ತುಮಕೂರು: ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ ಸಲುವಾಗಿ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಅಕೌಂಟ್ ಯೋಜನೆಯಡಿ ದೇಶದ ಯಾವುದೇ ನೋಂದಾಯಿತ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು.
ಆರೋಗ್ಯ ಇಲಾಖೆ ವತಿಯಿಂದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಆಭಾ ಕಾರ್ಡ್ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದೇಶಾದ್ಯಂತ ನೋಂದಾಯಿತ ಆಸ್ಪತ್ರೆಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಬಿಪಿಎಲ್ ಕಾರ್ಡ್ದಾರರು ಈ ಸೌಲಭ್ಯ ಪಡೆದುಕೊಳ್ಳಬಹುದು. ರೋಗಿಯ ಸಂಪೂರ್ಣ ಚಿಕಿತ್ಸಾ ವಿವರಗಳು ಆಭಾ ನಂಬರ್ನಿಂದ ತಿಳಿದುಬರಲಿದೆ ಎಂದರು.
ಬಿಪಿಎಲ್ ಕಾರ್ಡ್ದಾರರಿಗೆ 5 ಲಕ್ಷದ ವರೆಗೆ ಉಚಿತ ಸೇವೆ ಮತ್ತು ಎಪಿಎಲ್ ಕಾರ್ಡ್ದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ 30 ರಷ್ಟು ರಿಯಾಯಿತಿ ಮೂಲಕ ಒಟ್ಟು ವಾರ್ಷಿಕ 1.5 ಲಕ್ಷದ ವರೆಗೆ ಚಿಕಿತ್ಸೆ ನೀಡಲಿದ್ದು, ಆಧಾರ್ ಕಾರ್ಡ್ ಪ್ರತಿ, ಆಧಾರ್ಗೆ ನೋಂದಣಿಯಾಗಿರುವ ನಂಬರಿನ ಮೊಬೈಲ್ ಅಥವಾ ಬಯೋಮೆಟ್ರಿಕ್ ಮುಖಾಂತರ ಅಥವಾ ರೇಷನ್ ಕಾರ್ಡ್ ಮುಖಾಂತರ ನೋಂದಣಿ ಮಾಡಲಾಗುವುದು ಎಂದು ವಿವರಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ವೀಣಾ ಮಾತನಾಡಿ, ಆಭಾ ನೋಂದಣಿಯನ್ನು ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಹ ಪತ್ರಕರ್ತರು ಮಾಡಿಸಿಕೊಳ್ಳಬಹುದು. ಸರ್ಕಾರದ ಮಟ್ಟದಲ್ಲಿ ಆರೋಗ್ಯ ಸೌಲಭ್ಯ ಇದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆೆ ಪಡೆಯಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲದಿದ್ದಲ್ಲಿ ರೋಗಿ ಬಯಸಿದ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜಿಲ್ಲಾಸ್ಪತ್ರೆ ಅಥವಾ ತಾಲ್ಲೂಕು ಆಸ್ಪತ್ರೆಗಳಿಂದ ರೆಫರ್ ಮಾಡಲಾಗುವುದು. ಆದರೆ ತುರ್ತು ಸಂದರ್ಭಗಳಲ್ಲಿ ಎಲ್ಲಾ ಆಸ್ಪತ್ರೆಗಳು ರೆಫರೆನ್ಸ್ ಪತ್ರವಿಲ್ಲದೆ ರೋಗಿಯನ್ನು ದಾಖಲಿಸಬೇಕು ಎಂದರು.
ಹಿರಿಯ ಪತ್ರಕರ್ತ ಹಾಗೂ ಕೆಯುಡ್ಲ್ಯುಜೆ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಸರ್ಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ವಿವಿಧ ಇಲಾಖೆಗಳ ಮೂಲಕ ಜಾರಿಗೊಳಿಸಿ ಅನುಷ್ಠಾನಗೊಳಿಸುತ್ತಿದ್ದು, ಅದರಂತೆ ಆರೋಗ್ಯ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ಆಭಾ ಕಾರ್ಡ್ ಸಹ ಜನಸಾಮಾನ್ಯರಿಗೆ ಬಹಳ ಅನುಕೂಲಕರವಾದ ಯೋಜನೆಯಾಗಿದೆ.
ಈ ಯೋಜನೆಯನ್ನು ಜಿಲ್ಲೆಯ ಪತ್ರಕರ್ತರಿಗೂ ವಿಸ್ತರಿಸುತ್ತಿದ್ದು ಜಿಲ್ಲೆಯ ಪತ್ರಕರ್ತರಿಗೆ ಬಹಳ ಅನುಕೂಲವಾಗಲಿದೆ. ಸರ್ಕಾರದ ಯೋಜನೆಗಳನ್ನು ನಾವುಗಳು ಸದ್ಭಳಕೆ ಮಾಡಿಕೊಳ್ಳಬೇಕಿದ್ದು ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿ ನೋಂದಣಿ ಮಾಡಿಸಿಕೊಳ್ಳುವಂತೆ ಕರೆ ನೀಡಿದರು. ಜಿಲ್ಲೆಯ ಪರ್ತಕರ್ತರು ಸದರಿ ನೋಂದಣಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
Comments are closed.