ಸಾಮಾಜಿಕ ನ್ಯಾಯ ಬುಡಮೇಲು ಕೃತ್ಯ ಖಂಡನೀಯ

ಅಭಿವ್ಯಕ್ತಿ ಸ್ವಾತಂತ್ರ ಭಾರತದ ಪ್ರಜೆಗೆ ಇರುವ ದೊಡ್ಡ ಅಸ್ತ್ರ: ರವಿ ವರ್ಮಕುಮಾರ್

138

Get real time updates directly on you device, subscribe now.


ತುಮಕೂರು: ಅಹಿಂಸೆ ಪ್ರತಿಪಾದಿಸಿದ ಗಾಂಧಿಯ ಫೋಟೋದೊಂದಿಗೆ, ಹಿಂಸೆಯನ್ನು ಪ್ರತಿಪಾದಿಸಿದ, ಗಾಂಧಿಯನ್ನು ಕೊಲೆಗೆ ಸಹಕರಿಸಿದ ವ್ಯಕ್ತಿಯ ಭಾವಚಿತ್ರವನ್ನು ಸದನದಲ್ಲಿ ಹಾಕುವ ಮೂಲಕ ಸಾಮಾಜಿಕ ನ್ಯಾಯ ಬುಡಮೇಲು ಮಾಡುವ ಕೃತ್ಯ ನಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿ ವರ್ಮಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ರವೀಂದ್ರ ಕಲಾನಿಕೇತನದಲ್ಲಿ ನೆಲೆಸಿರಿ ಸಾಂಸ್ಕೃತಿಕ ವೇದಿಕೆ, ದರೈಸ್ತ್ರಿ ಕಲಾ ಟ್ರಸ್ಟ್, ಸೇವಾ ತುಮಕೂರು ಆಯೋಜಿಸಿದ್ದ ಭಾರತ್ ಜೋಡೋ ಪಾದಯಾತ್ರೆ, ಸಂಬಂಧಗಳ ಬೆಸುಗೆ ಬಹುತ್ವದ ನೆಲೆ ಎಂಬ ವಿಚಾರ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶೋಷಿತ ಸಮುದಾಯಗಳಿಗೆ ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಭಾರತದಲ್ಲಿ ಇಂದು ಇಡಬ್ಲ್ಯುಎಸ್ ಹೆಸರಿನಲ್ಲಿ ಸಾಮಾಜಿಕ ನ್ಯಾಯಕ್ಕೆ ತದ್ವಿರುದ್ಧವಾದ ಕಾಯ್ದೆ ಜಾರಿಗೆ ತರುವ ಮೂಲಕ ಸಂವಿಧಾನ ಬುಡಮೇಲು ಮಾಡುವ ಕೆಲಸ ನಡೆದಿದೆ ಎಂದರು.

ಮೈಸೂರು ಸಂಸ್ಥಾನ 1972ರಲ್ಲಿ ಜಾತಿ ಜನಗಣತಿ ನಡೆಸಿ ಕೆಲವೇ ಮಂದಿ ಜನರ ತೆರಿಗೆ ಹಣದ ಪಾಲನ್ನು ಸರಕಾರಿ ನೌಕರಿಯ ನೆಪದಲ್ಲಿ ಪಡೆಯುತ್ತಿರುವುದನ್ನು ಮನಗಂಡು ಮೊಟ್ಟ ಮೊದಲ ಬಾರಿಗೆ 1874ದಲ್ಲಿ ಸರಕಾರದ ಹುದ್ದೆಗಳಲ್ಲಿ ಮೀಸಲಾತಿ ಜಾರಿಗೆ ತಂದರು. ಆ ನಂತರದಲ್ಲಿ ಮಿಲ್ಲರ್ ಆಯೋಗದ ವರದಿ ಅನ್ವಯ ಆಡಳಿತದಲ್ಲಿ ಜಾತಿವಾರು ಪ್ರಾತಿನಿಧ್ಯ ಕಲ್ಪಿಸಲಾಯಿತು. ಇದನ್ನು ಯಥಾವತ್ತಾಗಿ ಭಾರತದ ಸಂವಿಧಾನದಲ್ಲಿಯೂ ಅಳವಡಿಸಿಕೊಳ್ಳಲಾಯಿತು. ಇದರ ಮಹತ್ವ ಅರಿತ ವಿಶ್ವದ ಅನೇಕ ರಾಷ್ಟ್ರಗಳು ಸಹ ಇದನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ನ್ಯಾಯದಲ್ಲಿ ಭಾರತವನ್ನು ವಿಶ್ವಗುರುವಾಗಿ ಪರಿಗಣಿಸಿದ್ದವು. ಕೇವಲ 1 ದಿನದಲ್ಲಿ ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ಹೆಸರಿನಲ್ಲಿ ಶೇ.4 ರಷ್ಟು ಜನರಿಗೆ ಶೇ.10ರ ಮೀಸಲಾತಿ ನೀಡಿ, ಸಾಮಾಜಿಕ ನ್ಯಾಯದ ವಿಶ್ವಗುರು ಪಟ್ಟವನ್ನು ಮಣ್ಣುಪಾಲು ಮಾಡುವ ಕೆಲಸವನ್ನು ಸ್ವಯಂ ಘೋಷಿತ ವಿಶ್ವಗುರುಗಳ ನೇತೃತ್ವದ ಸರಕಾರ ಮಾಡುವ ಮೂಲಕ ಶೂದ್ರ ಸಮುದಾಯಗಳ ಬೆಳವಣಿಗೆಗೆ ಕೊಡಲಿ ಪೆಟ್ಟು ನೀಡಿದವು ಎಂದು ಪ್ರೊ.ರವಿವರ್ಮಕುಮಾರ್ ನುಡಿದರು.

ಅಭಿವ್ಯಕ್ತಿ ಸ್ವಾತಂತ್ರವೆಂಬುದು ಭಾರತದ ಪ್ರಜೆಗೆ ಇರುವ ಬಹುದೊಡ್ಡ ಅಸ್ತ್ರ. ಆದರೆ ಕೆಲ ವರ್ಷಗಳಿಂದ ಕಾಶ್ಮೀರ ಜನತೆಗೆ ಅಭಿವ್ಯಕ್ತಿ ಸ್ವಾತಂತ್ರ ಮರೀಚಿಕೆಯಾಗಿದೆ. ಇಂಟರ್ನೆಟ್, ಮೊಬೈಲ್ ನೆಟ್ವರ್ಕ್ಗಳನ್ನು ಸ್ಥಗಿತಗೊಳಿಸಿ ಅಲ್ಲಿನ ಜನರ ಹಕ್ಕುಗಳನ್ನು ಕಸಿಯಲಾಗಿದೆ. ಇದರ ವಿರುದ್ಧ ಅನೇಕ ದೂರು ಸುಪ್ರಿಂ ಕೋರ್ಟ್ನಲ್ಲಿ ದಾಖಲಾದರೂ ಇದುವರೆಗೂ ವಿಚಾರಣೆ ಕೈಗೆತ್ತಿಕೊಂಡಿಲ್ಲ. ಸಂವಿಧಾನಿಕ ಸಂಸ್ಥೆಗಳಾದ ಆರ್ಬಿಐ, ಚುನಾವಣಾ ಆಯೋಗವನ್ನು ನಿಷ್ಕ್ರಿಯಗೊಳಿಸುವ ವ್ಯವಸ್ಥಿತ ಸಂಚು ನಡೆದಿದೆ. ಹಾಗಾಗಿ ನ್ಯಾಯಾಧೀಶರ ನೇಮಕದಲ್ಲಿಯೂ ಮೀಸಲಾತಿ ಬಳಕೆಯಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.

ಭಾರತ ಜೋಡೋ ಯಾತ್ರೆ ಎಂಬುದು ಓರ್ವ ನಾಯಕ ತನ್ನ ದೇಶ, ಅದರಲ್ಲಿ ಬದುಕಿರುವ ಜನರ ಕಷ್ಟ, ಸುಖ ಅರಿಯಲು ಕಂಡುಕೊಂಡ ಮಾರ್ಗ ಎನ್ನಬಹುದು. ಇದು ಕೇವಲ ರಾಹುಲ್ಗಾಂಧಿ ಒಬ್ಬರು ಕೈಗೊಂಡ ಯಾತ್ರೆಯಲ್ಲ. ಜನರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಬಂದ ಹೊಸ ಮಾರ್ಗ. ಹಾಗಾಗಿ ನಾನು ಈ ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ಗಾಂಧಿ ಅವರೊಂದಿಗೆ ಸಂವಾದ ನಡೆಸಿ ಹಲವಾರು ಸಮಸ್ಯೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದೆ. ಚುನಾವಣೆ ಹೊಸ್ತಿಲಿನಲ್ಲಿ ನಾವು ಇವುಗಳನ್ನು ಮೆಲುಕು ಹಾಕುವ ಮೂಲಕ ನಮಗೆ ಎಂತಹ ನಾಯಕ ಬೇಕು ಎಂಬ ಸ್ಪಷ್ಟತೆ ಕಂಡುಕೊಳ್ಳುವ ಎಂದರು.

ಒಂದೆಡೆ ಸಂಸ್ಥೆಯ ಸಂಸ್ಥಾಪಕರಾದ ಅಕ್ಕೈ ಪದ್ಮಶಾಲಿ ಮಾತನಾಡಿ, ಇಂದು ದೇಶದೆಲ್ಲೆಡೆ ನಡೆಯುತ್ತಿರುವ ರಾಜಕೀಯ, ಆರ್ಥಿಕ ತಾರತಮ್ಯ, ಅನ್ಯಾಯದ ವಿರುದ್ಧ ಹಾಗೂ ದೇಶದ ಐಕ್ಯತೆಗಾಗಿ ರಾಹುಲ್ ಕಂಡುಕೊಂಡು ಮಾರ್ಗವೇ ಭಾರತ್ ಜೋಡೊ ಯಾತ್ರೆಯಾಗಿದೆ. ಸಿಎಎ, ಎನ್ಐಎ ಮೂಲಕ ಒಂದು ಸಮುದಾಯವನ್ನು ಆಳುವ ವರ್ಗ ಗುರಿ ಮಾಡಿಕೊಂಡಿದ್ದರೂ ಧೀರ್ಘ ಕಾಲದಲ್ಲಿ ಇದರಿಂದ ಸಂಕಷ್ಟಕ್ಕೆ ಒಳಗಾಗುವವರಲ್ಲಿ ಹಿಂದುಳಿದ ವರ್ಗದವರು, ದಲಿತರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಆಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರಿಗೆ ತಂದೆ, ತಾಯಿ ಯಾರು ಎಂಬುದೇ ಗೊತ್ತಿರುವುದಿಲ್ಲ. ಹೀಗಿರುವಾಗ ಐದಾರು ತಲೆ ಮಾರುಗಳ ದಾಖಲೆ ಒದಗಿಸಲು ಸಾಧ್ಯವೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಂತಕ ಕೆ.ದೊರೆರಾಜು ಮಾತನಾಡಿ, ಅಸ್ಪಷ್ಯತೆಯಿರುವ ದೇಶದಲ್ಲಿ ರಾಹುಲ್ಗಾಂಧಿ ಅಸ್ಪಷ್ಯರ ಹೆಗಲ ಮೇಲೆ ಕೈ ಹಾಕಿದ್ದಾರೆ ಎಂಬುದು ಜನರ ಮನಸ್ಸಿನೊಳಗೆ ದೊಡ್ಡ ಸಂಚಲನ ಉಂಟು ಮಾಡಿದೆ. ದುಡಿಯುವ ವರ್ಗ, ಮಹಿಳೆಯರು ಜೀವ ಕೈಯಲ್ಲಿಡು ಬದುಕುತ್ತಿರುವ ಈ ಕಾಲದಲ್ಲಿ ನಿಮ್ಮದೊಂದಿಗೆ ನಾವಿದ್ದೇವೆ ಎಂದು ಹೇಳುವ ಮೂಲಕ ಭಾರತ ಜೋಡೋ ಯಾತ್ರೆ ಮನುಷ್ಯರ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಿದೆ. ಜನರು ಪಾಲ್ಗೊಳ್ಳುವಿಕೆಯ ಮೂಲಕ ಭಾರತ ಸಂವಿಧಾನವನ್ನು ಪುನರ್ ಸ್ಥಾಪಿಸಬೇಕಿದೆ ಎಂದರು.

ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ಪ್ರಗತಿಪರ ಕೃಷಿಕ ಅಣೆಕಟ್ಟೆ ವಿಶ್ವನಾಥ್, ದಲಿತ ಮುಖಂಡ ಮುರುಳಿ ಕುಂದೂರು, ನಟರಾಜಪ್ಪ ವಕೀಕೆ ರಶ್ಮಿ,ಮಲ್ಲಿಕಾ ಬಸವರಾಜು, ಅಕ್ಕಯ್ಯಮ್ಮ, ಬಾ.ಹ.ರಮಾಕುಮಾರಿ, ಡಾ.ಅರುಂಧತಿ, ಕವಿತಾ ಕಮ್ಮನಕೋಟೆ, ಡಾ.ಬಸವರಾಜು, ನರಸೀಯಪ್ಪ, ದಲಿತ ಮುಖಂಡ ನರಸಿಂಹಯ್ಯ, ಉಪನ್ಯಾಸಕ ಮಧುಸೂಧನ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!