ಆರ್.ಎಸ್.ಎಸ್ ಬಗ್ಗೆ ಸಿದ್ದು ಹೇಳಿಕೆಗೆ ಖಂಡನೆ

ಬಿಜೆಪಿ ಎಸ್ಸಿ ಮೋರ್ಚಾದಿಂದ ಚಡ್ಡಿ ರವಾನಿಸುವ ಪ್ರತಿಭಟನೆ

279

Get real time updates directly on you device, subscribe now.

ತುಮಕೂರು: ರಾಜ್ಯದಾದ್ಯಂತ ಆರ್.ಎಸ್.ಎಸ್ ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಓಂಕಾರ್ ನೇತೃತ್ವದಲ್ಲಿ ಚಡ್ಡಿ ರವಾನಿಸುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನಗರದ ಟೌನ್ ಹಾಲ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಬಿಜೆಪಿ ಹಿರಿಯ, ಕಿರಿಯ ಮುಖಂಡರು ಹಾಗೂ ಎಸ್.ಸಿ ಮೋರ್ಚಾದ ಪದಾಧಿಕಾರಿಗಳು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಓಂಕಾರ್ ಮಾತನಾಡಿ, ಬಿಜೆಪಿಗೆ ಆರ್.ಎಸ್.ಎಸ್ ಮಾತೃ ಸಮಾನ, ನನ್ನಂತಹ ಲಕ್ಷಾಂತರ ಜನರನ್ನು ಬೆಳೆಸಿ ಪಕ್ಷದಲ್ಲಿ ಹಲವು ಹುದ್ದೆಗಳನ್ನು ನೀಡಿದೆ, ಇದರ ಅರಿವಿಲ್ಲದ ಸಿದ್ದರಾಮಯ್ಯ ಆರ್.ಎಸ್.ಎಸ್.ನಲ್ಲಿ ದಲಿತರನ್ನು ಕೀಳಾಗಿ ಕಾಣಲಾಗುತ್ತಿದೆ, ನಿಮ್ಮ ಯೋಗ್ಯತೆ ಇಷ್ಟೇ ಎಂದು ಚಡ್ಡಿ ರವಾನೆ ಆಂದೋಲನದ ನೇತೃತ್ವ ವಹಿಸಿರುವ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದರು.
ಸಿದ್ದರಾಮಯ್ಯ ಅವರು ತಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಂರನ್ನು ಓಲೈಸಿ ದಲಿತರು, ಹಿಂದುಳಿದವರನ್ನು ಹೀನಾಯವಾಗಿ ಕಾಣುತ್ತಿದ್ದಾರೆ, ಇದು ತರವಲ್ಲ, ನೀವು ಮುಸ್ಲಿಂರನ್ನು ಓಲೈಸುವ ಕೆಲಸ ಮುಂದುವರೆಸಿ, ಆದರೆ ಆರ್.ಎಸ್.ಎಸ್ ತಂಟೆಗೆ ಬರಬೇಡಿ, ಇದೇ ಚಾಳಿ ಮುಂದುವರೆಸಿದರೆ ನಿಮಗೆ ಕಂಡಲ್ಲಿ ಘೇರಾವ್ ಹಾಕುವ ಪ್ರತಿಭಟನೆಯನ್ನು ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಡಿ.ಭೈರಪ್ಪ ಮಾತನಾಡಿ, ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿ ಫಲಾನುಭವಿಗಳಾಗಿರುವ ಲಕ್ಷಾಂತರ ಜನರು ನಮ್ಮ ಸಮಾವೇಶಗಳಲ್ಲಿ ಸೇರುತ್ತಿರುವುದನ್ನು ನೋಡಿ ಸಿದ್ದರಾಮಯ್ಯ ಅವರಿಗೆ ಸಹಿಸಲಾಗದೆ ಈ ರೀತಿಯ ಅಸಂಬದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷದ ಸ್ಥಿತಿ ಏನು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಿ, ಕಳೆದ 10 ವರ್ಷದ ಹಿಂದೆ ಹುಟ್ಟಿದ ಪಕ್ಷವೂ 2 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ, 138 ವರ್ಷದ ಪಕ್ಷವಾಗಿರುವ ಕಾಂಗ್ರೆಸ್ ಸಹ 2 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ, ನಿಮ್ಮ ಹೇಳಿಕೆಗಳು ಹೀಗೆಯೇ ಮುಂದುವರೆದರೆ ಗಾಂಧಿ ಕಂಡ ಕಾಂಗ್ರೆಸ್ ಮುಕ್ತ ಭಾರತಕ್ಕೆ ನೀವೆ ನಾಂದಿ ಹಾಡಿದಂತಾಗುತ್ತದೆ ಎಂದರು.
ಬಿಜೆಪಿ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಲ್ಲಿ ಬಿಜೆಪಿಯ ಜನಪರತೆ ನೋಡಿ ಸಿದ್ದರಾಮಯ್ಯ ಅವರ ಮಾತಿನ ದಾಟಿ ಮತ್ತು ಕಾರ್ಯವೈಖರಿ ಬದಲಾಗಿದೆ, ನೀವು ಅಧಿಕಾರಕ್ಕಾಗಿ ಏನು ಮಾಡಲು ಹೇಸುವವರಲ್ಲ, ರಾಜಕೀಯ ಜೀವನ ನೀಡಿದ ಜೆಡಿಎಸ್ಗೆ ದ್ರೋಹ ಬಗೆದು ಕಾಂಗ್ರೆಸ್ನಲ್ಲಿ ಸಿಎಂ ಆಗಿ ಈಗ ಅಲ್ಲಿಯೂ ಡಿಕೆಶಿ, ಡಾ.ಜಿ.ಪರಮೇಶ್ವರ್ ಅಂತಹವರಿಗೆ ದ್ರೋಹ ಬಗೆಯಲು ಹೊರಟಿದ್ದೀರಿ, ಅಧಿಕಾರಕ್ಕಾಗಿ ಎಂತಹ ಕೆಳಮಟ್ಟಕ್ಕೂ ಇಳಿಯಲು ಸಿದ್ಧ ಎಂಬುದನ್ನು ನಿಮ್ಮ ರಾಜಕೀಯ ನಡೆಗಳೇ ಹೇಳುತ್ತವೆ, ವಿಧಾನಸಭೆಯಲ್ಲಿ ಮಾತನಾಡುವಾಗ ನಿಮ್ಮ ಪಂಚೆ ಉದುರಿದಾಗ, ನಿಮ್ಮ ಮಾನ ಕಾಪಾಡಿದ್ದು ಇದೇ ಚಡ್ಡಿ, ಅಂತಹ ಚಡ್ಡಿಯ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಬಿ.ನಂದೀಶ್, ಪಿ.ಲೋಕೇಶ್, ನರಸಿಂಹಮೂರ್ತಿ, ವೈ.ಹೆಚ್.ಹುಚ್ಚಯ್ಯ, ರಮೇಶ್, ಹೆಚ್.ಎನ್.ಚಂದ್ರಶೇಖರ್, ಕೆ.ಪಿ.ಮಹೇಶ್, ವರದಯ್ಯ, ಹನುಮಂತರಾಜು, ಆಟೋ ಯಡಿಯೂರಪ್ಪ, ಶಬ್ಬೀರ್, ಗಣೇಶ್.ಜಿ. ಪ್ರಸಾದ್, ಎಂ.ಗೋಪಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!