ಜಿಟಿಜಿಟಿ ಮಳೆಯಿಂದ ವಾಹನ ಸವಾರರ ಪರದಾಟ

164

Get real time updates directly on you device, subscribe now.


ತುಮಕೂರು: ಮಾಂಡೋಸ್ ಚಂಡ ಮಾರುತದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಕಲ್ಪತರು ನಾಡಿನಲ್ಲೂ ಶೀತ ಸಹಿತ ಜಿಟಿಜಿಟಿ ಮಳೆಯಾಗುತ್ತಿದ್ದು, ಜನ ಸಾಮಾನ್ಯರು ಚಳಿ, ಶೀತಗಾಳಿ, ಮಳೆಯಿಂದ ಹೈರಾಣಾಗಿದ್ದಾರೆ.
ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ಆಗುತ್ತಿರುವುದರಿಂದ ಎಂದಿನಂತೆ ಕೆಲಸ ಕಾರ್ಯಗಳಿಗೆ ತೆರಳಲು ಜನ ಸಾಮಾನ್ಯರಿಗೆ ಸಾಧ್ಯವಾಗದೆ ಮಳೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ.

ಶಾಲಾ, ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ವೆಟರ್, ಜರ್ಕಿನ್ ಮೊರೆ ಹೋಗಿದ್ದು, ಛತ್ರಿಗಳನ್ನು ಹಿಡಿದು ಶಾಲಾ- ಕಾಲೇಜುಗಳಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂದವು.

ಎರಡನೇ ಶನಿವಾರ ಆಗಿರುವುದರಿಂದ ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳಿಗೆ ರಜೆ ಇತ್ತು. ಹಾಗಾಗಿ ಸರ್ಕಾರಿ ನೌಕರರು ಶೀತ ಸಹಿತ ಮಳೆಯಿಂದ ಪಾರಾಗಿದ್ದಾರೆ. ಆದರೆ ಖಾಸಗಿ ಸಂಸ್ಥೆಗಳ ನೌಕರರು, ದಿನಗೂಲಿ ನೌಕರರು, ಕೂಲಿ ಕಾರ್ಮಿಕರು ಎಂದಿನಂತೆ ತಮ್ಮ ಕಚೇರಿಗಳಿಗೆ ಕೆಲಸ ಕಾರ್ಯಗಳಿಗೆ ಜಿಟಿಜಿಟಿ ಮಳೆಯಲ್ಲೆ ನೆನೆಯುತ್ತಾ ದ್ವಿಚಕ್ರ ವಾಹನಗಳಲ್ಲಿ ತೆರಳಿದರು.

ಚಳಿ ಸಹಿಸಿಕೊಂಡೇ ಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ವಯಸ್ಸಾದಂತಹವರು, ಮಕ್ಕಳು, ಮಹಿಳೆಯರು ಮಳೆ ಚಳಿಯಿಂದಾಗಿ ಮನೆಯಿಂದ ಹೊರಗೆ ಬರಲಾಗದೆ ಮನೆಯಲ್ಲಿ ಹೊದಿಕೆಗಳ ಮೊರೆ ಹೋಗಿರುವುದು ಸಹ ಕಂಡು ಬಂದಿದೆ.
ಇನ್ನು ಎರಡು- ಮೂರು ದಿನಗಳ ಕಾಲ ಶೀತ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಜನತೆ ಸ್ವೆಟರ್, ಜರ್ಕಿನ್ಗಳ ಮೊರೆ ಹೋಗಿದ್ದು, ಮಳೆಯಿಂದ ಸೇಫ್ಟಿಯಾಗಿರಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ಬೀದಿ ಬದಿ ವ್ಯಾಪಾರಿಗಳು ಜನರಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ.

Get real time updates directly on you device, subscribe now.

Comments are closed.

error: Content is protected !!