ತಿಪಟೂರಿನಲ್ಲಿ ಕಲ್ಪೋತ್ಸವ ನಾಡಹಬ್ಬ ನ.26ಕ್ಕೆ

228

Get real time updates directly on you device, subscribe now.


ತುಮಕೂರು: ತಿಪಟೂರು ಸಂಘ ಸಂಸ್ಥೆಗಳ ಒಕ್ಕೂಟ ಹಾಗೂ ಕಲ್ಪತರು ನಾಡಹಬ್ಬ ಕಲ್ಪೋತ್ಸವ ಆಚರಣಾ ಸಮಿತಿ ವತಿಯಿಂದ ನ.26 ರಂದು ಸಂಜೆ 6.30 ಗಂಟೆಗೆ ತಿಪಟೂರಿನ ಕೆ.ಆರ್.ಬಡಾವಣೆಯ ಬಯಲು ರಂಗ ಮಂದಿರದಲ್ಲಿ ಕಲ್ಪೋತ್ಸವ ನಾಡಹಬ್ಬ-2022, ಕಲ್ಪತರು ರತ್ನ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ, ಹಾಸ್ಯಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ತಿಪಟೂರು ಕೃಷ್ಣ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರ ದೇಶಿ ಕೇಂದ್ರ ಸ್ವಾಮೀಜಿ, ಬಳ್ಳೆಕಟ್ಟೆ- ಶಿಡ್ಲೆಹಳ್ಳಿ ಸಂಸ್ಥಾನ ಮಠಾಧ್ಯಕ್ಷ ಹಿಮ್ಮಡಿ ಕರಿಬಸವೇಶ್ವರ ದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಹಿಸುವರು ಎಂದರು.
ಮಾಜಿ ಶಾಸಕ ಕೆ. ಷಡಕ್ಷರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಿಪಟೂರಿನ ಕುಮಾರ್ ಆಸ್ಪತ್ರೆಯ ವೈದ್ಯ ಡಾ. ಜಿ.ಎಸ್.ಶ್ರೀಧರ್ ಅವರಿಗೆ ಕಲ್ಪತರು ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್, ಬೆಂಗಳೂರಿನ ಹೆಸರಾಂತ ವೈದ್ಯ ಡಾ.ಆಂಜನಪ್ಪ, ಮಾಜಿ ಶಾಸಕ ಬಿ. ನಂಜಾಮರಿ, ನಿವೃತ್ತ ಎಸಿಪಿ ಲೋಕೇಶ್ವರ್, ಕಲ್ಪೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಬಿ. ಎಸ್. ಶಿವಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ನಗರಸಭೆ ಅಧ್ಯಕ್ಷ ರಾಮಮೋಹನ್ ಜನಾರ್ಧನ್, ಉಪಾಧ್ಯಕ್ಷ ಸೊಪ್ಪು ಗಣೇಶ್, ಸಮಾಜ ಸೇವಕ ಕೆ.ಟಿ.ಶಾಂತಕುಮಾರ್, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ಇವರು ಸಾಧಕರನ್ನು ಸನ್ಮಾನಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪುಟ್ಟಸ್ವಾಮಿ, ಬಸವರಾಜು, ಸ್ವರ್ಣಗೌರಿ ಇವರನ್ನು ಸನ್ಮಾನಿಸುವರು ಎಂದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹಾಸ್ಯ ಸಂಜೆ, ನೃತ್ಯ ಸಂಜೆ, ಕಲರ್ಸ್ ಕನ್ನಡ, ಝೀ ಕನ್ನಡ ವಾಹಿನಿಗಳ ಮಜಾಭಾರತ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಕಿರುತೆರೆ ಕಲಾವಿದರಾದ ಜಗಣ್ಣ, ಕಾರ್ತಿಕ್ ಹುಲಿ, ಮಾನಸ ಹಾಗೂ ಡ್ಯಾನ್ಸ್ ಕರ್ನಾಟಕ ತಂಡದಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಿಶೇಷ ಆಹ್ವಾನಿತರಾಗಿ ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗಮಿಸುವರು ಎಂದ ಅವರು ಮುಂದಿನ ವರ್ಷದಿಂದ ಒಂದು ವಾರ ಕಾಲ ಕಲ್ಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ವಿವಿಧ ಕ್ಷೇತ್ರಗಳ 10 ಮಂದಿ ಸಾಧಕರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಹಾಗೂ ಒಬ್ಬರಿಗೆ ರಾಜ್ಯ ಪ್ರಶಸ್ತಿ ನೀಡಲು ಉದ್ದೇಶಿಸಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಿಪಟೂರು ತಾಲೂಕು ಕಸಾಪ ಅಧ್ಯಕ್ಷ ಬಸವರಾಜು, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿಜಯಕುಮಾರ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಎಸ್.ಎಸ್.ಗಂಗಾಧರ್, ಪತ್ರಕರ್ತ ಶಿವರಾಜ್ ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!