೆ ಮಾಡಿಕೊಂಡಿದ್ದರು, ಆದರೆ ದೇವಾಲಯಕ್ಕೆ ಗ್ರಾಮದ ದಲಿತರು ಬಾರದಂತೆ ಬಂದರೂ ಪೂಜೆಗೆ ಅವಕಾಶ ಕೊಡದಂತೆ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮದ ಹರಿಕೃಷ್ಣ, ನರಸಿಂಹಮೂರ್ತಿ ಇತರರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಶಾಂತಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಕೆಲ ಗ್ರಾಮಸ್ಥರು ದೇವಾಲಯದ ಕಾರ್ಯಕ್ಕೆ ಅವರು ಸಹಕರಿಸದ ಕಾರಣ ನಾವು ಆಕ್ಷೇಪಿಸಿದ್ದೇವೆ ಎಂದರು, ಇದಕ್ಕೆ ಆಕ್ಷೇಪಿಸಿದ ಮತ್ತೊಂದು ಗುಂಪು ಗ್ರಾಮಸ್ಥರು ವಾದ್ಯ ಬಾರಿಸಲು ಹೇಳುತ್ತಾರೆ, ಆದರೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುವುದಿಲ್ಲ ಎಂದು ಆರೋಪಿಸಿ ಅಧಿಕಾರಿಗಳ ಮುಂದೆ ವಾಗ್ವಾದಕ್ಕೆ ಇಳಿದರು, ಎರಡೂ ಕಡೆಯವರನ್ನು ಸಮಾಧಾನ ಪಡಿಸಿದ ತಹಶೀಲ್ದಾರ್ ಮಹಾಬಲೇಶ್ವರ್, ಗ್ರಾಮದಲ್ಲಿ ಸೌಹಾರ್ಧ ವಾತಾವರಣ ಇರಬೇಕು. ಒಂದೆ ಊರಿನವರಾದ ನೀವುಗಳು ಪರಸ್ಪರ ಸಹಕಾರದಿಂದ ಸಹಬಾಳ್ವೆಯಿಂದ ಹೊಂದಾಣಿಕೆಯಿಂದ ಜೀವನ ಮಾಡಬೇಕು. ಕಾನೂನಿನ ಪ್ರಕಾರ ಕ್ರಮ ಕೈಗೊಂಡರೆ ತೊಂದರೆಯಾಗುತ್ತದೆ, ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಅಸ್ಪೃಷ್ಯತೆ ಆಚರಣೆಗೆ ಅವಕಾಶ ನೀಡಬಾರದು. ಹಾಗೇನಾದರೂ ಆದಲ್ಲಿ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ, ಅದಕ್ಕೆ ಅವಕಾಶ ನೀಡದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು. ಸಿಪಿಐ ಅರುಣ ಸೋಲಂಕಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!