ತುರುವೇಕೆರೆ: ಅಕ್ಷರ, ಅನ್ನ, ಆರೋಗ್ಯ ಸಮಾಜದ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭೆ ಸದಸ್ಯ ಡಾ. ವಿರೇಂದ್ರ ಹೆಗ್ಗಡೆಯವರ ಸೇವೆ ಅನನ್ಯವಾದುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಿ.ಪಿ. ರಾಜು ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ನಡೆದ ಡಾ. ವೀರೇಂದ್ರ ಹೆಗ್ಗಡೆಯವರ 75ನೇ ಜನ್ಮ ದಿನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧಿ ಕನಸಿನ ರಾಮರಾಜ್ಯ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯೋನ್ಮುಖವಾಗಿರುವುದು ಶ್ಲಾಘನೀಯ ಸಂಗತಿ. ಧಾರ್ಮಿಕ, ಕೃಷಿ, ಆರ್ಥಿಕ ಹೀಗೆ ಎಲ್ಲಾ ಕ್ಷೇತ್ರಗಳನ್ನು ಗ್ರಾಮೀಣ ಜನತೆಗೆ ಪರಿಚಯಿಸುವ ಮೂಲಕ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳದ ಕೊಡುಗೆ ಅಪಾರವಾದುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಸಮಾಜ ಸೇವಕ ಅಮಾನಿಕೆರೆ ಮಂಜುನಾಥ್ ಮಾತನಾಡಿ, ಗ್ರಾಮೀಣ ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜದ ಒಳಿತಿಗೆ ಸದಾ ಚಿಂತಿಸುವ ಡಾ. ವೀರೇಂದ್ರ ಹೆಗ್ಗಡೆಯವರಿಗೆ ರಾಜ್ಯಸಭಾ ಸ್ಥಾನ ನೀಡಿ ಕೇಂದ್ರ ಗೌರವಿಸಿದೆ. ತುಮಕೂರು ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಡಾ. ವೀರೇಂದ್ರ ಹೆಗ್ಗಡೆ ಅನುಗ್ರಹ ಸಮಾಜದ ಎಲ್ಲರ ಮೇಲಿರಲಿ ಎಂದರು.
ವಾತ್ಸಲ್ಯ ಯೋಜನೆಯಡಿ 5 ಮಂದಿ ವೃದ್ಧೆಯರಿಗೆ ಹೊದಿಕೆ ವಿತರಿಸಲಾಯಿತು. ಪೌರಕಾರ್ಮಿಕ ಯೋಗೀಶ್, ಬೆಸ್ಕಾಂನ ರಂಗನಾಥ್, ಅಂಚೆ ಕಚೇರಿ ಸಿಬ್ಬಂದಿ ಲತಾ ಅವರನ್ನು ಗೌರವಿಸಲಾಯಿತು.
ತಾಲೂಕು ಯೋಜನಾಧಿಕಾರಿ ಯಶೋಧರ, ತಾಪಂ ಮಾಜಿ ಉಪಾಧ್ಯಕ್ಷ ಪುರ ನಂಜೇಗೌಡ, ತಂಡಗ ಚಂದ್ರಕೀರ್ತಿ, ಶ್ರೀಕಾಂತರಾಜೇ ಅರಸ್, ದೇವಿಕಾ, ವಾತ್ಸಲ್ಯ, ಸದಸ್ಯರು, ಸೇವಾ ಪ್ರತಿನಿಧಿಗಳಾದ ಹೇಮಾ, ಉಮಾ ಇತರರು ಇದ್ದರು.
Comments are closed.