ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 2022- 23ನೇ ಸಾಲಿನಲ್ಲಿ ನಗರದ 12 ಪಾರ್ಕ್ ಗಳ ಅಭಿವೃದ್ಧಿಗೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಮಾರುತಿನಗರ 3ನೇ ಕ್ರಾಸ್ನಲ್ಲಿರುವ ಸಂಜೀವಿನಿ ಉದ್ಯಾನವನದಲ್ಲಿ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಪಾರ್ಕ್ ಗಳ ಅಭಿವೃದ್ಧಿಗೆ ನಾಗರಿಕ ಸಮಿತಿಗಳ ಸಹಕಾರ ಅತಿ ಮುಖ್ಯವಾಗಿದೆ ಎಂದರು.
1.74 ಕೋಟಿ ರೂ. ವೆಚ್ಚದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 12 ಪಾರ್ಕ್ ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೇ ಪಾರ್ಕ್ ಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಕೋವಿಡ್ ಹಿನ್ನಲೆಯಲ್ಲಿ ಯಾರೂ ಟೆಂಡರ್ ಹಾಕದ ಕಾರಣ, ಟೆಂಡರ್ ವಾಪಸ್ ಹೋಗಿತ್ತು. ಮತ್ತೆ ರೀಟೆಂಡರ್ ಆಗಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಮಾರುತಿನಗರದ ಸಂಜೀವಿನಿ ಉದ್ಯಾನವನ ದೊಡ್ಡ ಪಾರ್ಕ್ ಆಗಿರುವುದರಿಂದ 22 ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಸ್ಮಾರ್ಟ್ ಸಿಟಿಯಿಂದ ಸುಮಾರು 30-35 ಕೋಟಿ ರೂ. ಪಾರ್ಕ್ಗಳ ಅಭಿವೃದ್ಧಿಗೆ ಸಿಕ್ಕಿದೆ. ಇದರ ಜೊತೆಗೆ ಟೂಡಾದವರೂ ಸಹ ಕೈಜೋಡಿಸಿ ಪಾರ್ಕ್ ಗಳ ಅಭಿವೃದ್ಧಿಗೆ ಈ ಹಿಂದೆಯೂ 2-3 ಕೋಟಿ ರೂ. ಅನುದಾನ ನೀಡಿದ್ದಾರೆ. ಪ್ರಸ್ತುತ 1.74 ಕೋಟಿ ರೂ. 12 ಪಾರ್ಕ್ಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ, ಮುಂದೆಯೂ ಪಾರ್ಕ್ ಗಳ ಅಭಿವೃದ್ಧಿಗೆ ಟೂಡಾದವರು ಹೆಚ್ಚಿನ ಅನುದಾನ ವಿನಿಯೋಗಿಸಲಿದ್ದಾರೆ ಎಂದರು.
ನಗರದಲ್ಲಿ ಪಾರ್ಕ್ ಗಳ ನಿರ್ವಹಣೆಗೆ ನಾಗರಿಕ ಸಮಿತಿಗಳ ಪಾತ್ರ ಹೆಚ್ಚಿನದಾಗಿದೆ, ತುಮಕೂರಿನಲ್ಲಿರುವ ಸುಮಾರು 70- 80 ರಷ್ಟು ಪಾರ್ಕ್ ಅಭಿವೃದ್ಧಿಗೊಂಡಿವೆ, ಜೊತೆಗೆ ಸರ್ಕಾರ ಕೊಟ್ಟಿರುವ ಹಣ ಪೋಲಾಗದೆ ಉಳಿದಿದೆ ಎಂದರೆ ಅದಕ್ಕೆ ನಾಗರಿಕ ಸಮಿತಿಗಳೇ ಮುಖ್ಯ ಕಾರಣ ಎಂದು ಹೇಳಿದರು.
ಪಾರ್ಕ್ಗಳ ಸಂರಕ್ಷಣೆಗೆ ಟೂಡಾ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿದೆ, ನಾಗರಿಕ ಸಮಿತಿಗಳು, ದೊಡ್ಡ ದೊಡ್ಡ ಫ್ಯಾಕ್ಟರಿಗಳು, ದೊಡ್ಡ ದೊಡ್ಡ ಸಂಸ್ಥೆಗಳು ಪಾರ್ಕ್ ಗಳ ನಿರ್ವಹಣೆಗೆ ಮುಂದೆ ಬಂದರೆ ಅವರಿಗೆ ದತ್ತು ಕೊಡಲಾಗುತ್ತದೆ, ಮಾರುತಿನಗರದ ಸಂಜೀವಿನಿ ಪಾರ್ಕ್ ಅಭಿವೃದ್ಧಿಗೆ ಇಲ್ಲಿನ ಹಿತರಕ್ಷಣಾ ಸಮಿತಿಯೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ, ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ಸೆಕ್ಟರ್ನ ಸಿಎಸ್ಆರ್ ಅನುದಾನ ಪಡೆದು ಮತ್ತಷ್ಟು ಅಭಿವೃದ್ಧಿ ಪಡಿಸಲಿ ಎಂದು ಆಶಿಸಿದರು.
ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್ ಮಾತನಾಡಿ, ಟೂಡಾ ವತಿಯಿಂದ ನಗರದ ವಿವಿಧ ಕಡೆ ಸುಮಾರು 1.74 ಕೋಟಿ ರೂ. ವೆಚ್ಚದಲ್ಲಿ 12 ಪಾರ್ಕ್ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ, ನಗರದ ಶಾಸಕರು ಪಾರ್ಕ್ ಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದು, ನಗರದಲ್ಲಿರುವ ಎಲ್ಲಾ ಪಾರ್ಕ್ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು.
ನಗರದ ಶೆಟ್ಟಿ ಗ್ರಾಮದ ವಾಕ್ ಪಾತ್ ಅಭಿವೃದ್ಧಿ ಕಾಮಗಾರಿಗೆ 7.50 ಲಕ್ಷ, ಮಂಜುನಾಥ ನಗರ ಪಾರ್ಕ್ ಗೆ ಹೆಚ್ಚುವರಿ ವಾಕ್ ಪಾತ್ ಮತ್ತು ಬೆಂಚುಗಳನ್ನು ಅಳವಡಿಸುವ ಕಾಮಗಾರಿಗೆ 8.30 ಲಕ್ಷ, ಸರಸ್ವತಿಪುರಂ ಪಾರ್ಕ್ ಗೆ ಚೈನ್ಲಿಂಕ್ ಫೆನ್ಸಿಂಗ್ ಅಳವಡಿಸುವ ಕಾಮಗಾರಿಗೆ 8.50 ಲಕ್ಷ, ಮಾರುತಿನಗರ ಸಂಜೀವಿನಿ ಪಾರ್ಕ್ ಅಭಿವೃದ್ಧಿಗೆ 21.90 ಲಕ್ಷ, ಮಹಾಲಕ್ಷ್ಮಿ ನಗರ 5ನೇ ಕ್ರಾಸ್ 2ನೇ ಮುಖ್ಯರಸ್ತೆಯಲ್ಲಿರುವ ಪಾರ್ಕ್ ಅಭಿವೃದ್ಧಿಗೆ 11 ಲಕ್ಷ, ಶೆಟ್ಟಿಹಳ್ಳಿ ವಾಣಿಜ್ಯ ತೆರಿಗೆ ಕಚೇರಿ ಹಿಂಭಾಗದ ಕಾಂಕ್ರಿಟ್ ಚರಂಡಿ ಮತ್ತು ರಸ್ತೆ ಅಭಿವೃದ್ಧಿಗೆ 9.40 ಲಕ್ಷ, ಸದಾಶಿವನಗರ ಪಾರ್ಕ್ ಅಭಿವೃದ್ಧಿಗೆ 20.15 ಲಕ್ಷ, ಟೂಡಾ ಕ್ಯಾತ್ಸಂದ್ರ ವಸತಿ ಬಡಾವಣೆಯಲ್ಲಿ ಕೊಳವೆ ಬಾವಿ ಕೊರೆಯುವುದು, ಪಂಪು ಮೋಟಾರ್ ಮತ್ತು ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ 6.70 ಲಕ್ಷ, ಕಸಬಾ ಕುಚ್ಚಂಗಿ ತಿಪ್ಪೂರಮ್ಮ ದೇವಸ್ಥಾನದ ಜೆಲ್ಲಿ ರಸ್ತೆ ಅಭಿವೃದ್ಧಿಗೆ 8.70 ಲಕ್ಷ, ಶೆಟ್ಟಿಹಳ್ಳಿ ಸ್ವತಂರ್ತ್ಯ ಉದ್ಯಾನವನದ ವಾಕ್ಪಾತ್ ಮತ್ತು ಇತರೆ ಕಾಮಗಾರಿ ಅಭಿವೃದ್ಧಿಗೆ 22.30 ಲಕ್ಷ, ಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ. 62/3 ಮತ್ತು 4 ರಲ್ಲಿ ನಿರ್ಮಿಸಲಾಗಿರುವ ಸ್ವತಂತ್ರ ಉದ್ಯಾನವನದ ಫ್ರೀಡಮ್ ವಾಲ್ ಹಗೂ ಇತರೆ ಕಾಮಗಾರಿಗೆ 24.70 ಲಕ್ಷ, ಮತ್ತು ಅಮಾನಿಕೆರೆ ಸರ್ವೆ ನಂಬರ್ 245/4 ಮತ್ತು ಇತರೆ ಸರ್ವೆ ನಂಬರ್ಗಳಲ್ಲಿ ಅಭಿವೃದ್ಧಿ ಪಡಿಸಿರುವ ಬಡಾವಣೆಯಲ್ಲಿರುವ ಸಿಎ ನಿವೇಶನದಲ್ಲಿ ಹೊರಾಂಗಣ ಟೆನಿಸ್ ಕೋರ್ಟ್ ಅಭಿವೃದ್ಧಿ ಕಾಮಗಾರಿಗೆ 24.95 ಲಕ್ಷ ಸೇರಿ 174.10 ಲಕ್ಷ ರೂ. ಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಟೂಡಾ ಸದಸ್ಯರಾದ ಜೆ.ಜಗದೀಶ್, ಹನುಮಂತಪ್ಪ, ವೀಣಾ ಶಿವಕುಮಾರ್, ಪ್ರತಾಪ್, ಶಿವಕುಮಾರ್, ಟೂಡಾ ಆಯುಕ್ತ ಯೋಗಾನಂದ್, ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್, ವಿಷ್ಣುವರ್ಧನ, ಮುಖಂಡರಾದ ಬಿ.ಬಿ.ಮಹದೇವಯ್ಯ, ರುದ್ರೇಶ್, ಚಂದನ್, ಆಡಿಟರ್ ಚಂದ್ರಶೇಖರ್, ಹರೀಶ್, ಜಗಜ್ಯೋತಿ ಸಿದ್ದರಾಮಣ್ಣ ಸೇರಿದಂತೆ ಮಾರುತಿನಗರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಬಡಾವಣೆಯ ನಾಗರಿಕರು ಭಾಗವಹಿಸಿದ್ದರು.
ಪಾರ್ಕ್ ಗಳ ಅಭಿವೃದ್ಧಿಗೆ ನಾಗರಿಕ ಸಹಕಾರ ಅಗತ್ಯ
1.74 ಕೋಟಿ ರೂ. ವೆಚ್ಚದಲ್ಲಿ 12 ಪಾರ್ಕ್ ಅಭಿವೃದ್ಧಿ: ಜ್ಯೋತಿಗಣೇಶ್
Get real time updates directly on you device, subscribe now.
Prev Post
Next Post
Comments are closed.