ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆ

195

Get real time updates directly on you device, subscribe now.


ತುಮಕೂರು: ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕರ್ನಾಟಕ ರಾಜ್ಯದ ಜನತೆ 2023ರ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಸಮಾಜವಾದಿ ಪಾರ್ಟಿಯ ರಾಜ್ಯಾಧ್ಯಕ್ಷ ಮಂಜಪ್ಪ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರಕಾರದಿಂದ ಅಭಿವೃದ್ಧಿ ಎಂಬುದು ಕುಂಠಿತವಾಗಿದ್ದು, ಎಲ್ಲಾ ವಿಭಾಗಗಳಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದಾಗಿ ರಾಜ್ಯ ಅಭಿವೃದ್ಧಿಯಲ್ಲಿ ಮತ್ತಷ್ಟು ಹಿಂದಕ್ಕೆ ಜಿಗಿದಿದೆ ಎಂದರು.

ಸಾರ್ವಜನಿಕರೇ ಹೇಳುವಂತೆ ಬಿಜೆಪಿ ಸರಕಾರದಲ್ಲಿ ಕಾಮಗಾರಿಯ ಬಿಲ್ ಪಡೆಯಲು ಶೇ.40 ರಷ್ಟು ಕಮಿಷನ್, ಉದ್ಯೋಗ ಪಡೆಯಲು 5 ಲಕ್ಷದಿಂದ 1.50 ಕೋಟಿಯಷ್ಟು ಲಂಚ ನೀಡಬೇಕಾಗಿದೆ. ಕಮಿಷನ್ ಸ್ಥಿತಿಯಿಂದಾಗಿ ಸರಕಾರದಿಂದ ಮಾಡಿರುವ ಎಲ್ಲಾ ಕಾಮಗಾರಿ ಕಳಪೆಯಿಂದ ಕೂಡಿದ್ದು, ಒಂದು ಸಣ್ಣ ಮಳೆ ಬಂದರೂ ತಡೆದುಕೊಳ್ಳದ ಸ್ಥಿತಿ ತಲುಪಿವೆ. ಇದಕ್ಕೆಲ್ಲಾ ಕಾರಣ ಭ್ರಷ್ಟಾಚಾರ, ಇದರಿಂದ ರಾಜ್ಯದ ಜೊತೆಗೆ ರೋಸಿ ಹೋಗಿ, ಬದಲಾವಣೆ ಬಯಸಿದ್ದಾರೆ. ಹಾಗಾಗಿ ಕಳೆದ ಐದು ವರ್ಷಗಳ ಕಾಲ ಉತ್ತರ ಪ್ರದೇಶದಲ್ಲಿ ಉತ್ತಮ ಆಡಳಿತ ನೀಡಿ, ಆ ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮಾಜವಾದಿ ಪಕ್ಷಕ್ಕೆ ಮತದಾರರು ಆಶೀರ್ವಾದ ಮಾಡುವ ಮೂಲಕ ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೊಗಲು ಸಹಕರಿಸುವಂತೆ ಸಮಾಜವಾದಿ ಪಾರ್ಟಿಯ ರಾಜ್ಯಾಧ್ಯಕ್ಷ ಮಂಜಪ್ಪ ಮನವಿ ಮಾಡಿದರು.

ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ಸಿ.ಪರಮೇಶ್ವರಯ್ಯ ಮಾತನಾಡಿ, ಮುಂಬರುವ 2023ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು, ಸಭ್ಯ, ಸಜ್ಜನ ಮತ್ತು ಪ್ರಾಮಾಣಿಕ ವ್ಯಕ್ತಿಗಳನ್ನು ಪಕ್ಷದ ಅಭ್ಯರ್ಥಿಗಳನ್ನಾಗಿ ಮಾಡಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜವಾದಿ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ಹಿತೇಶ್, ನಗರ ಘಟಕದ ಅಧ್ಯಕ್ಷ ನವ ದೀಪಕ್, ಕೊರಟಗೆರೆ ಅಧ್ಯಕ್ಷ ನಾಗರಾಜಯ್ಯ, ಮಧುಗಿರಿ ತಾಲೂಕು ಅಧ್ಯಕ್ಷ ನಾಗೇಂದ್ರ, ತುಮಕೂರು ನಗರ ಅಧ್ಯಕ್ಷ ದೇವನೂರು ಪ್ರಮೋದ್, ವಕೀಲರಾದ ಕೊರಟಗೆರೆ ಹನುಮಂತರಾಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!