ಶಿರಾ: ಹನುಮದ್ ವ್ರತದ ಅಂಗವಾಗಿ ಸೋಮವಾರ ಶಿರಾ ನಗರದ ವಿವಿಧ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ರಾಮ- ಹನುಮ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ನಗರದ ಪ್ರಖ್ಯಾತ ಸಾಕ್ಷಿ ಆಂಜನೇಯ ದೇವಾಲಯದಲ್ಲಿ ಬೆಳಗಿನಿಂದಲೇ ಅಭಿಷೇಕ. ಅರ್ಚನೆ ಮೊದಲಾದ ಧಾರ್ಮಿಕ ಆಚರಣೆ ನಂತರ ಬಗೆ ಬಗೆಯ ಹೂ ಮತ್ತು ಹರಕೆಯ ವಡೆ ಹಾರದಿಂದ ಅಲಂಕೃತಗೊಂಡ ಆಂಜನೇಯನನ್ನು ಸಾವಿರಾರು ಭಕ್ತರು ಕಣ್ ತುಂಬಿಕೊಂಡರು. ನಂತರ ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಮಧುಗಿರಿ ರಸ್ತೆಯ ಕರೆಗುಂಡಿ ಆಂಜನೇಯ ಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜೆ ನಡೆಸಲಾಗಿದೆ. ಕೋಟೆ ಬಡಾವಣೆಯ ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಹೂವಿನಿಂದ ಅಲಂಕೃತಗೊಂಡ ಆಂಜನೇಯ ಸ್ವಾಮಿ ಭಕ್ತರ ಕಣ್ ಮನಸ್ಸು ತಣಿಸುವಲ್ಲಿ ಯಶಸ್ವಿಯಾಯಿತು. ನೂರಾರು ವರ್ಷಗಳ ಇತಿಹಾಸ ಇರುವ ನಗರದ ಮಧ್ಯದಲ್ಲಿನ ಶಹರ್ಗಂಜ್ ಆಂಜನೇಯ ಸ್ವಾಮಿಗೂ ವಿಶೇಷ ಪೂಜೆ, ಅಲಂಕಾರ ಮಾಡಲಾಗಿದ್ದು, ಭಕ್ತರ ಮನ ಸೂರೆಗೊಂಡಿತು.
ಇಲ್ಲಿನ ಜ್ಯೋತಿನಗರದ ಪಂಚಮುಖಿ ಆಂಜನೇಯ ದೇವಾಲಯದಲ್ಲಿ ಸಹಾ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಶ್ರೀನಾರಾಯಣ ಸ್ವಾಮಿ ದೇವಾಲಯದಲ್ಲಿನ ವ್ಯಾಸರಾಯರು ಪ್ರತಿಷ್ಠಾಪಿಸಿರುವ ಆಂಜನೇಯ, ಭವಾನಿ ದೇವಾಲಯದ ಆವರಣದಲ್ಲಿನ ವೀರಾಂಜನೇಯ, ರಾಘವೇಂದ್ರ ಸ್ವಾಮಿ ಮಠದಲ್ಲಿರುವ ಮುಖ್ಯ ಪ್ರಾಣದೇವರು, ಸಂತೇಪೇಟೆ ಮಾರುತಿ ನಗರದ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯ, ನಾಯಕರಹಟ್ಟಿ ಆಂಜನೇಯ ಸ್ವಾಮಿ ದೇವಾಲಯ, ಖಾಸಗಿ ಬಸ್ನಿಲ್ದಾಣದಲ್ಲಿನ ಅಭಯ ಆಂಜನೇಯ, ಬನ್ನಿನಗರ ಉದ್ಯಾನ ವನದಲ್ಲಿನ ಅಭಯಾಂಜನೇಯ, ಐತಿಹಾಸಿಕ ಪ್ರಸಿದ್ಧ ಗವಿ ಆಂಜನೇಯ ಸ್ವಾಮಿ ದೇವಾಲಯ, ಮಾನಂಗಿ ಹೈವೇ ಬಳಿಯ ಬಯಲು ಆಂಜನೇಯ, ಪೊಲೀಸ್ ವಸತಿ ಸಮುಚ್ಛಯದಲ್ಲಿನ ಹನುಮ ಮಂದಿರದಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ಎಲ್ಲೆಡೆ ಅಲಂಕೃತಗೊಂಡ ದೇವರ ವಿಗ್ರಹಗಳು ನೋಡುಗರ ಮನಸ್ಸೆಳೆದುವು. ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು.
Comments are closed.