ತುಮಕೂರು: ಡಿಸೆಂಬರ್ 15 ಮತ್ತು 16 ರಂದು ತುಮಕೂರು ನಗರದ ಗಾಜಿನಮನೆಯಲ್ಲಿ ನಡೆಯಲಿರುವ ತುಮಕೂರು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳನ್ನು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕ ಜಿ.ಬಿ.ಜೋತಿಗಣೇಶ್, ಕಾರ್ಯದರ್ಶಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್, ಎಸ್.ಪಿ.ಚಿದಾನಂದ್, ಟೂಡಾ ಆಯುಕ್ತ ಗೋಪಾಲ್ ಜಾಧವ್, ಸ್ಮಾರ್ಟ್ಸಿಟಿ ಉಪ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೋಮಪ್ಪ ಕಡಕೋಳ್ ಸೇರಿದಂತೆ ಮುಖಂಡರೊಂದಿಗೆ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್, ತುಮಕೂರು ನಗರದಲ್ಲಿ 14ನೇ ಜಿಲ್ಲಾ ಕಸಾಪ ಸಮ್ಮೇಳನ ನಡೆಯುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ. ನಮ್ಮೆಲ್ಲರ ಹಿರಿಯ ಸಾಹಿತಿಗಳು ಸೇರಿ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಎಂ.ವಿ.ನಾಗರಾಜ್ರಾವ್ ಅವರನ್ನು ಆಯ್ಕೆ ಮಾಡಿದ್ದು, ಜಿಲ್ಲಾ ಕಸಾಪ ಅಧ್ಯಕ್ಷರ ಎಲ್ಲಾ ಬಳಗ ಸಮ್ಮೇಳನ ಯಶಸ್ಸಿಗೆ ಟೊಂಕ ಕಟ್ಟಿ ನಿಂತಿದೆ. ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳಲ್ಲದವರು, ಕಸಾಪ ಪದಾಧಿಕಾರಿಗಳು ಸಹ ಇದರೊಂದಿಗೆ ತೊಡಗಿಸಿಕೊಂಡಿರುವುದು ಸಂತೋಷದ ವಿಚಾರವಾಗಿದೆ. ಸಮಾಜ ಸೇವಕರು ಹಾಗೂ ನಾಗರಿಕರು ಇವರೊಂದಿಗೆ ಕೈಜೋಡಿಸಿ, ಕಸಾಪ ಸಮ್ಮೇಳನ ಯಶಸ್ವಿಗೊಳಿಸೋಣ ಎಂದು ಕರೆ ನಿಡಿದರು.
ಸಮ್ಮೇಳನದ ಸಿದ್ಧತೆ ಕುರಿತು ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಕೆ.ಎಸ್.ಸಿದ್ದಲಿಂಗಪ್ಪ, 14ನೇ ಕಸಾಪ ಜಿಲ್ಲಾ ಸಮ್ಮೇಳನಕ್ಕೆ 4000 ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಬರುವ ನಿರೀಕ್ಷೆ ಇದೆ. ಇದರಲ್ಲಿ 200 ಜನ ವಿವಿಐಪಿ, 300 ಜನ ವಿಐಪಿ, 1500 ಜನರು ಸ್ವಯಂ ಸೇವಕರ ಜೊತೆಗೆ 2000ಕ್ಕೂ ಹೆಚ್ಚು ಪ್ರತಿನಿಧಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲರಿಗೂ ಬ್ಯಾಡ್ಜ್ ವ್ಯವಸ್ಥೆ ಮಾಡಲಾಗಿದೆ. ಬರುವವರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಇದೆ. ಮೊದಲು ಬ್ಯಾಡ್ಜ್ ಧರಿಸಿದವರಿಗೆ ಊಟದ ವ್ಯವಸ್ಥೆ ಮಾಡಿ ನಂತರದಲ್ಲಿ ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸುವುದರ ಜೊತೆಗೆ ನಗರದಲ್ಲಿ ನಡೆಯುತ್ತಿರುವ ದೊಡ್ಡ ಅಕ್ಷರ ಜಾತ್ರೆ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
Comments are closed.