ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಿರುವುದು ಖಂಡನೀಯ: ಪರಂ

307

Get real time updates directly on you device, subscribe now.

ತುಮಕೂರು: ನ್ಯಾಯಯುತವಾಗಿ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಸುಳ್ಳು ಆಪಾದನೆ ಮಾಡಿ ಜೈಲಿನಲ್ಲಿ ಹಾಕಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಸರ್ಕಾರದ ನಡೆಗೆ ಆಕ್ರೋಶ ಹೊರಹಾಕಿದರು.

ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ ತಿಪಟೂರಿನಲ್ಲಿ ಸಚಿವ ಬಿ.ಸಿ.ನಾಗೇಶ್ ಮನೆ ಮುಂದೆ ಪ್ರತಿಭಟನೆ ಮಾಡಿ ಜೈಲು ಸೇರಿರುವ ಎನ್.ಎಸ್.ಯು.ಐ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಧೈರ್ಯ ತುಂಬಿ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಿದ್ದು ಪಠ್ಯಪುಸ್ತಕ ವಿವಾದಕ್ಕೆ ಸಂಬಂಧ, ಅದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಲು ಹೋಗಿದ್ದರು, ಬಸವಣ್ಣ, ಕುವೆಂಪು, ಅಂಬೇಡ್ಕರ್ ಹಾಗೂ ನಾರಾಯಣಗುರು ಬಗ್ಗೆ ಪಠ್ಯಪುಸ್ತಕದಲ್ಲಿ ಪರಿಷ್ಕರಣೆ ಮಾಡಿದ್ದು ಕೆಲವು ಪಠ್ಯ ಕೈ ಬಿಟ್ಟಿದ್ದು ಇದಕ್ಕೆ ಸಂಬಂಧಿಸಿದಂತೆ ಪಠ್ಯ ಪುಸ್ತಕದಲ್ಲಿ ಕೆಲವು ವಿಚಾರ ತೆಗೆದು ಅದಕ್ಕೆ ಬೇರೆ ಬೇರೆ ರೂಪ ಕೊಡುವ ಮೂಲಕ ಯಾವುದು ಚರಿತ್ರೆಯಲ್ಲಿ ಉಳಿಯಬೇಕು, ಮುಂದಿನ ಪೀಳಿಗೆಗೆ ತಿಳಿಸಬೇಕು ಅಂತಹ ವಿಷಯಗಳನ್ನು ತಿರುಚಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಅದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ, ನ್ಯಾಯಯುತವಾಗಿ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡುವುದು ನಮ್ಮ ಹಕ್ಕು, ಹಾಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ, ಆದರೆ ಸಚಿವರ ಮನೆಗೆ ನುಗ್ಗಿ ಮನೆಗೆ ಬೆಂಕಿ ಹಚ್ಚಲು ಮನೆಗೆ ಬಂದಿದ್ದಾರೆ ಎಂದು ಸುಳ್ಳು ಆಪಾದನೆ ಮಾಡಿ ಸುಮಾರು 24 ವಿದ್ಯಾರ್ಥಿಗಳನ್ನು ಒಂದು ವಾರದಿಂದ ಜೈಲಿನಲ್ಲಿ ಇಡಲಾಗಿದೆ, ಪಕ್ಷದ ವತಿಯಿಂದ ಕಾನೂನು ಹೋರಾಟ ಮಾಡುತ್ತೇವೆ, ಆದರೆ ವಿದ್ಯಾರ್ಥಿಗಳನ್ನು ಬೇರೆ ಬೇರೆ ಸೆಕ್ಷನ್ ಹಾಕಿ ಆರೋಪ ಮಾಡಿರುವ ಸಂಬಂಧ ನ್ಯಾಯಯುತ ಹೋರಾಟ ಮಾಡುತ್ತೇವೆ ಎಂದರು.
ಇಂತಹ ಸರ್ಕಾರದ ನೀತಿಯನ್ನು ನಾವೆಲ್ಲರೂ ಖಂಡಿಸುತ್ತೇವೆ, ವಿದ್ಯಾರ್ಥಿಗಳ ಮನಸ್ಸನ್ನು ಯಾರು ಕೂಡ ಈ ಮೂಲಕ ಹಾಳು ಮಾಡುವಂತಾಗಬಾರದು, ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂದು ಇಡೀ ಪ್ರಪಂಚಕ್ಕೆ ಗೊತ್ತಿದೆ, ಆದರೆ ಅಂತಹ ವಿಷಯ ತೆಗೆದು ಕೆಲವು ವಿಷಯ ತಿರುಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಜೈಲಿನಲ್ಲಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದೇವೆ, ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ಬೇಲ್ ಸಿಗಲಿದೆ ಎಂದರು.
ಈ ವೇಳೆ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ, ಅಲ್ಪಸಂಖ್ಯಾತರ ಘಟಕದ ಅತಿಕ್ ಅಹಮದ್, ಇಕ್ಬಾಲ್ ಅಹಮದ್, ಮುರಳೀಧರ ಹಾಲಪ್ಪ, ಮರಿ ಚೆನ್ನಮ್ಮ, ಸುಜಾತ, ರೇವಣ್ಣ, ಚಂದ್ರಶೇಖರ್ ಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!