ತುಮಕೂರು: ಸಂಗೀತ, ನಾಟಕ, ಯಕ್ಷಗಾನ ದಂತಹ ಲಲಿತ ಕಲೆ ಮನುಷ್ಯನಲ್ಲಿ ನೈತಿಕ ಪ್ರಜ್ಞೆ ಮೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರ ಗ್ರಾಮಾಂತರದ ಮೈದಾಳ ಗ್ರಾಮದ ಶ್ರೀಶಿವ ಶೈಕ್ಷಣಿಕ ಆಶ್ರಯದಲ್ಲಿ ವಿನಾಯಕ ಸಾಂಸ್ಕೃತಿಕ ಕಲಾ ಸಂಘ ಬೆಜ್ಜಿಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಸುಧಾ ಸೌರಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ನಾನು ನಿಮ್ಮೆದುರು ನಿಂತು ಮಾತುನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಚಿಕ್ಕಂದಿನಲ್ಲಿ ನೋಡಿದ ಯಕ್ಷಗಾನ, ಬಯಲಾಟ ಕಾರ್ಯಕ್ರಮಗಳೇ ಸ್ಫೂರ್ತಿ. ಅವುಗಳು ನಿಮಗೆ ಗೊತ್ತಿಲ್ಲದೆ ನಿಮ್ಮೊಳಗೆ ಒಳ್ಳೆಯ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗುತ್ತವೆ ಎಂದರು.
ಅರಣ್ಯ ಇಲಾಖೆಯ ನೌಕರರಾಗಿದ್ದ ಲೇಪಾಕ್ಷಯ್ಯ ಅವರು ಅನಾಥ ಮಕ್ಕಳಿಗೆ ಇಂತಹ ಒಳ್ಳೆಯ ವಾತಾವರಣದಲ್ಲಿ ಆಶ್ರಯ ನೀಡಿ, ಅವರ ಶೈಕ್ಷಣಿಕ ಬೆಳೆವಣಿಗೆಗೆ ಅವಕಾಶ ಕಲ್ಪಿಸಿರುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯವಾಗಿದೆ. ಎಷ್ಟೋ ಮಕ್ಕಳಿಗೆ ಇಂದಿಗೂ ಓದುವ ಅವಕಾಶಗಳೇ ಇಲ್ಲ. ನಿಮ್ಮ ಬದುಕು ಉಜ್ವಲಗೊಳಿಸಿಕೊಳ್ಳಲು ಇಲ್ಲಿ ಉತ್ತಮ ವೇದಿಕೆಯನ್ನು ಶ್ರೀಶಿವ ಶೈಕ್ಷಣಿಕ ಆಶ್ರಮ ಒದಗಿಸಿಕೊಟ್ಟಿದೆ. ಇದರ ಸದುಪಯೋಗ ಮಕ್ಕಳು ಮಾಡಿಕೊಂಡು ತಮ್ಮ ಕಾಲ ಮೇಲೆ ತಾವು ನಿಲ್ಲುವಂತಹ ಬದುಕನ್ನು ರೂಢಿಸಿಕೊಳ್ಳುವಂತೆ ಸಿಇಓ ಡಾ.ಕೆ.ವಿದ್ಯಾಕುಮಾರಿ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಲದಿ ರಾಜಣ್ಣ, ಕಲಾಶ್ರೀ ಡಾ.ಲಕ್ಷ್ಮಣದಾಸ್, ಕಲಾವಿದರಾದ ದಿಬ್ಬೂರು ಮಂಜು, ಮಲ್ಲಿಕಾರ್ಜುನ ಕೆಂಕೆರೆ, ಕವಯತ್ರಿ ಕಮಲ ರಾಜೇಶ್, ಮಹಿಳಾ ಸಾಂತ್ವಾನ ಕೇಂದ್ರದ ಪಾವರ್ತಮ್ಮ ರಾಜಕುಮಾರ್, ಶಿವ ಶೈಕ್ಷಣಿಕ ಆಶ್ರಮದ ಲೇಪಾಕ್ಷಯ್ಯ, ಶ್ರೀವಿನಾಯಕ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಬಿ.ಟಿ.ರಾಜಣ್ಣ ಇತರರು ಇದ್ದರು.
ಕಾರ್ಯಕ್ರಮದ ನಂತರ ಸಂಗೀತ ಸುಧಾ ಸೌರಭದಲ್ಲಿ ಪ್ರಖ್ಯಾತ ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್ ಅವರಿಂದ ಹರಿಕಥೆ, ಸ್ವರಸಿಂಚಿನ ಸುಗುಮ ಸಂಗೀತದ ಕೆಂಕೆರೆ ಮಲ್ಲಿಕಾರ್ಜುನ ತಂಡದಿಂದ ಸುಗಮ ಸಂಗೀತ, ದಿಬ್ಬೂರು ಮಂಜು ಮತ್ತು ತಂಡದಿಂದ ಭಕ್ತಿಗೀತೆ, ಚಲ್ಲಯ್ಯ ಮತ್ತು ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ ಜರುಗಿದವು.
Comments are closed.