ತುಮಕೂರು: ಪಾವಗಡ ತಾಲ್ಲೂಕಲ್ಲಿ ಕಾಂಗ್ರೆಸ್ ಶಾಕರನ್ನು ಬದಲಿಸಬೇಕು. 2023ರ ವಿಧಾನಸಭೆ ಚುನಾವಣೆಗೆ ವೆಂಕಟರಮಣಪ್ಪ ಹಾಗೂ ಅವರ ಪುತ್ರ ವೆಂಕಟೇಶ್ಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾದು. ಹೊಸ ಅಭ್ಯರ್ಥಿಗೆ ಈ ಬಾರಿ ಟಿಕೆಟ್ ನೀಡಬೇಕು ಎಂದು ಪಾವಗಡದ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ನಾಯಕರಿಗೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಶಾಸಕ ವೆಂಕಟರಮಣಪ್ಪ ಹಾಗೂ ಅವರ ಪುತ್ರ ವೆಂಕಟೇಶ್ ಸ್ವಾರ್ಥದ ರಾಜಕಾರಣ ಮಾಡುತ್ತಿದ್ದಾರೆ. ಇವರಿಂದ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಇವರದ್ದು ದರ್ಪ ಹಾಗೂ ದೌರ್ಜನ್ಯದ ರಾಜಕಾರಣ ಎಂದು ಆಕ್ರೋಶ ಹೊರ ಹಾಕಿದರು.
ತಾಲ್ಲೂಕಿನಲ್ಲಿ ಶಾಸಕರ ಬದಲಾವಣೆ ಮಾಡುವ ಇಚ್ಚೆ ಇದೆ. ಸಾಕಷ್ಟು ನಾಯಕರು ಇದ್ದು, ಸಾಮಾಜಿಕ ನ್ಯಾಯದಡಿ ಬೇರೆಯವರಿಗೆ ಅವಕಾಶ ನೀಡಬೇಕು. ಬಹಷ್ಟು ಮಂದಿ ಆಕಾಂಕ್ಷಿ ಅಭ್ಯರ್ಥಿಗಳು ಇದ್ದಾರೆ. ಉತ್ತಮ ನಾಯಕನಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ನಿಷ್ಠಾವಂತ ಕಾರ್ಯಕರ್ತರಿಗೆ ತಾಲ್ಲೂಕಿನಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ನಿಷ್ಠಾವಂತರನ್ನು ಮೂಲೆಗುಂಪು ಮಾಡಲಾಗಿದೆ. ಎಲ್ಲಾ ಹುದ್ದೆಗಳನ್ನು ಅಪ್ಪ ಮಗನ ಕುಟುಂಬ, ಬಂಧು ಬಳಗದವರೇ ಪಡೆಯುತ್ತಿದ್ದಾರೆ. ಶಾಸಕ ಮತ್ತು ಅವರ ಪುತ್ರ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಳಿ ದೂರು ನೀಡಲಾಗಿದೆ. ನಮ್ಮ ದೂರಿಗೆ ಸ್ಪಂದಿಸಿ ಮುಂದಿನ ಬಾರಿ ಬೇರೆಯವರಿಗೆ ಟಿಕೆಟ್ ನೀಡಬೇಕು. ಇಲ್ಲವಾದಲ್ಲಿ ನಾವು ಕಾಂಗ್ರೆಸ್ ಪರ ಕೆಲಸ ಮಾಡಲ್ಲ ಎಂದು ಹೇಳಿದರು.
ತಾಲ್ಲೂಕು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬಹಳ ಹಿಂದುಳಿದೆ. ಇಲ್ಲಿ ಗೆದ್ದಿರುವ ಶಾಸಕರು ಸ್ವಾರ್ಥ ರಾಜಕಾರಣ ಮಾಡುತ್ತಾ ಅಭಿವೃದ್ಧಿಯನ್ನೇ ಮರೆತಿದ್ದಾರೆ. ತಾಲ್ಲೂಕಲ್ಲಿ ಟೆಕ್ನಿಕಲ್ ಕೋರ್ಸ್ಗಳು ಇಲ್ಲ. ಉತ್ತಮ ಕಾಲೇಜುಗಳು ಇಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ತಾಲ್ಲೂಕಿನ ಅಭಿವೃದ್ಧಿಗಾಗಿ ಈ ಬಾರಿ ಶಾಸಕರು ಬದಲಾಗಬೇಕು. ಇದಕ್ಕಾಗಿ ಸಮಾನ ಮನಸ್ಕ ನಾಯಕರು ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಮುಖಂಡರಾದ ನಾಗೇಂದ್ರಪ್ಪ, ಗೋಪಾಲರೆಡ್ಡಿ, ಕೆಂಚಮಾರಯ್ಯ, ತಮ್ಮಣ್ಣ, ಮೈಲಾರರೆಡ್ಡಿ, ಜಗನ್ನಾಥ್, ಕೋರ್ಟ್ ನರಸಪ್ಪ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.
Comments are closed.